ವಚನ ದಾಸೋಹ
#ವಚನ:
#ಕಾಯ ನನ್ನದೆಂದು ನಚ್ಚಬೇಡಿರೋ,
ಜೀವ ನನ್ನದೆಂದು ನಚ್ಚಬೇಡಿರೋ.
ಕಾಯ ಜೀವವೆಂಬ ಪ್ರಕೃತಿಯನಳಿದು, ಶಿವಯೋಗದಲ್ಲಿ ನಿಂದು,
ನಿಶ್ಚಿಂತ ನಿರಾಕುಳ ನಿರ್ಭರಿತನಾಗಿರ್ದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
- ಶರಣ ಜಕ್ಕಣ್ಣಯ್ಯ
*ಅರ್ಥ:*
ಹಲವರಿಗೆ ದೇಹ, ಜೀವ(ಪ್ರಾಣ) ಶಾಶ್ವತ ಎನ್ನುವ ಭ್ರಮೆ ಇರುತ್ತದೆ. ಅಂಥವರಿಗೆ ಜಕ್ಕಣಯ್ಯನವರು ನಮ್ಮ ದೇಹ, ಜೀವ ಎರಡೂ ಶಾಶ್ವತವಲ್ಲ. ಅವುಗಳು ಅಳಿಯುವದು ಪ್ರಕೃತಿಗುಣ. ಅವು ಅಳಿಯುವ ಮೊದಲೇ ಶಿವಯೋಗದಲ್ಲಿ ನಿರತರಾಗಬೇಕು ಎನ್ನುವ ಸಂದೇಶ ನೀಡುವರು. ಶಿವಯೋಗ ಮಾಡುವ ಶರಣನು ನಿಶ್ಚಿಂತ ಅಂದರೆ ಯಾವುದೇ ಚಿಂತೆ ಇಲ್ಲದವ, ನಿರಾಕುಳ ಅಂದರೆ ಎಲ್ಲ ದುಃಖಗಳಿಂದ ಮುಕ್ತ , ದುಃಖರಹಿತ, ಆತಂಕವಿಲ್ಲದವ ಮತ್ತು ನಿರ್ಭರಿತ ಅಂದರೆ ಯಾವದೇ ಆವೇಶವಿಲ್ಲದೆ ಶೂನ್ಯದಲ್ಲಿ ಇರುವಾತ ನಾಗುತ್ತಾನೆ. ಶಿವಯೋಗವು ಆತ್ಮದರ್ಶನದ ಬೆಳಕನ್ನು ದಯಪಾಲಿಸುತ್ತದೆ. 12 ನೆಯ ಶತಮಾನದ ಶರಣರು ವಿವಿಧ ಯೋಗಗಳನ್ನು ಅರಿತು ಪ್ರಾವೀಣ್ಯತೆ ಪಡೆದು ಅವುಗಳಿಗಿಂತ ಭಿನ್ನವಾದ, ಅವುಗಳಿಗಿಂತ ಉತ್ತಮವಾದ, ಸರಳ ಸಹಜವಾದ, ಜನಸಾಮಾನ್ಯರಿಗೆ ಸಾಧ್ಯವಾಗುವ ಶಿವಯೋಗವನ್ನು ನಮಗೆ ನೀಡಿದ್ದಾರೆ. ಶಿವಯೋಗದಿಂದ ಭವಿ ಭಕ್ತನಾಗಿ ; ಭಕ್ತ ಶರಣನಾಗಿ; ಶರಣ ಲಿಂಗಾನುಭವಿ ಯಾಗುತ್ತಾನೆ. ನರ ಹರನಾಗುವ ಭಾಗ್ಯ ಪಡೆಯುತ್ತಾನೆ.
ಶಿವಯೋಗವೆಂದರೆ ಮನುಜನೇ ಮಹಾದೇವನಾಗುವ ಯೋಗ.
*ಶರಣರ ಪರಿಚಯ:*
ಶರಣ ಜಕ್ಕಣಯ್ಯ
ಜನ್ಮ ಸ್ಥಳ : ಧಾರವಾಡ
ಜಿಲ್ಲೆ : ಧಾರವಾಡ
ಕಾಲ : 1800
ಅಂಕಿತ : ಝೇಂಕಾರ ನಿಜಲಿಂಗಪ್ರಭುವೆ
ಲಭ್ಯ ವಚನಗಳ ಸಂಖ್ಯೆ : 778
ಕೃತಿಯ ವೈಶಿಷ್ಟ್ಯ : ಧರ್ಮದ ತಾತ್ತ್ವಿಕ ಸಿದ್ಧಾಂತದ ಕಡೆಗೆ ಹೆಚ್ಚಿನ ಒಲವು.
ಅಧಿಕ ಸಂಖ್ಯೆಯಲ್ಲಿ ವಚನಗಳನ್ನು ರಚಿಸಿದ್ದರೂ ಈತನ ಜೀವನದ ಬಗ್ಗೆ ಯಾವ ಸಂಗತಿಗಳೂ ದೊರಿತಿಲ್ಲ.'ಝೇಂಕಾರ ನಿಜಲಿಂಗ ಪ್ರಭುವೆ' ಅಂಕಿತದಲ್ಲಿ 778 ವಚನಗಳು ದೊರೆತಿವೆ. ಇವುಗಳನ್ನು 18 ಸ್ಥಲಗಳ ಅಡಿಯಲ್ಲಿ ಸಂಕಲಿಸಲಾಗಿದ್ದು, ಈ ಕೃತಿಗೆ 'ನಿರಾಳ ಮಂತ್ರಗೋಪ್ಯ' ಎಂದು ಕರೆಯಲಾಗಿದೆ. ಯೋಗ ರಹಸ್ಯವನ್ನು ಬೆಡಗಿನ ನುಡಿಗಳಲ್ಲಿ ಹೇಳುವುದು ಈ ವಚನಗಳ ಉದ್ದೇಶವಾಗಿದೆ.
ಲಿಂಗಾಯತದ ತಾತ್ತ್ವಿಕ ಸಿದ್ಧಾಂತದ ಕಡೆಗೆ ಹೆಚ್ಚಿನ ಒಲವು. ವಚನಗಳಲ್ಲಿ ಬೆಡಗಿನ ಬಳಕೆ ಹೆಚ್ಚು. ಇವನ ವಚನಗಳಲ್ಲಿ ವಜೀರ, ತಳವಾರ, ಹವಾಲ್ದಾರ, ಚಾವಡಿ, ಠಾಣೆ ಮೊದಲಾದ ಶಬ್ದಗಳು ಕಂಡುಬಂದಿವೆ
- ✍️ Dr Prema Pangi
#ಪ್ರೇಮಾ_ಪಾಂಗಿ, #ಶರಣ_ಜಕ್ಕಣ್ಣಯ್ಯ,
#ಕಾಯ_ನನ್ನದೆಂದು_ನಚ್ಚಬೇಡಿರೋ
Comments
Post a Comment