ವಚನ ದಾಸೋಹ

#ವಚನ :
#ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ,
ಧ್ಯಾನ, ಧಾರಣ, ಸಮಾಧಿ ಎಂದು
ಈಯೆಂಟು ಅಷ್ಟಾಂಗಯೋಗಂಗಳು.
ಈ ಯೋಗಂಗಳೊಳಗೆ ಉತ್ತರಭಾಗ, ಪೂರ್ವಭಾಗೆಯೆಂದು
ಎರಡು ಪ್ರಕಾರವಾಗಿಹವು.
ಯಮಾದಿ ಪಂಚಕವೈದು ಪೂರ್ವಯೋಗ;
ಧ್ಯಾನ, ಧಾರಣ, ಸಮಾಧಿಯೆಂದು ಮೂರು ಉತ್ತರಯೋಗ.
ಇವಕ್ಕೆ ವಿವರ:
ಇನ್ನು ಯಮಯೋಗ ಅದಕ್ಕೆ ವಿವರ:
ಅನೃತ, ಹಿಂಸೆ, ಪರಧನ, ಪರಸ್ತ್ರೀ, ಪರನಿಂದೆ
ಇಂತಿವೈದನು ಬಿಟ್ಟು
ಲಿಂಗಪೂಜೆಯ ಮಾಡುವುದೀಗ ಯಮಯೋಗ.
ಇನ್ನು ನಿಯಮಯೋಗ- ಅದಕ್ಕೆ ವಿವರ:
ಬ್ರಹ್ಮಚಾರಿಯಾಗಿ ನಿರಪೇಕ್ಷನಾಗಿ
ಆಗಮಧರ್ಮಂಗಳಲ್ಲಿ ನಡೆವವನು.
ಶಿವನಿಂದೆಯ ಕೇಳದಿಹನು.
ಇಂದ್ರಿಯಂಗಳ ನಿಗ್ರಹವ ಮಾಡುವವನು.
ಮಾನಸ, ವಾಚಸ, ಉಪಾಂಶಿಕವೆಂಬ ತ್ರಿಕರಣದಲ್ಲಿ
ಪ್ರಣವ ಪಂಚಾಕ್ಷರಿಯ ಸ್ಮರಿಸುತ್ತ ಶುಚಿಯಾಗಿಹನು.
ಆಶುಚಿತ್ತವ ಬಿಟ್ಟು ವಿಭೂತಿ ರುದ್ರಾಕ್ಷೆಯ ಧರಿಸಿ
ಶಿವಲಿಂಗಾರ್ಚನತತ್ಪರನಾಗಿ ಪಾಪಕ್ಕೆ ಭೀತನಾಗಿಹನು.
ಇದು ನಿಯಮಯೋಗ.
ಇನ್ನು ಆಸನಯೋಗ- ಅದಕ್ಕೆ ವಿವರ:
ಸಿದ್ಧಾಸನ, ಪದ್ಮಾಸನ, ಸ್ವಸ್ತಿಕಾಸನ, ಅರ್ಧಚಂದ್ರಾಸನ,
ಪರ್ಯಂಕಾಸನ ಈ ಐದು ಆಸನಯೋಗಂಗಳಲ್ಲಿ
ಸ್ವಸ್ಥಿರಚಿತ್ತನಾಗಿ ಮೂರ್ತಿಗೊಂಡು
ಶಿವಲಿಂಗಾರ್ಚನೆಯ ಮಾಡುವುದೀಗ ಆಸನಯೋಗ.
ಇನ್ನು ಪ್ರಾಣಾಯಾಮ- ಅದಕ್ಕೆ ವಿವರ:
ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ,
ಕೃಕರ, ದೇವದತ್ತ, ಧನಂಜಯವೆಂಬ ದಶವಾಯುಗಳು.
ಇವಕ್ಕೆ ವಿವರ:
ಪ್ರಾಣವಾಯು ಇಂದ್ರ ನೀಲವರ್ಣ.
ಹೃದಯಸ್ಥಾನದಲ್ಲಿರ್ದ
ಉಂಗುಷ್ಠತೊಡಗಿ ವಾ[ಣಾ]ಗ್ರಪರಿಯಂತರದಲ್ಲಿ
ಸತ್ಪ್ರಾಣಿಸಿಕೊಂಡು ಉಚ್ಛಾಸ ನಿಶ್ವಾಸನಂಗೆಯ್ದು
ಅನ್ನ ಜೀರ್ಣಿಕರಣವಂ ಮಾಡಿಸುತ್ತಿಹುದು.
ಅಪಾನವಾಯು ಹರಿತವರ್ಣ.
ಗುಧಸ್ಥಾನದಲ್ಲಿರ್ದು
ಮಲಮೂತ್ರಂಗಳ ವಿಸರ್ಜನೆಯಂ ಮಾಡಿಸಿ
ಆಧೋದ್ವಾರಮಂ ಬಲಿದು
ಅನ್ನರಸ ವ್ಯಾಪ್ತಿಯಂ ಮಾಡಿಸುತ್ತಿಹುದು.
ವ್ಯಾನವಾಯು ಗೋಕ್ಷಿರವರ್ಣ.
ಸರ್ವಸಂದಿಗಳಲ್ಲಿರ್ದು
ನೀಡಿಕೊಂಡಿರ್ದುದನು ಮುದುಡಿಕೊಂಡಿರ್ದುದನು ಅನುಮಾಡಿಸಿ
ಅನ್ನಪಾನವ ತುಂಬಿಸುತ್ತಿಹುದು.
ಉದಾನವಾಯ ಎಳೆಮಿಂಚಿನವರ್ಣ.
ಕಂಠಸ್ಥಾನದಲ್ಲಿರ್ದು
ಸೀನುವ, ಕೆಮ್ಮುವ, ಕನಸ ಕಾಣುವ, ಏಳಿಸುವ
ಛದರ್ಿ ನಿರೋಧನಂಗಳಂ ಮಾಡಿ
ಅನ್ನ ರಸವ ಆಹಾರಸ್ಥಾನಂಗೆಯಿಸುತ್ತಿಹುದು.
ಸಮಾನವಾಯು ನೀಲವರ್ಣ.
ನಾಭಿಸ್ಥಾನದಲ್ಲಿರ್ದು
ಅಪಾದಮಸ್ತಕ ಪರಿಯಂತರ ದೇಹಮಂ ಪಸರಿಸಿಕೊಂಡಂಥಾ
ಅನ್ನರಸವನು
ಎಲ್ಲಾ[ಲೋ] ಮನಾಳಂಗಳಿಗೆ ಹಂಚಿಕ್ಕುವುದು.
ಈ ಐದು ಪ್ರಾಣಪಂಚಕ.
ಇನ್ನು ನಾಗವಾಯು ಪೀತವರ್ಣ.
[ಲೋ] ಮನಾಳಂಗಳಲ್ಲಿರ್ದು
ಚಲನೆಯಿಲ್ಲದೆ ಹಾಡಿಸುತ್ತಿಹುದು.
ಕೂಮವಾಯುವ ಶ್ವೇತವರ್ಣ.
ಉದರ ಲಲಾಟದಲ್ಲಿರ್ದು
ಶರೀರಮಂ ತಾಳ್ದು [ದೇಹಮಂ] ಪುಷ್ಟಿಯಂ ಮಾಡಿಕೊಂಡು
ಬಾಯ ಮುಚ್ಚುತ್ತ ತೆರೆವುತ್ತ ನೇತ್ರದಲ್ಲಿ
ಉನ್ಮೀಲನ ನಿಮೀಲನವಂ ಮಾಡಿಸುತ್ತಿಹುದು.
ಕೃಕರವಾಯು ಅಂಜನವರ್ಣ.
ನಾಸಿಕಾಗ್ರದಲ್ಲಿರ್ದು
ಕ್ಷುಧಾದಿ ಧರ್ಮಂಗಳಂ ನೆಗಳೆ
ಗಮನಾಗಮನಂಗಳಂ ಮಾಡಿಸುತ್ತಿಹುದು.
ದೇವದತ್ತವಾಯು ಸ್ಫಟಿಕವರ್ಣ.
ಗುಹ್ಯ[ಕಟಿ] ಸ್ಥಾನದಲ್ಲಿರ್ದು
ಕುಳ್ಳಿರ್ದಲ್ಲಿ ಮಲಗಿಸಿ, ಮಲಗಿರ್ದಲ್ಲಿ ಏಳಿಸಿ
ನಿಂದಿರಿಸಿ ಚೇತರಿಸಿ ಒರಲಿಸಿ ಮಾತಾಡಿಸುತ್ತಿಹುದು.
ಧನಂಜಯವಾಯು ನೀಲವರ್ಣ.
ಬ್ರಹ್ಮರಂಧ್ರದಲ್ಲಿರ್ದು
ಕರ್ಣದಲ್ಲಿ ಸಮುದ್ರಘೋಷಮಂ ಘೋಷಿಸಿ
ಮರಣಗಾಲಕ್ಕೆ ನಿಘರ್ೊಷಮಪ್ಪುದು.
ಈ ಪ್ರಕಾರದಲ್ಲಿ ಮೂಲವಾಯುವೊಂದೇ
ಸರ್ವಾಂಗದಲ್ಲಿ ಸರ್ವತೋಮುಖವಾಗಿ ಚರಿಸುತ್ತಿಹುದು.
ಆ ಪವನದೊಡನೆ ಪ್ರಾಣ ಕೂಡಿ
ಪ್ರಾಣದೊಡನೆ ಪವನ ಕೂಡಿ
ಹೃದಯ ಸ್ಥಾನದಲ್ಲಿ ನಿಂದು ಹಂಸನೆನಿಸಿಕೊಂಡು
ಆಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ,
ವಿಶುದ್ಧಿ, ಆಗ್ನೇಯ ಎಂಬ ಷಡುಚಕ್ರದಳಂಗಳಮೇಲೆ ಸುಳಿದು
ನವನಾಳಂಗಳೊಳಗೆ ಚರಿಸುತ್ತಿಹುದು.
ಅಷ್ಟದಳಂಗಳೇ ಆಶ್ರಯವಾಗಿ
ಅಷ್ಟದಳಂಗಳ ಮೆಟ್ಟಿ ಚರಿಸುವ ಹಂಸನು
ಅಷ್ಟದಳಂಗಳಿಂದ ವಿಶುದ್ಧಿಚಕ್ರವನೆಯ್ದಿ
ಅಲ್ಲಿಂದ ನಾಸಿಕಾಗ್ರದಲ್ಲಿ
ಹದಿನಾರಂಗುಲ ಪ್ರಮಾಣ ಹೊರಸೂಸುತ್ತಿಹುದು;
ಹನ್ನೆರಡಂಗುಲ ಪ್ರಮಾಣ ಒಳಗೆ ತುಂಬುತ್ತಿಹುದು.
ಹೀಂಗೆ ರೇಚಕ ಪೂರಕದಿಂದ ಮರುತ ಚರಿಸುತ್ತಿರಲು
ಸಮಸ್ತ್ರ ಪ್ರಾಣಿಗಳ ಆಯುಷ್ಯವು ದಿನ ದಿನಕ್ಕೆ ಕುಂದುತ್ತಿಹುದು.
ಹೀಂಗೆ ಈಡಾ ಪಿಂಗಳದಲ್ಲಿ ಚರಿಸುವ
ರೇಚಕ ಪೂರಕಂಗಳ ಭೇದವನರಿದು
ಮನ ಪವನಂಗಳ ಮೇಲೆ ಲಿಂಗವ ಸಂಬಂಧಿಸಿ
ಮನ ಪವನ ಪ್ರಾಣಂಗಳ ಲಿಂಗದೊಡನೆ ಕೂಡಿ
ಲಿಂಗ ಸ್ವರೂಪವ ಮಾಡಿ
ವಾಯು ಪ್ರಾಣತ್ವವ ಕಳೆದು ಲಿಂಗ ಪ್ರಾಣಿಯ ಮಾಡಿ
ಹೃದಯ ಕಮಲ ಮಧ್ಯದಲ್ಲಿ ಪ್ರಣವವನುಚ್ಚರಿಸುತ್ತ
ಪರಶಿವ ಧ್ಯಾನದಲ್ಲಿ ತರಹರವಾಗಿಪ್ಪುದೀಗ ಪ್ರಾಣಾಯಾಮ.
ಇನ್ನು ಪ್ರತ್ಯಾಹಾರಯೋಗ-ಅದಕ್ಕೆ ವಿವರ:
ಆಹಾರದಿಂ ನಿದ್ರೆ, ನಿದ್ರೆಯಿಂ ಇಂದ್ರಿಯಂಗಳು,
ಇಂದ್ರಿಯಂಗಳಿಂದ ವಿಷಯಂಗಳು ಘನವಾಗುತ್ತಿಹುವು ನೋಡಾ.
ಆ ವಿಷಯದಿಂದ ದುಃಕರ್ಮಗಳ ಮಿಗೆ ಮಾಡಿ
ಜೀವಂಗೆ ಭವ ಭವದ ಬಂಧನವನೊಡಗೂಡಿ
ಆಯಸಂ ಬಡುತ್ತಿಪ್ಪರಜ್ಞ್ಞಾನ ಕರ್ಮಿಗಳು;
ಈ ಅವಸ್ಥೆಯ ಹೊಗದಿಹರು ಸುಜ್ಞಾನಿ ಧರ್ಮಿಗಳು.
ಅದರಿಂದಲಾಹಾರಮಂ ಕ್ರಮ ಕ್ರಮದಿಂದ
ಉದರಕ್ಕೆ ಹವಣಿಸುತ್ತ ಬಹುದು.
ಗುರು ಕೃಪೆಯಿಂದ ಈ ಪ್ರಕಾರದಲ್ಲಿ
ಸರ್ವೆಂದ್ರಿಯಂಗಳನು ಲಿಂಗಮುಖದಿಂದ
ಸಾವಧಾನವ ಮಾಡಿಕೊಂಡಿಪ್ಪುದೀಗ ಪ್ರತ್ಯಾಹಾರಯೋಗ.
ಈ ಐದು ಪೂರ್ವಯೋಗಂಗಳು.
ಇನ್ನು ಧ್ಯಾನ, ಧಾರಣ, ಸಮಾಧಿಯೆಂದು ಮೂರು
ಉತ್ತರಯೋಗಂಗಳು.
ಇನ್ನು ಧ್ಯಾನಯೋಗ- ಅದಕ್ಕೆ ವಿವರ:
ಅಂತರಂಗದ ಶುದ್ಧ ಪರಮಾತ್ಮ ಲಿಂಗವನೇ
ಶಿವಲಿಂಗ ಸ್ವರೂಪವ ಮಾಡಿ
ಕರಸ್ಥಲಕ್ಕೆ ಶ್ರೀಗುರು ತಂದು ಕೊಟ್ಟನಾಗಿ
ಆ ಕರಸ್ಥಲದಲ್ಲಿದ್ದ ಶಿವಲಿಂಗವೇ
ಪರಮಾರ್ಥಚಿಹ್ನವೆಂದರಿದು
ಆ ಲಿಂಗವನೇ
ಆಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ,
ಆಜ್ಞೇಯ, ಬ್ರಹ್ಮರಂಧ್ರ ಮುಖ್ಯವಾದ ಸ್ಥಾನಂಗಳಲ್ಲಿ
ಆ ಶಿವಲಿಂಗಮೂರ್ತಿಯನೆ
ಆಹ್ವಾನ ವಿಸರ್ಜನೆಯಿಲ್ಲದೆ ಧ್ಯಾನಿಪುದೀಗ ಧ್ಯಾನಯೋಗ.
ಆ ಲಿಂಗವ ಭಾವ, ಮನ, ಕರಣ ಮುಖ್ಯವಾದ
ಸರ್ವಾಂಗದಲ್ಲಿ ಧರಿಸುವುದೀಗ ಧಾರಣಯೋಗ.
ಆ ಸತ್ಕ್ರಿಯಾ ಜ್ಞಾನಯೋಗದಿಂದ
ಪ್ರಾಣಂಗೆ ಶಿವಕಳೆಯ ಸಂಬಂಧಿಸಿ
ಇಷ್ಟ, ಪ್ರಾಣ, ಭಾವವೆಂಬ
ಲಿಂಗತ್ರಯವನು ಏಕಾಕಾರವ ಮಾಡಿ
ಅಖಂಡ ಪರಿಪೂರ್ಣ ಕೇವಲ ಪರಂಜ್ಯೋತಿ ಸ್ವರೂಪವಪ್ಪ
ಮಹಾಲಿಂಗದೊಳಗೆ ಸಂಯೋಗವಾಗಿ
ಭಿನ್ನವಿಲ್ಲದೆ ಏಕಾರ್ಥವಾಗಿಹುದೀಗ ಸಮಾಧಿಯೋಗ.
ಇಂತೀ ಅಷ್ಟಾಂಗಯೋಗದಲ್ಲಿ ಶಿವಲಿಂಗಾರ್ಚನೆಯ ಮಾಡಿ
ಶಿವತತ್ವದೊಡನೆ ಕೂಡುವುದೀಗ ಲಿಂಗಾಂಗಯೋಗ.
ಇನ್ನು ಕರ್ಮಕಾಂಡಿಗಳು ಮಾಡುವ ಕರ್ಮಯೋಗಂಗಳು-
ಅವಾವವೆಂದಡೆ:
ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರವೆಂಬ
ಈ ಐದನು ಲಿಂಗವಿರಹಿತವಾಗಿ ಮಾಡುತ್ತಿಪ್ಪರಾಗಿ
ಈ ಐದು ಕರ್ಮಯೋಗಂಗಳು.
ಅವರು ಲಕ್ಷಿಸುವಂಥಾ ವಸ್ತುಗಳು
ಉತ್ತರಯೋಗವಾಗಿ ಮೂರು ತೆರ.
ಅವಾವವೆಂದಡೆ:
ನಾದಲಕ್ಷ, ಬಿಂದುಲಕ್ಷ, ಕಲಾಲಕ್ಷ ವೆಂದು ಮೂರು ತೆರ.
ನಾದವೇ ಸಾಕ್ಷಾತ್ ಪರತತ್ವವೆಂದೇ ಲಕ್ಷಿಸುವರು.
ಬಿಂದುವೇ ಆಕಾರ, ಉಕಾರ, ಮಕಾರ,
ಈ ಮೂರು ಶುದ್ಧಬಿಂದು ಸಂಬಂಧವೆಂದೂ.
ಆ ಶುದ್ಧ ಬಿಂದುವೇ ಕೇವಲ ದಿವ್ಯ ಪ್ರಕಾಶವನುಳ್ಳದೆಂದೂ
ಲಕ್ಷಿಸುವರು.
ಕಲೆಯೇ ಚಂದ್ರನ ಕಲೆಯ ಹಾಂಗೆ,
ಸೂರ್ಯನ ಕಿರಣಂಗಳ ಹಾಂಗೆ,
ಮಿಂಚುಗಳ ಪ್ರಕಾಶದ ಹಾಂಗೆ,
ಮುತ್ತು, ಮಾಣಿಕ್ಯ, ನವರತ್ನದ ದೀಪ್ತಿಗಳ ಹಾಂಗೆ,
ಪ್ರಕಾಶಮಾಯವಾಗಿಹುದೆಂದು ಲಕ್ಷಿಸುವುದೀಗ ಕಲಾಲಕ್ಷ ್ಯ.
ಈ ಎಂಟು ಇತರ ಮತದವರು ಮಾಡುವ ಯೋಗಂಗಳು.
ಇವ ಲಿಂಗವಿರಹಿತವಾಗಿ ಮಾಡುವರಾಗಿ ಕರ್ಮಯೋಗಂಗಳು.
ಈ ಕರ್ಮಕೌಶಲ್ಯದಲ್ಲಿ ಲಿಂಗವಿಲ್ಲ ನೋಡಾ.
ಅದುಕಾರಣ ಇವ ಮುಟ್ಟಲಾಗದು.
ಇನ್ನು ವೀರಮಾಹೇಶ್ವರರುಗಳ ಲಿಂಗಸಂಧಾನವೆಂತೆಂದರೆ:
ಬ್ರಹ್ಮರಂಧ್ರದಲ್ಲಿಪ್ಪ ನಾದ ಚೈತನ್ಯವಪ್ಪ ಪರಮ ಚಿತ್ಕಲೆಯನೇ
ಭಾವ, ಮನ, ಕರದಲ್ಲಿ ಶ್ರೀಗುರು ತಂದು
ಸಾಹಿತ್ಯವ ಮಾಡಿದನಾಗಿ
ಭಾವದಲ್ಲಿ ಸತ್ತ್ವರೂಪವಪ್ಪ ಭಾವಲಿಂಗವೆನಿಸಿ,
ಪ್ರಾಣದಲ್ಲಿ ಚಿತ್ ಸ್ವರೂಪವಪ್ಪ ಪ್ರಾಣಲಿಂಗವೆನಿಸಿ,
ಕರಸ್ಥಲದಲ್ಲಿ ಆನಂದ ಸ್ವರೂಪವಪ್ಪ ಇಷ್ಟಲಿಂಗವೆನಿಸಿ,
ಒಂದೇ ವಸ್ತು ತನು, ಮನ, ಭಾವಂಗಳಲ್ಲಿ
ಇಷ್ಟ, ಪ್ರಾಣ, ಭಾವವಾದ ಭೇದವನರಿದು
ಇಷ್ಟಲಿಂಗವ ದೃಷ್ಟಿಯಿಂದ ಗ್ರಹಿಸಿ
ಪ್ರಾಣಲಿಂಗವ ಮನಜ್ಞಾನದಿಂದ ಗ್ರಹಿಸಿ
ತೃಪ್ತಿಲಿಂಗವ ಭಾವಜ್ಞಾನದಿಂದ ಗ್ರಹಿಸಿ
ಈ ಲಿಂಗತ್ರಯವಿಡಿದಾಚರಿಸಿ ಲಿಂಗದೊಡನೆ ಕೂಡಿ
ಲಿಂಗವೇ ತಾನು ತಾನಾಗಿ
ವಿರಾಜಿಸುತ್ತಿಪ್ಪುದೀಗ ಶಿವಯೋಗ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. / 553 
- ತೋಂಟದ ಸಿದ್ಧಲಿಂಗೇಶ್ವರ ಯತಿಗಳು 
  (ಎಡಿಯೂರು ಸಿದ್ಧಲಿಂಗೇಶ್ವರರು)

*ಅರ್ಥ*:
ಯಮ, ನಿಯಮ, ಆಸನ, ಪ್ರಾಣಾಯಾಮ
ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಎಂದು ಎಂಟು ಅಷ್ಟಾಂಗಯೋಗಗಳು. ಈ ಯೋಗದಲ್ಲಿ ಉತ್ತರಭಾಗ, ಪೂರ್ವಭಾಗಯೆಂದು ಎರಡು ಪ್ರಕಾರಗಳು.
1)ಪೂರ್ವಯೋಗ : ಐದು
ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ  
2)ಉತ್ತರಯೋಗ : ಮೂರು
ಧ್ಯಾನ, ಧಾರಣ, ಸಮಾಧಿ 

*ಯಮ*:
ಅನೃತ(ಸುಳ್ಳು ಹೇಳುವುದು), ಹಿಂಸೆ, ಪರಧನ, ಪರಸ್ತ್ರೀ, ಪರನಿಂದೆ ಐದು ಬಿಟ್ಟು ಲಿಂಗಪೂಜೆ ಮಾಡುವುದು.

*ನಿಯಮ*:
ಬ್ರಹ್ಮಚಾರಿಯಾಗಿ ನಿರಪೇಕ್ಷನಾಗಿ ನಡೆವವನು.
ಶಿವನಿಂದೆಯ ಕೇಳದಿಹನು. 
ಇಂದ್ರಿಯಗಳನ್ನು ನಿಗ್ರಹವ ಮಾಡುವವನು. 
ಮಾನಸ ವಾಚಸ ಉಪಾಂಶಿಕವೆಂಬ ತ್ರಿಕರಣದಲ್ಲಿ ಪ್ರಣವ ಪಂಚಾಕ್ಷರಿಯ ಸ್ಮರಿಸುತ್ತ ಶುಚಿಯಾಗಿಹನು. 
ಅಶುಚಿತ್ವವ ಬಿಟ್ಟು ವಿಭೂತಿ ರುದ್ರಾಕ್ಷೆಯ ಧರಿಸಿ ಶಿವಲಿಂಗಾರ್ಚನೆಯಲ್ಲಿ ತತ್ಪರನಾಗಿರುವವನು.

*ಆಸನ*:
ಸಿದ್ಧಾಸನ, ಪದ್ಮಾಸನ, ಸ್ವಸ್ತಿಕಾಸನ,
ಅರ್ಧಚಂದ್ರಾಸನ, ಪರ್ಯಂಕಾಸನ ಈ ಐದು ಆಸನಗಳಲ್ಲಿ ಸ್ವಸ್ಥಿರಚಿತ್ತನಾಗಿ ಶಿವಲಿಂಗಾರ್ಚನೆಯ ಮಾಡುವುದು.

*ಪ್ರಾಣಾಯಾಮ* :
ದಶವಾಯುಗಳು : 
ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ
ನಾಗ, ಕೂರ್ಮ, ಕೃಕರ, ದೇವದತ್ತ,
ಧನಂಜಯವೆಂಬ ಹತ್ತು ದಶವಾಯುಗಳು.
ಮೊದಲಿನ ಐದು ಪ್ರಾಣಪಂಚಕಗಳು.
1.ಪ್ರಾಣವಾಯು: 
ಇಂದ್ರ ನೀಲವರ್ಣ. 
ಹೃದಯಸ್ಥಾನ
ಉಂಗುಷ್ಠತೊಡಗಿ ವಾಣಾಗ್ರಪರಿಯಂತರದಲ್ಲಿ ಸತ್ಪ್ರಾಣಿಸಿಕೊಂಡು ಉಚ್ಛ್ವಾಸ  ನಿಶ್ವಾಸ ಮಾಡಿ ಅನ್ನ ಜೀರ್ಣೀಕರಣ ಮಾಡಿಸುತ್ತಿಹುದು. 

2.ಅಪಾನವಾಯು:
 ಹರಿತವರ್ಣ. 
ಗುದಸ್ಥಾನ
ಮಲಮೂತ್ರಂಗಳ ವಿಸರ್ಜನೆ ಮಾಡಿಸಿ ಆಧೋದ್ವಾರವನ್ನು  ಬಲಿದು ಅನ್ನರಸ ವ್ಯಾಪ್ತಿಯ ಮಾಡಿಸುತ್ತಿಹುದು.

3.ವ್ಯಾನವಾಯು: 
ಗೋಕ್ಷಿರವರ್ಣ. 
ಸರ್ವಸಂದಿ ನೀಡಿಕೊಂಡಿರ್ದುದನು ಮುದುಡಿಕೊಂಡಿರ್ದುದನು ಅನುಮಾಡಿಸಿ ಅನ್ನಪಾನವ ತುಂಬಿಸುತ್ತಿಹುದು. 

4.ಉದಾನವಾಯು:
ಎಳೆ ಮಿಂಚಿನ ವರ್ಣ. 
ಕಂಠಸ್ಥಾನ
ಸೀನುವ ಕೆಮ್ಮುವ ಕನಸ ಕಾಣುವ
ಏಳಿಸುವ ಛರ್ದಿ ನಿರೋಧನ ಮಾಡಿ ಅನ್ನರಸವ ಆಹಾರಸ್ಥಾನಕ್ಕೆ ಕಳಿಸುತ್ತಿಹುದು.

5.ಸಮಾನವಾಯು; 
ನೀಲವರ್ಣ. 
ನಾಭಿಸ್ಥಾನ
ಆಪಾದಮಸ್ತಕ ಪರಿಯಂತರ ದೇಹಮಂ ಪಸರಿಸಿಕೊಂಡಂಥಾ ಅನ್ನರಸವನು ಎಲ್ಲಾ ಲೋಮನಾಳಗಳಿಗೆ ಹಂಚುವುದು. 
ಈ ಐದು ಪ್ರಾಣಪಂಚಕಗಳು. 

6. ನಾಗವಾಯು 
ಪೀತವರ್ಣ. 
ಲೋಮನಾಳ
ಚಲನೆಯಿಲ್ಲದೆ ಹಾಡಿಸುತ್ತಿಹುದು. 

7.ಕೂರ್ಮವಾಯು 
ಶ್ವೇತವರ್ಣ. 
ಉದರ ಲಲಾಟ
 ಶರೀರ ತಾಳ್ದು ದೇಹ ಪುಷ್ಟಿ ಮಾಡಿಕೊಂಡು ಬಾಯ ಮುಚ್ಚುತ್ತ ತೆರೆವುತ್ತ ನೇತ್ರದಲ್ಲಿ ಉನ್ಮೀಲನ ನಿಮೀಲನವ ಮಾಡಿಸುತ್ತಿಹುದು. 

8.ಕೃಕರವಾಯು 
ಅಂಜನವರ್ಣ. 
ನಾಸಿಕಾಗ್ರ
 ಕ್ಷುಧಾದಿ ಧರ್ಮಗಳ ನೆಗಳೆ ಗಮನಾಗಮನಂಗಳ ಮಾಡಿಸುತ್ತಿಹುದು. 

9.ದೇವದತ್ತವಾಯು 
ಸ್ಫಟಿಕವರ್ಣ. 
ಗುಹ್ಯ ಕಟಿ ಸ್ಥಾನ
 ಕುಳ್ಳಿರ್ದಲ್ಲಿ ಮಲಗಿಸಿ ಮಲಗಿರ್ದಲ್ಲಿ ಏಳಿಸಿ ನಿಂದಿರಿಸಿ ಚೇತರಿಸಿ ಒರಲಿಸಿ ಮಾತಾಡಿಸುತ್ತಿಹುದು. 

10.ಧನಂಜಯವಾಯು 
ನೀಲವರ್ಣ. 
ಬ್ರಹ್ಮರಂಧ್ರ
ಕರ್ಣದಲ್ಲಿ ಸಮುದ್ರಘೋಷ ಘೋಷಿಸಿ ಮರಣಕಾಲಕ್ಕೆ ನಿರ್ಘೋಷವಾಗುವುದು. 
ಈ ಪ್ರಕಾರದಲ್ಲಿ ಮೂಲವಾಯುವೊಂದೇ ಸರ್ವಾಂಗದಲ್ಲಿ ಸರ್ವತೋಮುಖವಾಗಿ ಚಲಿಸುತ್ತಿಹುದು. 

ಆ ಪವನದೊಡನೆ ಪ್ರಾಣವು ಕೂಡಿ ಪ್ರಾಣದೊಡನೆ ಪವನ ಕೂಡಿ ಹೃದಯ ಸ್ಥಾನದಲ್ಲಿ ನಿಂತು ಹಂಸನೆನಿಸಿಕೊಂಡು 
ಆಧಾರ ಸ್ವಾದ್ಥಿಷ್ಠಾನ ಮಣಿಪೂರಕ ಅನಾಹತ
ವಿಶುದ್ಧಿ ಆಜ್ಞಾ ಎಂಬ ಷಡುಚಕ್ರದಳಗಳ ಮೇಲೆ ಸುಳಿದು ನವನಾಳಗಳೊಳಗೆ ಚಲಿಸುತ್ತಿಹುದು. ಅಷ್ಟದಳಗಳೇ ಆಶ್ರಯವಾಗಿ ಅಷ್ಟದಳಗಳ ಮೆಟ್ಟಿ ಚಲಿಸುವ ಹಂಸನು ಅಷ್ಟದಳಗಳಿಂದ ವಿಶುದ್ಧಿಚಕ್ರಕ್ಕೆ ಬಂದು ಅಲ್ಲಿಂದ ನಾಸಿಕಾಗ್ರದಲ್ಲಿ ಹದಿನಾರಂಗುಲ ಪ್ರಮಾಣ ಹೊರಸೂಸುತ್ತಿಹುದು; ಹನ್ನೆರಡಂಗುಲ ಪ್ರಮಾಣ ಒಳಗೆ ತುಂಬುತ್ತಿಹುದು.12:16 (inspiration expiration ratio) ಹೀಗೆ ರೇಚಕ ಪೂರಕದಿಂದ ಮರುತ ಚರಿಸುತ್ತಿರಲು ಸಮಸ್ತ ಪ್ರಾಣಿಗಳ ಆಯುಷ್ಯವು ದಿನ ದಿನಕ್ಕೆ ಕುಂದುತ್ತಿಹುದು. ಹೀಗೆ ಈಡಾ ಪಿಂಗಳದಲ್ಲಿ ಚಲಿಸುವ ರೇಚಕ ಪೂರಕಗಳ ಭೇದವನರಿದು ಮನ ಪವನಗಳ ಮೇಲೆ ಲಿಂಗವ ಸಂಬಂಧಿಸಿ ಮನ ಪವನ ಪ್ರಾಣಗಳನ್ನು ಲಿಂಗದೊಡನೆ ಕೂಡಿ ಲಿಂಗ ಸ್ವರೂಪವ ಮಾಡಿ ವಾಯು ಪ್ರಾಣತ್ವವ ಕಳೆದು ಲಿಂಗಪ್ರಾಣಿಯ ಮಾಡಿ ಹೃದಯ ಕಮಲ ಮಧ್ಯದಲ್ಲಿ ಪ್ರಣವವನ್ನು ಉಚ್ಚರಿಸುತ್ತ ಪರಶಿವ ಧ್ಯಾನದಲ್ಲಿ ತರಹರವಾಗಿರುವುದು ಈಗ ಪ್ರಾಣಾಯಾಮ. 

*ಪ್ರತ್ಯಾಹಾರ *:
ಆಹಾರದಿಂದ ನಿದ್ರೆ, ನಿದ್ರೆಯಿಂದ ಇಂದ್ರಿಯಗಳು,
ಇಂದ್ರಿಯಗಳಿಂದ ವಿಷಯಗಳು ಘನವಾಗುತ್ತಿಹುವು. ಆ ವಿಷಯದಿಂದ ದುಃಕರ್ಮಗಳ ಹೆಚ್ಚಾಗಿ ಜೀವಗೆ ಭವ ಭವದ ಬಂಧನವನೊಡಗೂಡಿ ಆಯಸ ಪಡುತ್ತಿದ್ದರು ಜ್ಞಾನ ಕರ್ಮಿಯೋಗಿಗಳು;
ಈ ಅವಸ್ಥೆಗೆ ಹೊಗದಿಹರು ಸುಜ್ಞಾನಿ ಶರಣ ಧರ್ಮಿಗಳು. ಅದರಿಂದ ಅಲ್ಪ ಆಹಾರ ಕ್ರಮ ಕ್ರಮದಿಂದ ಉದರಕ್ಕೆ ಹವಣಿಸುತ್ತ ಬಹುದು. ಗುರು ಕೃಪೆಯಿಂದ ಈ ಪ್ರಕಾರದಲ್ಲಿ ಸರ್ವೇಂದ್ರಿಯಂಗಳನು ಲಿಂಗಮುಖದಿಂದ ಸಾವಧಾನವ ಮಾಡಿಕೊಂಡಿರುವುದು ಪ್ರತ್ಯಾಹಾರಯೋಗ. 
ಈ ಐದು ಪೂರ್ವಯೋಗಗಳು. 

ಇನ್ನು ಧ್ಯಾನ ಧಾರಣ ಸಮಾಧಿಯೆಂದು ಮೂರು ಉತ್ತರಯೋಗಗಳು. 

*ಧ್ಯಾನಯೋಗ*: 
ಅಂತರಂಗದ ಶುದ್ಧ ಆತ್ಮ ಲಿಂಗವನ್ನೇ ಶಿವಲಿಂಗ ಸ್ವರೂಪವ ಮಾಡಿ ಕರಸ್ಥಲಕ್ಕೆ ಶ್ರೀಗುರು ತಂದು ಕೊಟ್ಟನಾಗಿ ಆ ಕರಸ್ಥಲದಲ್ಲಿದ್ದ ಶಿವಲಿಂಗವೇ ಪರಶಿವ ಚಿಹ್ನವೆಂದರಿದು ಆ ಲಿಂಗವನ್ನೇ ಆಧಾರ ಸ್ವಾಧಿಷ್ಠಾನ ಮಣಿಪೂರಕ ಅನಾಹತ
ವಿಶುದ್ಧಿ ಆಜ್ಞೇಯ ಬ್ರಹ್ಮರಂಧ್ರ ಮುಖ್ಯವಾದ ಚಕ್ರಸ್ಥಾನಗಳಲ್ಲಿ ಆ ಶಿವಲಿಂಗಮೂರ್ತಿಯನ್ನೇ ಆಹ್ವಾನ ವಿಸರ್ಜನೆಯಿಲ್ಲದೆ ಧ್ಯಾನ ಮಾಡುವುದೇ ಧ್ಯಾನಯೋಗ. 

*ಧಾರಣಯೋಗ* : 
ಆ ಲಿಂಗವ ಭಾವ ಮನ ಕರಣ ಮುಖ್ಯವಾದ ಸರ್ವಾಂಗದಲ್ಲಿ ಧರಿಸುವುದೀಗ ಧಾರಣಯೋಗ. 

*ಸಮಾಧಿಯೋಗ* :
ಆ ಸತ್ಕ್ರಿಯಾ ಜ್ಞಾನಯೋಗದಿಂದ ಪ್ರಾಣಗೆ ಶಿವಕಳೆಯ ಸಂಬಂಧಿಸಿ ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವೆಂಬ ಲಿಂಗತ್ರಯವನು ಏಕಾಕಾರವ ಮಾಡಿ ಅಖಂಡ ಪರಿಪೂರ್ಣ ಕೇವಲ ಪರಂಜ್ಯೋತಿ ಸ್ವರೂಪ ಮಹಾಲಿಂಗದೊಳಗೆ ಸಂಯೋಗವಾಗಿ ಭಿನ್ನವಿಲ್ಲದೆ ಏಕಾರ್ಥವಾಗಿರುವುದು ಸಮಾಧಿಯೋಗ. 

ಹೀಗೆ ಅಷ್ಟಾಂಗಯೋಗದಲ್ಲಿ ಶಿವಲಿಂಗಾರ್ಚನೆಯ ಮಾಡಿ ಶಿವತತ್ವದೊಡನೆ ಕೂಡುವುದು ಈಗ *ಲಿಂಗಾಂಗಯೋಗ*. 

ಇನ್ನು ಕರ್ಮಕಾಂಡಿಗಳು ಮಾಡುವ ಕರ್ಮಯೋಗಗಳು- ಅವವು ಎಂದರೆ: 

ಯಮ, ನಿಯಮ, ಆಸನ, ಪ್ರಾಣಾಯಾಮ,
ಪ್ರತ್ಯಾಹಾರವೆಂಬ ಈ ಐದನ್ನು ಲಿಂಗವಿರಹಿತವಾಗಿ (ಇಷ್ಟಲಿಂಗವಿಲ್ಲದೆ) ಮಾಡುತ್ತಿದ್ದರಾಗಿ ಈ ಐದು ಕರ್ಮಯೋಗಗಳು. 
ಉತ್ತರಯೋಗದಲ್ಲಿ ಅವರು ಲಕ್ಷಿಸುವಂಥಾ 
ನಾದಲಕ್ಷ್ಯ, ಬಿಂದುಲಕ್ಷ್ಯ,ಕಲಾಲಕ್ಷ್ಯ  ಇವು ಶಿವಾಯೋಗದ ನಾದ ಬಿಂದು ಕಳೆಗಿಂತ ಭಿನ್ನವಾದವು. ಈ ಎಂಟು ಯೋಗದ ಅಂಗಗಳು ಇತರ ಮತದವರು ಮಾಡುವ ಯೋಗಗಳು. 
ಇವು ಲಿಂಗವಿರಹಿತವಾಗಿ ಮಾಡುವರಾಗಿ ಇವು ಕರ್ಮಯೋಗಗಳು.
ಈ ಕರ್ಮಕೌಶಲ್ಯದಲ್ಲಿ ಲಿಂಗವಿಲ್ಲ ನೋಡಾ. ಅದುಕಾರಣ ಇವು ಯೋಗ್ಯವಲ್ಲ.. 

ಇನ್ನು ವೀರಮಾಹೇಶ್ವರರುಗಳ(ಶರಣರು)ಮಾಡುವ ಲಿಂಗಸಂಧಾನವೆಂತೆಂದರೆ:

ಬ್ರಹ್ಮರಂಧ್ರದಲ್ಲಿರುವದು ನಾದ ಚೈತನ್ಯವು. ಆ ಪರಮ ಚಿತ್ಕಲೆಯನ್ನೇ ಭಾವ, ಮನ, ಕರದಲ್ಲಿ ಶ್ರೀಗುರು ತಂದು ಸಾಹಿತ್ಯವ ಮಾಡಿದನಾಗಿ 
*ಭಾವದಲ್ಲಿ ಸತ್ ಸ್ವರೂಪ ಭಾವಲಿಂಗವೆನಿಸಿ*,
*ಪ್ರಾಣದಲ್ಲಿ ಚಿತ್ ಸ್ವರೂಪ ಪ್ರಾಣಲಿಂಗವೆನಿಸಿ*,
*ಕರಸ್ಥಲದಲ್ಲಿ ಆನಂದ ಸ್ವರೂಪ ಇಷ್ಟಲಿಂಗ ವೆನಿಸಿ*,
*ಒಂದೇ ವಸ್ತು ತನು ಮನ ಭಾವಗಳಲ್ಲಿ ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವಾದ ಭೇದವನರಿದು* 
*ಇಷ್ಟಲಿಂಗವನ್ನು ದೃಷ್ಟಿಯಿಂದ ಗ್ರಹಿಸಿ, ಪ್ರಾಣಲಿಂಗವನ್ನು ಮನ ಜ್ಞಾನದಿಂದ ಗ್ರಹಿಸಿ, ತೃಪ್ತಿಲಿಂಗವನ್ನು ಭಾವ ಜ್ಞಾನದಿಂದ ಗ್ರಹಿಸಿ, ಈ ಲಿಂಗತ್ರಯಗಳನ್ನು ಹಿಡಿದು ಆಚರಿಸಿ ಲಿಂಗದೊಡನೆ ಕೂಡಿ ಲಿಂಗವೇ ತಾನು ತಾನಾಗಿ ವಿರಾಜಿಸುತ್ತ ಇರುವುದು ಶಿವಯೋಗ ನೋಡಾ*ಎಂದು ತಮ್ಮ ಇಷ್ಟದೇವ 
ಮಹಾಲಿಂಗಗುರು ಶಿವಸಿದ್ಧೇಶ್ವರಪ್ರಭುವನ್ನು ನೆನೆಯುತ್ತಾರೆ.
- ✍️Dr Prema Pangi
#ಪ್ರೇಮಾ_ಪಾಂಗಿ,
#ಯಮ_ನಿಯಮ_ಆಸನ
#ಎಡಿಯೂರು_ತೋಂಟದ_ಸಿದ್ಧಲಿಂಗೇಶ್ವರರು,

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma