ಷಟ್ಸ್ಥಲ - ಶರಣ ಸ್ಥಲ

ಷಟ್ಸ್ಥಲ  -  ಶರಣ ಸ್ಥಲ
*ಶರಣ ಸ್ಥಲ* :
“ಶರಣ' ಎಂದರೆ  ಶಿವನಿಗೆ ಶರಣು ಹೊಕ್ಕವನು'. ಶಿವಯೋಗ ಸಾಧನೆಯಲ್ಲಿ  ಶರಣ ಸ್ಥಲದ ನಿಲವನ್ನು ಹೇಳುವಾಗ ಅದಕ್ಕೆ ಲಭಿಸುವ ಅರ್ಥವೇ ಬೇರೆ.  ಶಟ್ಸ್ಥಲದ ಸಾಧನೆಯಲ್ಲಿ ನಿರ್ಮಲ ಭಕ್ತಿಯಿಂದ ಭಕ್ತ ಸ್ಥಲ, ಅಚಲ ನಿಷ್ಠೆಯಿಂದ ಮಾಹೇಶ್ವರ ಸ್ಥಲ, ಶಿವನಿಗೆ ಮತ್ತು ಸಮಾಜಕ್ಕೆ ಸಮರ್ಪಿಸಿಕೊಂಡು ಪ್ರಸಾದಿ ಸ್ಥಲ, ಲಿಂಗಾನುಭವದಿಂದ ಪ್ರಾಣಲಿಂಗಿ ಸ್ಥಲ ಈ ಮೊದಲ ನಾಲ್ಕು ಹಂತಗಳನ್ನು ದಾಟಿ ಶರಣ ಸ್ಥಲದಲ್ಲಿ ನಿಂತ ಶಿವಯೋಗದ ತುತ್ತ ತುದಿಯಲ್ಲಿ ನಿಂತ ಅನುಭಾವಿ ಎಂಬ ಅರ್ಥದಲ್ಲಿ ಈ ಮಾತು ಬರುತ್ತದೆ. 
ಶಟ್ಸ್ಥಲದ 4 ನೆಯ ಸ್ಥಲ ಪ್ರಾಣಲಿಂಗಿ ಸ್ಥಲದಲ್ಲಿ ಪ್ರಯತ್ನಪೂರ್ವಕವಾಗಿ  ಕೈಕೊಂಡ ಯೋಗ ಸಾಧನೆಯ ಅನುಭಾವ, ಶರಣ ಸ್ಥಲದಲ್ಲಿ ಸಹಜ ಸ್ಥಿತಿಯಾಗಿ ಪರಿಣಮಿಸುತ್ತದೆ. ಇಲ್ಲಿ ಭಾವಲಿಂಗಭರಿತನಾಗಿ ಆನಂದ ಮತ್ತು ಸಮರಸ ಭಕ್ತಿಗಳಿಂದ ಅತ್ಯಂತ ತೃಪ್ತಿಯನ್ನು ಪಡೆಯುತ್ತಾನೆ ಸಾಧಕ. ಆ ನಿಬ್ಬೆರಗಿನಲ್ಲಿ ನಿಸ್ಸಂಗಿಯಾಗಿ ಜ್ಞಾನಮುಖದಿಂದ ಜಗತ್ತಿನಲ್ಲಿ ವರ್ತಿಸುತ್ತಾನೆ, ಇಲ್ಲಿ ಆತ ಸಂಶಯ ರಹಿತ, ನಿರ್ಭಿತ, ಆತ್ಮವಿಶ್ವಾಸಿ. 

 ವ್ಯಕ್ತಿ ತನ್ನನ್ನು ತಾನು ನೋಡಿಕೊಂಡರೆ ಸಾಲದು ; ತಾನು ಕಂಡ ಬೆಳಕನ್ನು ಇತರರಿಗೆ ತೋರಿಸಿ ಕೊಡುವ ಪ್ರಯತ್ನದಲ್ಲಿ ಆತನ ಸಾಧನೆಯ ಸಾರ್ಥಕತೆಯಿದೆ ಎಂದು ಅರಿತವನು. ಶರಣ ಸ್ಥಲದಲ್ಲಿ ಮುಖ್ಯವಾಗಿ ಈ ಆಶಯವನ್ನು ಕಾಣುತ್ತೇವೆ: ತನ್ನ ಹಿತವನ್ನೇ ಪರಮಗುರಿಯನ್ನಾಗಿಸಿಕೊಳ್ಳದೆ ತನ್ನ ಅನುಭಾವದ ಬೆಳಕನ್ನು ತನ್ನ ಸುತ್ತಲಿನ ಸಮಾಜದ ಮೇಲೆ ಬೀರುವ ಕಾರ್ಯದಲ್ಲಿ ನಿರತನಾಗುತ್ತಾನೆ. ಆಧ್ಯಾತ್ಮಿಕದ ಸಿದ್ದಿ ಶಿಖರದಲ್ಲಿ ನಿಂತವನು.“ಇಹ ಪರನಲ್ಲ; ಪರಾಪರನಲ್ಲ. ಕಾಮಿಸಿ ಕಾಮಿಯಲ್ಲ. ಭಾವಿಸಿ ಭಾವಿ ಅಲ್ಲ. ಅನಾಮಯ ನಿರಂಜನ. ಈ ಸಂಸಾರದಲ್ಲಿದ್ದೂ  ತನ್ನನ್ನು ಹೊದ್ದಲೀಯನು. “ಜಲದೊಳಗಣ ಮತ್ಸ್ಯ ಜಲವ ತನ್ನ ನಾಸಿಕದತ್ತ ಹೊದ್ದಲೀಯದಂತೆ” ಅಕ್ಕಮಹಾದೇವಿ ಒಂದು ವಚನದಲ್ಲಿ

#ಲೋಕವ ಹಿಡಿದು ಲೋಕದ ಸಂಗದಂತಿಪ್ಪೆ.
ಆಕಾರವಿಡಿದು ಸಾಕಾರಸಹಿತ ನಡೆವೆ.
ಹೊರಗೆ ಬಳಸಿ ಒಳಗೆ ಮರೆದಿಪ್ಪೆ.
ಬೆಂದನುಲಿಯಂತೆ ಹುರಿಗುಂದದಿಪ್ಪೆ.
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯಾ, ಹತ್ತರೊಳಗೆ ಹನ್ನೊಂದಾಗಿ ನೀರತಾವರೆಯಂತಿಪ್ಪೆ. / 363 

ಎಂದು ತನ್ನನ್ನು ಕುರಿತು ಹೇಳಿಕೊಳ್ಳುವ ಮಾತುಗಳಲ್ಲಿ ಶರಣರ ನಿರ್ಲಿಪ್ತ ಮನೋಧರ್ಮ ವ್ಯಕ್ತವಾಗುತ್ತದೆ. 
ಶರಣ ಕರ್ತವ್ಯವನ್ನು ನಿರ್ವಹಿಸುವ ನಿರಾಭಾರಿ. ವ್ಯಕ್ತಿ ಎಷ್ಟೇ ದೊಡ್ಡವನಾಗಲಿ, ಕಾಯಕವಿಲ್ಲದೆ ಬದುಕುವ ಹಕ್ಕಿಲ್ಲ ಎಂಬುದನ್ನು ತಾನು ಆಚರಣೆಯಲ್ಲಿ ತೋರಿಸುತ್ತಾನೆ. ಆಧ್ಯಾತ್ಮಿಕವಾಗಿ ಆತ ಸಿದ್ಧಿಯ ಶಿಖರದಲ್ಲಿ ನಿಂತವನು. ಶ್ರದ್ಧೆ, ನಿಷ್ಠೆ, ಅವಧಾನ, ಅನುಭಾವ ಭಕ್ತಿಗಳನ್ನು ದಾಟಿ ಆನಂದಭಕ್ತಿಯಲ್ಲಿ ನಿಬ್ಬೆರಗಾದವನು. ಜಗತ್ತನ್ನ ಮಾಯೆ ಎಂದು  ತಿರಸ್ಕರಿಸುವ ಅದ್ವೈತಿಯಲ್ಲ ಆತ. ಶರಣ ಸಂಸ್ಕೃತಿಯ ವಿಶೇಷ ವೆಂದರೆ ಶರಣ ಲೌಕಿಕ ಜಗತ್ತಿನ ಸಂಪರ್ಕವನ್ನು ಕಳೆದುಕೊಳ್ಳದಿರುವುದು,

ಶರಣ ಸತಿ ಲಿಂಗ ಪತಿ ಎಂಬ ಭಾವನೆಯಿಂದ ತನ್ನನ್ನು ಸಂಪೂರ್ಣವಾಗಿ ತನ್ನ ಪತಿ ಶಿವನಿಗೆ ಅರ್ಪಿಸಿ ಕೊಳ್ಳುತ್ತಾನೆ ಶರಣ. ಆ ಅಲೌಕಿಕ ಪತಿಯ ಸಮರಸದ ಕೂಟವನ್ನು ಪಡೆದು ಆನಂದ ನಿಬ್ಬೆರಗಿನಲ್ಲಿ ನಿಲ್ಲುತ್ತಾನೆ. ಅಂಗಲಿಂಗಸಂಗಿಯಾದ ಶರಣನ ಅಂಗವೆಲ್ಲ ಲಿಂಗವೇ.ಆತನ ಮನವೆಲ್ಲ ಅವಿರಳ ಜ್ಞಾನವೇ. “ಸ್ಪಟಿಕದ ಘಟದೊಳಗೆ ಎತ್ತಿದ ಜ್ಯೋತಿ ಒಳ ಹೊರಗೊಂದು ಸ್ವಯವಾಗಿ ಪ್ರಜ್ವಲಿಸುವಂತೆ” ಲಿಂಗವಂತ  ಶರಣನ ಅಪೂರ್ವ ಕಾಂತಿಯು ಒಳಹೊರಗೊಂದಾಗಿ ಪ್ರಜ್ವಲಿಸುತ್ತದೆ.  ಆತನ ಭಾವ ಅಡಗಿ ನಿರ್ಭಾವವಾಗಿ ಸಮತೆಯಲ್ಲಿ ನಿಂದು, ಇದು ನಿಜಶಾಂತಿಯಲ್ಲಿ ಪರಿಣಮಿಸುತ್ತದೆ.
ಚೆನ್ನಬಸವಣ್ಣನವರ ಅಭಿಪ್ರಾಯದಲ್ಲಿ  ಶರಣ

#ದೇಹಿಯಲ್ಲ ನಿರ್ದೆಹಿಯಲ್ಲ, 
ಬೋಧಕನಲ್ಲ ನಿರ್ಬೊಧಕನಲ್ಲ,
ಕಾಮಿಯಲ್ಲ, ನಿಃಕಾಮಿಯಲ್ಲ, 
ಆಸೆವಿಡಿದು ಬಂದ ಆಮಿಷನಲ್ಲ.
ಅವಗುಣವಿಲ್ಲದ ನಿರ್ಗುಣಿ ನಿರಂತರ,
ಕೂಡಲಚೆನ್ನಸಂಗನ ಶರಣ ನೋಡಯ್ಯಾ. / 859

ಬಸವಣ್ಣನವರು ಹೇಳುವಂತೆ ಶರಣ,
' ಉಪಮಿಸಲಾರದ ಉಪಮಾತೀತ', ಕಾಲಕರ್ಮರಹಿತ ಭವ ವಿರಹಿತ, ಆತ ಸಂದೇಹ ಸೂತಕಿಯಲ್ಲ, ಆಕಾರ ನಿರಾಕಾರನಲ್ಲ : ಕಾಯವಂಚಕನಲ್ಲ, ಜೀವವಂಚಕನಲ್ಲ, ಶಂಕೆಯಿಲ್ಲದ ಮಹಾ ಮಹಿಮ." 

#ಶರಣ ನಿದ್ರೆಗೈದಡೆ ಜಪ ಕಾಣಿರೊ,
ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ,
ಶರಣ ನಡೆದುದೆ ಪಾವನ ಕಾಣಿರೊ,
ಶರಣ ನುಡಿದುದೆ ಶಿವತತ್ವ ಕಾಣಿರೊ,
ಕೂಡಲಸಂಗನ ಶರಣನ
ಕಾಯವೆ ಕೈಲಾಸ ಕಾಣಿರೊ. / 1187

ಶರಣ ತಾನೇ ಪರಂಜ್ಯೋತಿ ಸ್ವರೂಪ 
ನಾದುದರಿಂದ ಅವನ ಕ್ರಿಯೆ ಶಿವ ಬೆಳಕನ್ನು ಬೀರುತ್ತವೆ. ಆತ ನಿದ್ದೆ ಮಾಡಿದರೆ ಅದು ಜಪ. ಎಚ್ಚರಗೊಂಡರೆ ಅದು ಶಿವಭಕ್ತಿಯ ಶಿವರಾತ್ರಿಯ ಜಾಗರಣೆ. ಆತ ನಡೆದುದು ಪಾವನ. ನುಡಿದುದು ಶಿವತತ್ವ. ಆತನ ದೇಹವೇ ಕೈಲಾಸ.ಅದು ಲಿಂಗ ನೆಲೆ. ಲಿಂಗ ಭಾವದಲ್ಲಿ ಆತ ತನ್ಮಯನಾದಾಗ ಆತ ಪರಂ ಜ್ಯೋತಿ ಸ್ವರೂಪ. ಆನಂದ ಭಕ್ತಿಯ ನಿಲಯ.
ಹೀಗೆ ಅವನು “ನಡೆದುದೆಲ್ಲ ಪೂಜೆ ನುಡಿದುದೆಲ್ಲ ಮಂತ್ರ : ಅವನ ಕಾಯವೇ ಕೈಲಾಸ"ವಾಗಿ ಪರಿಣಮಿಸುತ್ತದೆ.
ಇದು ಇನ್ನೂ ವ್ಯಾಪಕವಾದ ರೀತಿಯಲ್ಲಿ ಶರಣಸ್ಥಲ ದಲ್ಲಿ ಬೆಳೆಯುತ್ತ 'ಧನದಲ್ಲಿ ಶುಚಿ, ಪ್ರಾಣದಲ್ಲಿ ನಿರ್ಭಯನಾಗಿ ರುವ'.  ಆತ “ಕಾಯಕವೇ ಕೈಲಾಸ” ಎಂಬ ಮಾರ್ಗದಲ್ಲಿ ಬಂದವನು. ಈಗಲೂ ಆತ ಕಾಯಕ ಮಾಡುತ್ತಾನೆ. ಆದರೆ ಅದು ತನಗಾಗಿ ಅಲ್ಲ ; ಜಗತ್ತಿಗೆ, ಜನತೆಯ ಒಳಿತಿಗಾಗಿ. ಜ್ಞಾನ ಮತ್ತು ಕ್ರಿಯೆ ಇವುಗಳ ಪರಸ್ಪರ ಸಂಬಂಧ ರಹಸ್ಯವನ್ನು ಶರಣ ಮನಗಂಡು ಅದನ್ನು ನಿತ್ಯಜೀವನದಲ್ಲಿ ಅನುಷ್ಠಾನಕ್ಕೆ ತಂದು ಸಾಮಾಜಿಕ ಜೀವನವನ್ನು ಸ್ವಚ್ಚಗೊಳಿಸುವ ಭವರೋಗ ವೈದ್ಯನಾಗುತ್ತಾನೆ. ಶರಣ.
ತನಗಾಗಿ ಮಾಡಬೇಕಾದುದೇನು ಉಳಿದಿಲ್ಲ. ಆತನ ಕ್ರಿಯೆಯಲ್ಲಾ ಸಮಾಜದ ಒಳಿತಿಗಾಗಿ, ತ್ರಿವಿಧ ನಾಸ್ತಿಯಾದ ತನ್ನದೇ ನಿಲುವಿನಲ್ಲಿ ನಿಂತವನು ಆತ, ಜಗತ್ತಿನ ವಿಧಿ-ನಿಷೇಧಗಳು ಅತೀತನಾಗಿ, ವಿಶ್ವಮಾನವನಾಗಿ ಜೀವಿಸಬಲ್ಲ. ಲಿಂಗದ ನಡೆಯಂತೆ ಪರಮಾತ್ಮನ ಇಚ್ಛೆಯಂತೆ ನಡೆಯುವವ. ಲೋಕದ ಮೆಚ್ಚುಗೆಗಾಗಿ ಲೋಕದಿಚ್ಚೆಯಂತೆ ಆತ ನಡೆಯುವವನಲ್ಲ. 
“ಲಿಂಗದ ನಡೆಯಂತೆ ನಡೆವನಲ್ಲದೆ, ಲೋಕದ ನಡೆಯಂತೆ ನಡೆವನಲ್ಲ ನೋಡಾ ನಿಮ್ಮ ಶರಣ, ಲಿಂಗದ ನುಡಿಯಂತೆ ನುಡಿವನಲ್ಲದೆ, ಲೋಕದ ನುಡಿಯಂತೆ ನುಡಿವನಲ್ಲ ನೋಡಾ ನಿಮ್ಮ ಶರಣ.” ಸತ್ಯವನ್ನು ನಿರ್ದಾಕ್ಷಿಣ್ಯವಾಗಿ ನುಡಿವ ದಿಟ್ಟತನ ಆತನದು. ಸತ್ಯಶೋಧನೆಯ ಮಾರ್ಗದಲ್ಲಿ ಉರಿಬರಲಿ ಸಿರಿ ಬರಲಿ, ಬೇಕು ಬೇಡೆನ್ನದೆ ಮುನ್ನಡೆದು `ಮರಣವ ಮಹಾನವಮಿ' ಎಂದು ಎದುರು ಗೊಳುವ ನಿಷ್ಠೆ ಆತನದು. ಬಸವಣ್ಣನವರ ಜೀವನವೇ ಇದಕೊಂದು ಉಜ್ವಲ ಉದಾಹರಣೆ ಯಾಗಿದೆ. ಹೀಗೆ ಶರಣ -ಜೀವನ ಮುಕ್ತಿ ಸ್ಥಿತಿಯಲ್ಲಿ ನಿಂತು ಲೋಕಕಲ್ಯಾಣಕ್ಕಾಗಿ ಕೈಯನ್ನು ಕೆಳಗೆ ಚಾಚಿ ಜನತೆಯನ್ನು ಮೇಲಕ್ಕೆತ್ತಿ ಕೊಳ್ಳುವ ಮಹಾನುಭಾವಿ.

#ಕುಲಮದವಳಿಯದನ್ನಕ್ಕ ಶರಣನಾಗಲೇಕೆ
ವಿಧಿವಶ ಬಿಡದನ್ನಕ್ಕ ಭಕ್ತನಾಗಲೇಕೆ
ಹಮ್ಮಿನ ಸೊಮ್ಮಿನ ಸಂಬಂಧ ಬಿಟ್ಟು
ಕಿಂಕಿಲ ಕಿಂಕಿಲ ಕಿಂಕಿಲನಾಗಿರಬೇಕು.
ಹೆಪ್ಪನೆರೆದ ಹಾಲು ಕೆಟ್ಟು ತುಪ್ಪವಪ್ಪಂತೆ ಇಪ್ಪರು
ಕೂಡಲಸಂಗಮದೇವಾ ನಿಮ್ಮ ಶರಣರು. / 545

ಎಲ್ಲಕಿಂತ ಹೆಚ್ಚು ಕುಲ ಮದ. ಈ ದೇಹಕ್ಕೆ ಅಂಟಿ ಬಂದ ಕುಲದ ಅಹಂಕಾರವನ್ನು ಕಳೆದು ಕೊಳ್ಳದ ಹೊರತು  ಶರಣ ನಾಗುವುದಿಲ್ಲ. ಹಾಗೆ ಭಕ್ತನಾದವನು ಹಿಂದಿನ ಜನ್ಮಗಳ ಬಂಧನದಿಂದ, ವಿಧಿವಶದಿಂದ ಮುಕ್ತನಾಗಿ ಲಿಂಗವಶನಾಗಬೇಕು, ಅಹಂಕಾರದ ಐಶ್ವರ್ಯ, ಪೂರ್ವ ಬಂಧನ ಸಂಬಂಧಗಳನ್ನು ಬಿಟ್ಟು ಶಿವಭಕ್ತ ಕಿಂಕರನಾಗಿರಬೇಕು, ಹೆಪ್ಪು ಹಾಕಿದ ಹಾಲು ಮೊಸರಾಗಿ ತುಪ್ಪವಾಗುವಂತೆ, ಶರಣನು ನಶ್ವರತೆಯನ್ನು ನೀಗಿ ಶಾಶ್ವತ ಮೌಲ್ಯಗಳನ್ನು ಪಡೆಯುತ್ತಾನೆ. ಶ್ರದ್ಧಾ, ನಿಷ್ಠೆ, ಅವಧಾನ, ಅನುಭವ, ಆನಂದ ಭಕ್ತಿ ಸಾಧನೆಯಿಂದ ಅವನು ತುಪ್ಪದಂತಾಗುತ್ತಾನೆ. ಪರಿಪೂರ್ಣ ನಾಗುತ್ತಾನೆ.


#ಅಂಗ ಲಿಂಗದಲ್ಲಿ ತರಹರವಾಗಿ, 
ಸಮತೆ ಶಾಂತಿಯಲ್ಲಿ ತರಹರವಾಗಿ,
ಮನ ಜ್ಞಾನದಲ್ಲಿ ತರಹರವಾಗಿ, 
ಭಾವ ನಿರ್ಭಾವದಲ್ಲಿ ತರಹರವಾಗಿ ಇರಬಲ್ಲಡೆ,
ಆತನೆ ಅಚ್ಚಶರಣನು ಕಾಣಾ ಗುಹೇಶ್ವರಾ./5 
- ಅಲ್ಲಮ ಪ್ರಭುಗಳು

ಈ ವಚನದಲ್ಲಿ ವ್ಯೋಮಕಾಯ ಅಲ್ಲಮ ಪ್ರಭುದೇವರು ಶರಣ ಅಂದರೆ ಯಾರು, ಶರಣರ ಲಕ್ಷಣ ಗಳೇನು ತಿಳಿಸಿದ್ದಾರೆ.ಅಂಗ ಅಂದರೆ ಸ್ಥೂಲ ದೇಹ ಮತ್ತು ಆ ದೇಹದೊಳಗಿನ ಅಂತರ್ಗತವಾದ ಜೀವ ಚೇತನ.  ಅಂಗ ಲಿಂಗದಲ್ಲಿ  ಸಮ್ಮಿಳನವಾಗಿ,
ಸಮತೆ  ಶಾಂತಿಯಲ್ಲಿ ಸಮ್ಮಿಳನವಾಗಿ,
ಮನ  ಜ್ಞಾನದಲ್ಲಿ ಸಮ್ಮಿಳನವಾಗಿ, 
ಭಾವ  ನಿರ್ಭಾವದಲ್ಲಿ ಸಮ್ಮಿಳನವಾಗಿ
 ಸಹಜ ಭಾವದಿಂದ ಸಮತೆ ,ಶಾಂತಿಯಿಂದ ಲಿಂಗಾಂಗ ಸುಖ ಅನುಭವಿಸುವ ಜ್ಞಾನಿಯೇ ಅಚ್ಚ ಶರಣನು ಎನಿಸಿ ಕೊಳ್ಳುತ್ತಾನೆ.

 #ಉಪಮಿಸಬಾರದ ಉಪಮಾತೀತರು,
ಕಾಲಕರ್ಮರಹಿತರು, ಭವವಿರಹಿತರು,
ಕೂಡಲಸಂಗಮದೇವಾ, ನಿಮ್ಮ ಶರಣರು / 291

ಶರಣರು ಉಪಮಾತಿತರು. ಅವರಿಗೆ ಅವರೇ ಸಮ. ಅವರು ಕಾಲಕರ್ಮರಹಿತರು, ಕಾಲ ವನ್ನು ಮೀರಿದವರು. ಕರ್ಮಕ್ಕೆ ಅಂಟದವರು, ಕಾಲಕ್ಕೆ ಸಿಲುಕಿಸುವ ಕರ್ಮಫಲವನ್ನು ಮೀರಿದವರು ಇವುಗಳಿಂದ ಭವಬಂಧನವನ್ನು ಕಳೆದುಕೊಂಡವರು.

#ಭವಕ್ಕೆ ಹುಟ್ಟುವನಲ್ಲ, ಸಂದೇಹ ಸೂತಕಿಯಲ್ಲ,
ಆಕಾರ ನಿರಾಕಾರನಲ್ಲ ನೋಡಯ್ಯಾ.
ಕಾಯವಂಚಕನಲ್ಲ, ಜೀವವಂಚಕನಲ್ಲ,
ಶಂಕೆಯಿಲ್ಲದ ಮಹಾಮಹಿಮ ನೋಡಯ್ಯಾ.
ಕೂಡಲಸಂಗನ ಶರಣನುಪಮಾತೀತ, ನೋಡಯ್ಯಾ. / 976

ಶರಣನಾದವನು ಸಾಮಾನ್ಯ ಮಾನವನಂತೆ ಭವಚಕ್ರದಲ್ಲಿ ತಿರುಗುವವನಲ್ಲ. ಮನಸ್ಸು ನಲ್ಲಿ ಸಂದೇಹವನ್ನುಳ್ಳ ಭಿನ್ನ ಸೂತಕಿಯಲ್ಲ. ಆತ ಈ ಸ್ಥೂಲ ದೇಹ ಮತ್ತು ನಿರಾಕಾರ ಸ್ವರೂಪವಾದ ಸೂಕ್ಷ್ಮ ದೇಹಗಳ 
ಅಭಿಮಾನವನ್ನು ಮೀರಿದವನು. ಲಿಂಗಯೋಗದಲ್ಲಿ ಮಗ್ನನಾದವನು. ದೇಹ ಜೀವಗಳನ್ನು ವಂಚಿಸುವವನಲ್ಲ ; ಅಂದರೆ ಅವುಗಳಿಂದ ಸತ್ಯವನ್ನು ಮರೆಮಾಚುವವನಲ್ಲ, ತನ್ನ ಮತ್ತು ದೇವರ ವಿಚಾರವಾಗಿ ಯಾವ ಸಂದೇಹವೂ ಇಲ್ಲದವನು.  ಶಿವಭಾವದಲ್ಲಿ ಲೀನವಾದವನು  ಉಪಮತಾತೀತನು. ಧರ್ಮ ಗುರು ಬಸವಣ್ಣ ನವರು ಶರಣನನ್ನು ಸ್ತುತಿಸಿದ್ದಾರೆ.

#ಬಯಲ ರೂಪ ಮಾಡಬಲ್ಲಾತನೆ ಶರಣನು,
ಆ ರೂಪ ಬಯಲ ಮಾಡಬಲ್ಲಾತನೆ ಲಿಂಗಾನುಭಾವಿ.
ಬಯಲ ರೂಪ ಮಾಡಲರಿಯದಿದ್ದಡೆ ಎಂತು ಶರಣನಂಬೆ
ಆ ರೂಪ ಬಯಲು ಮಾಡಲರಿಯದಿದ್ದಡೆ ಎಂತು ಲಿಂಗಾನುಭಾವಿಯೆಂಬೆ
ಈ ಉಭಯ ಒಂದಾದಡೆ ನಿಮ್ಮಲ್ಲಿ ತೆರಹುಂಟೆ
ಕೂಡಲಸಂಗಮದೇವಾ / 909

ನಿರಾಕಾರನಾದ ಶಿವನನ್ನು ಇಷ್ಟಲಿಂಗ ರೂಪದಲ್ಲಿ, ಇಷ್ಟಲಿಂಗ ರೂಪವಾದ ಶಿವನನ್ನು ಪ್ರಾಣಲಿಂಗ ಸ್ವರೂಪವಾಗಿ ಪ್ರಾಣ ಲಿಂಗ ಶಿವನನ್ನು ಭಾವಲಿಂಗವಾಗಿ ಬಯಲಾಗಿ ಕಾಣ ಬಲ್ಲವನು ಶರಣ. ಶರಣ ಅಂಗ ಲಿಂಗ ಸಮರಸಗೊಂಡ ಲಿಂಗಾನುಭವಿ. ಭಾವವನ್ನು ಬಯಲು ಮಾಡುವವನು. ಭಾವದಲ್ಲಿ ಗ್ರಹಿಸಿ ಭಾವ ಮೀರಿ ಬಯಲು ಮಾಡಿ ಎರಡನ್ನೂ ಸಮರಸ ಮಾಡುವವನು. ಒಳ ಹೊರ ಒಂದು ಮಾಡಿ ಅವಿರಳ ಸಂಭಂದ ಹೊಂದುವವನು.

#ಮಣ್ಣ ಮಡಕೆ ಮಣ್ಣಾಗದು ಕ್ರೀಯಳಿದು,
ಬೆಣ್ಣೆ ಕರಗಿ ತುಪ್ಪವಾಗಿ ಮರಳಿ ಬೆಣ್ಣೆಯಾಗದು ಕ್ರೀಯಳಿದು,
ಹೊನ್ನ ಕಬ್ಬುನವಾಗದು ಕ್ರೀಯಳಿದು,
ಮುತ್ತು ನೀರಲ್ಲಿ ಹುಟ್ಟಿ ಮತ್ತೆ ನೀರಾಗದು ಕ್ರೀಯಳಿದು,
ಕೂಡಲಸಂಗನ ಶರಣನಾಗಿ
ಮರಳಿ ಮಾನವನಾಗ ಕ್ರೀಯಳಿದು. / 996

ಒಮ್ಮೆ ಶರಣನಾಗಿ ಪರಿವರ್ತಿತನಾದವನು ಮತ್ತೆ ಮೊದಲಿನ ಭವಿ ಮಾನವನಂತಾಗುವುದಿಲ್ಲ ಎಂಬುದನ್ನು ಕೆಲವು ಸಾದೃಶ್ಯಗಳಿಂದ ಗುರು ಬಸವಣ್ಣನವರು ಸ್ಪಷ್ಟ ಪಡಿಸುತ್ತಿದ್ದಾರೆ. ಮಡಕೆ ಮಣ್ಣಿನಿಂದಲೇ ಆಗಿದ್ದರೂ ಅದು ತನ್ನ ಕ್ರಿಯೆಗಳನ್ನು ಕಳೆದುಕೊಂಡು ಮತ್ತೆ ಮೊದಲಿನಂತೆ ಮಣ್ಣಾಗುವುದಿಲ್ಲ. ಬೆಣ್ಣೆ ತುಪ್ಪವಾದ ಮೇಲೆ ಅದು ತನ್ನ ಸಂಸ್ಕಾರವನ್ನು ಕಳೆದುಕೊಂಡು ಮರಳಿ ಬೆಣ್ಣೆ ಆಗುವದಿಲ್ಲ. ಪರುಷದ ಸಂಪರ್ಕದಿಂದಾಗಿ ಚಿನ್ನ ಆದ ಕಬ್ಬಿಣ ಮತ್ತೆ ಮರಳಿ ಕಬ್ಬಿಣವಾಗುವದಿಲ್ಲ. ಮುತ್ತು ನೀರಿನಲ್ಲಿ ಹುಟ್ಟಿದರೂ ಮತ್ತೆ ಮರಳಿ ನೀರಾಗುವುದಿಲ್ಲ. ಹಾಗೆಯೇ ಸಾಧನೆಯಿಂದ ಮೇಲೇರಿದ ಶರಣ ಮತ್ತೆ ಕೆಳಗೆ ಬಿದ್ದು ಮರಳಿ ಭವಿಯಾಗುವುದಿಲ್ಲ.

“ತೆರಹಿಲ್ಲದ ನಡೆ, ತೆರಹಿಲ್ಲದ ನುಡಿ, ತೆರಹಿಲ್ಲದ ಸ್ವಾನುಭಾವ ಸುಖ, ತೆರಹಿಲ್ಲದ ಮಹಿಮೆ, ತೆರಹಿಲ್ಲದ ವಿಚಾರ, ಇವುಗಳಿಂದ ಶರಣ ತಾನೇ ತಾನಾಗಿ ಪರಿಪೂರ್ಣ ನಾಗುತ್ತಾನೆ. ಇಂತಹ ಶರಣನನ್ನು ಕುರಿತು

#ಮಠವೇಕೋ ಪರ್ವತವೇಕೋ ಜನವೇಕೋ ನಿರ್ಜನವೇಕೋ
ಚಿತ್ತ ಸಮಾಧಾನವುಳ್ಳ ಶರಣಂಗೆ ?
ಮತ್ತೆ-ಹೊರಗಣ ಚಿಂತೆ ಧಾನ್ಯ ಮೌನ ಜಪತಪವೇಕೊ;
ತನ್ನ ತಾನರಿದ ಶರಣಂಗೆ ಗುಹೇಶ್ವರಾ ? / 1268 
ಎಂದು ಪ್ರಭು ಕೇಳುವ ಪ್ರಶ್ನೆ ಸಹಜವಾಗಿದೆ. 

 ಜಗತ್ತಿಗೆ ನಾವೇನಾದರೂ ಒಳಿತನ್ನು ಮಾಡಬೇಕಾದರೆ ನಮ್ಮ ನಮ್ಮ ತನುವನ್ನು ನಾವು ಮೊದಲು ಸಂತೈಸಿಕೊಳ್ಳಬೇಕು ಎನ್ನುತ್ತಾರೆ ಶರಣರು. ಅಂತೆಯೇ ಶರಣ ಮಾರ್ಗ, ವ್ಯಷ್ಟಿ ಉದ್ಧಾರದ ಕಡೆಗೆ ಗಮನವನ್ನು ಕೊಟ್ಟಿತು, ತಾನು ಮಾರ್ಗವನ್ನು ಕಾಣದೆ ಇನ್ನೊಬ್ಬರಿಗೆ ಮಾರ್ಗವನ್ನು ತೋರಿಸಹೊರಡುವುದು ಕುರುಡ ಕುರುಡನಿಗೆ ದಾರಿ ತೋರಿಸಿದಂತಾಗುತ್ತದೆ. ಆದ್ದರಿಂದ ಷಟ್‌ ಸ್ಥಲ ಮಾರ್ಗ ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ ಸ್ಥಲಗಳಲ್ಲಿ ಮುಖ್ಯವಾಗಿ ವೃಷ್ಠಿಯ ಉದ್ದಾರದತ್ತ ಗಮನ ಹರಿಸಿತು. ವೃಷ್ಟಿಯ ಉದ್ಧಾರದಲ್ಲಿ ಸಮಷ್ಟಿಯ ಉದ್ದಾರದ ಸೂತ್ರವನ್ನು ಸಮನ್ವಯಗೊಳಿಸಿತು.
 'ಅರಿದರೆ ಶರಣ, ಮರೆದರೆ ಮಾನವ' ಎಂಬ ಸರ್ವಕಾಲಿಕವಾದ ಸರ್ವಸಮ್ಮತವಾದ ಸೂತ್ರವನ್ನು ಬಸವಣ್ಣನವರು ಕೊಟ್ಟಿದ್ದಾರೆ, ಹೀಗೆ ಶರಣರು ಸಮಾಜದಿಂದ ಮೇಲು ಕೀಳು ಎಂಬುದನ್ನು ತೊಡೆದು ಹಾಕಲು ನಿರಂತರ ಶ್ರಮಿಸಿದರು. "ನಾನು ಘನ ತಾನು ಘನವೆಂಬ ಹಿರಿಯರುಂಟೆ ಜಗದೊಳಗೆ? ಹಿರಿಯರ ಹಿರಿಯತನದಿಂದೇನಾಯಿತ್ತು? ಹಿರಿ ಕಿರಿದೆಂಬ ಶಬ್ದವಡಗಿದರೆ ಆತನೇ ಶರಣ.” ಎನ್ನುತ್ತಾರೆ ಅಲ್ಲಮಪ್ರಭು.

ಹೀಗೆ ವಿಧಿ ನಿಷೇಧಗಳು ಅತೀತನಾಗಿ ಆನಂದಮಯವಾದ ಶರಣ ವಿಶ್ವಮಾನವನ ಮಟ್ಟದಲ್ಲಿ ನಿಂತು ಜಗತ್ತನ್ನು ನೋಡುತ್ತಾನೆ
✍️ Dr Prema Pangi
#ಪ್ರೇಮಾ_ಪಾಂಗಿ,#ಷಟ್ಸ್ಥಲ, #ಶರಣ_ಸ್ಥಲ

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma