ಶರಣ ಪರಿಚಯ : ಶಿವಯೋಗಿ ಸಿದ್ಧರಾಮೇಶ್ವರ

ಶರಣ ಪರಿಚಯ :
*ಶಿವಯೋಗಿ ಸಿದ್ಧರಾಮೇಶ್ವರ*
ಇವರು 12 ನೆಯ ಶತಮಾನದ ಶರಣರು, ಕಾರಣಿಕ, ರಾಜಗುರು, ಕರ್ಮಯೋಗಿ ಮತ್ತು ಅನುಭಾವಿ ಶರಣಾಗ್ರೆಯರು.
ಸಿದ್ಧರಾಮರು ಹುಟ್ಟಿದ್ದು ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಸೊನ್ನಲಿಗೆ ಗ್ರಾಮ. ಹುಟ್ಟಿದಾಗ ಇಟ್ಟ ಹೆಸರು ಧೂಳಿಮಾಕಾಳ. ಸೊನ್ನಲಿಗೆಯ ಮೊರಡಿಯ ಮುದ್ದುಗೌಡ, ಸುಗ್ಗವ್ವೆ ಇವರ ತಂದೆ ತಾಯಿ. ಶೈವಸಿದ್ಧ ಸಂಪ್ರದಾಯದಲ್ಲಿ ಸಾಧನೆ ಮಾಡಿ "ಸಿದ್ದರಾಮ" ರಾದರು. ಸಿದ್ಧರಾಮರು ರಾಣಿ ಚಾಮಲಾದೇವಿಯ ಸೊಲ್ಲಾಪೂರದ ಅರಸೊತ್ತಿಗೆಯಲ್ಲಿ ರಾಜಗುರುಗಳಾಗಿ ಕೆರೆ, ಕಾಲುವೆ, ಗುಡಿ ನಿರ್ಮಾಣ ಮಾಡುತ್ತಾ ಜನಸೇವೆಗೆ ಇಳಿದರು. ಜನರ ಕಲ್ಯಾಣಕ್ಕಾಗಿ ಗುಡಿ ಕಟ್ಟಿಸುವ, ಕೆರೆ ಕಟ್ಟಿಸುವ, ಹಾವು ಕಚ್ಚಿ ಒದ್ದಾಡುತ್ತಿರುವವರು, ಅನಾರೋಗ್ಯಕ್ಕೆ ತುತ್ತಾದವರನ್ನು ಉಪಚರಿಸುವ, 
ಅನಾಥ ಶವಗಳ ಕ್ರಿಯಾ ವಿಧಿಗಳನ್ನು ಪೂರ್ಣಗೊಳಿಸುವ ಜವಾಬ್ದಾರಿಯನ್ನು ಸಿದ್ಧರಾಮರು ಕಾಯಕವನ್ನಾಗಿ ಮಾಡಿಕೊಂಡಿದ್ದರು. ಜನಸಾಮಾನ್ಯರ ಜೊತೆ ಬೆರೆತು, ಅವರ ಸಮಸ್ಯೆಗಳನ್ನು ಪರಿಹರಿಸಿ ಅವರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದರು. ಆಗ ಕರ್ಮಯೋಗಿ ಸಿದ್ಧರಾಮ ಎಂದೇ ಪ್ರಸಿದ್ಧಿ ಪಡೆದಿದ್ದರು. ಸೊನ್ನಲಿಗೆಯಲ್ಲಿ ಕಪಿಲಸಿದ್ಧ ಮಲ್ಲಿಕಾರ್ಜುನನ ಲಿಂಗವನ್ನು ಸ್ಥಾಪಿಸಿ ದೇವಾಲಯ ನಿರ್ಮಾಣ ಮಾಡಿದರು. ತಮ್ಮ ಎಲ್ಲ ಕರ್ತತ್ವಕ್ಕೆ ಶ್ರೀಶೈಲ ಮಲ್ಲಿಕಾರ್ಜುನನೆ ಪ್ರೇರಣೆ ತಮ್ಮದು ಬರೀ  ಆದೇಶ ಪಾಲನೆ ಎಂದು ವಚನ ಗಳಲ್ಲಿ ತಿಳಿಸಿ. ಸಿದ್ಧರಾಮನ ಅಲೌಕಿಕ ಶಕ್ತಿಗೆ ಬೆರಗಾದ ನಾಡಿನ ಬೇರೆ ಬೇರೆ ಭಾಗದ ಜನತೆ ಈ ದೇವರಿಗೆ ದಾನದತ್ತಿಗಳನ್ನು ಬಿಟ್ಟ ಬಗೆಗೆ ಅನೇಕ ಶಾಸನಗಳು ದೊರೆಯುತ್ತವೆ.

ಸಿದ್ಧರಾಮರ ಜೀವನದಲ್ಲಿ ಅಲ್ಲಮರ ಆಗಮನ ಒಂದು ಹೊಸ ತಿರುವನ್ನು ಕಂಡುಕೊಂಡಿತು.
ಸೊನ್ನಲಿಗೆಯಲ್ಲಿ ಲೋಕ ಕಲ್ಯಾಣ ಕಾರ್ಯದಲ್ಲಿ ತೊಡಗಿದ್ದ ಸಿದ್ಧರಾಮರನ್ನು ಕಲ್ಯಾಣದ ಶರಣ ಸಂಕುಲಕ್ಕೆ ಕರೆದೊಯ್ಯಬೇಕೆಂದು ಅಲ್ಲಮರು ಯೋಚಿಸಿ ಅವರಲ್ಲಿಗೆ ಬಂದು ಕೆರೆ ಕಟ್ಟುವ ಒಡ್ಡ ಜನಾಂಗವನ್ನು ಕರೆದು, "ಎಲ್ಲಿರುವ ನಿಮ್ಮ ಒಡ್ಡರಾಮ?" ನೆಂದು ಪ್ರಶ್ನಿಸಿದರಂತೆ. ಆ ಕೆಲಸಗಾರರು ಸಿದ್ಧರಾಮರ ಬಳಿ ಬಂದು ಅಲ್ಲಮರ ಟೀಕೆಯ ನುಡಿಗಳನ್ನು ವರದಿ ಮಾಡುತ್ತಾರೆ.
ಅಲ್ಲಮರ ಬಗ್ಗೆ ಯಾವುದೇ ಪರಿಚಯವಿರದ ಸಿದ್ಧರಾಮರು ತಾವು ಮಾಡುವ ಘನ ಕಾರ್ಯವನ್ನು ಟೀಕಿಸುವ ವ್ಯಕ್ತಿ ಯಾರು ಎಂದು  ಕೋಪದಿಂದ ಅಲ್ಲಮರ ಜೊತೆ ವಾಗ್ಯುದ್ಧಕ್ಕೆ ನಿಲ್ಲುತ್ತಾರೆ. ಅಲ್ಲಮ- ಸಿದ್ಧರಾಮರ ಸಂವಾದ ಚರ್ಚೆ ದೀರ್ಘಕ್ಕೆ ಹೋಗಿ ಕೊನೆಗೆ ಸಿದ್ಧರಾಮರಿಗೆ ಸತ್ಯದ ಅರಿವಾಗಿ, ಎಲ್ಲವನ್ನೂ ತ್ಯಜಿಸಿ ಅಲ್ಲಮರ ಜೊತೆಗೆ ಕಲ್ಯಾಣಕ್ಕೆ ಪಯಣ ಬೆಳೆಸಿದರು. "ಅಲ್ಲಮ, ಸಿದ್ಧರಾಮ ಬಲ್ಲಿದೆಲ್ಲರು ಬರಲು ಕಲ್ಯಾಣ ಮನೆಗೆ ಕಳೆ ಬಂತು.' ಎಂಬ ಜನಪದ ಹಾಡು ಈ ಮಾತು ಸಮರ್ಥಿಸುತ್ತದೆ. ಅಲ್ಲಮರ ಜೊತೆ ಪಯಣ ಬೆಳೆಸಿ ಬಂದ ಸಿದ್ಧರಾಮರು ಅನುಭವ ಮಂಟಪಕ್ಕೆ ಕಾಲಿಡುತ್ತಲೇ ಬಸವಣ್ಣನವರ  ವ್ಯಕ್ತಿಪರ  ಜನಪರ ಸಮಾಜಪರ ಕಾರ್ಯವೈಖರಿ ನೋಡಿ ಭಾವಪರವಶರಾಗುತ್ತಾರೆ. ಸಿದ್ಧರಾಮರು ಅನುಭವ ಮಂಟಪದ ಸದಸ್ಯರಾದ ನಂತರ ಬಸವಣ್ಣನವರು ಸಂಸತ್ತಿನ ಸಚೇತಕರಾದ ಚೆನ್ನಬಸವಣ್ಣನವರಿಗೆ ಸಿದ್ಧರಾಮರಿಗೆ ಇಷ್ಟಲಿಂಗ ದೀಕ್ಷೆ ನೀಡಲು ಸೂಚಿಸುತ್ತಾರೆ. ಆಗ ಇಷ್ಟಲಿಂಗ ದೀಕ್ಷೆ ಯಾಕೆ ಮಾಡಬೇಕು? ಅದರ ಮಹತ್ವ, ಅವಶ್ಯಕತೆ ಇದರ ಸುಧೀರ್ಘ ಚರ್ಚೆ ಅನುಭವ ಮಂಟಪದಲ್ಲಿ ಆಗಿ ಚೆನ್ನ ಬಸವಣ್ಣನವರು ಲಿಂಗದೀಕ್ಷೆಯ ಮಹತ್ವವನ್ನು ತಿಳಿಸಿಕೊಡುತ್ತಾರೆ. ಅಲ್ಲಮ ಪ್ರಭುಗಳು ಸಿದ್ಧರಾಮರಿಗೆ ಲಿಂಗದೀಕ್ಷೆಗೆ ಆದೇಶಿಸುತ್ತಾರೆ. ಹೀಗೆ ಧರ್ಮದ ರೂಪ ರೇಶೆ ತಯಾರಿಕೆಗೆ ಸ್ಪಷ್ಟ ನಿಲುವು ತಾಳಲು ಸಿದ್ಧರಾಮರು ಕಾರಣಿಭೂತರಾಗುತ್ತಾರೆ. ಹಿರಿಯರಾದ ಸಿದ್ಧರಾಮರಿಗೆ ಚೆನ್ನಬಸವಣ್ಣನವರು ಇಷ್ಟಲಿಂಗ ದೀಕ್ಷೆ ನೀಡಿ ದೀಕ್ಷಾಗುರುಗಳಾಗುತ್ತಾರೆ.  
'ಕಪಿಲಸಿದ್ಧ ಮಲ್ಲಿಕಾರ್ಜುನ' ಅಂಕಿತ ನಾಮ ದಲ್ಲಿ 1992 ವಚನಗಳನ್ನು ರಚಿಸಿದ್ದಾರೆ. `ಅರುವತ್ತೆಂಟು ಸಾವಿರ ವಚನಂಗಳ ಹಾಡಿ ಹಾಡಿ ಸೋತಿತ್ತೆನ್ನ ಮನ...' ಎಂದು ಸಿದ್ಧರಾಮರು ತಮ್ಮ ವಚನವೊಂದರಲ್ಲಿ ಹೇಳಿಕೊಂಡಿರುವರು. ಕಪಿಲಸಿದ್ಧಮಲ್ಲಿನಾಥಾ'. `ಕಪಿಲಸಿದ್ಧ ಮಲ್ಲೇಶ್ವರಾ', `ಕಪಿಲಸಿದ್ಧಮಲ್ಲೇಶ್ವರ ದೇವರು'; `ಕಪಿಲಸಿದ್ಧಮಲ್ಲೇಶ'; `ಕಪಿಲಸಿದ್ಧಮಲ್ಲಿಕಾರ್ಜುನಂಗ'; `ಕಪಿಲಸಿದ್ಧಮಲ್ಲ' 'ಯೋಗಿನಾಥ' ಈ ಅಂಕಿತಗಳೂ ಕಾಣಬರುತ್ತವೆ.  ಯೋಗಿನಾಥ ಎಂಬ ಅಂಕಿತದೊಂದಿಗೆ ಯೋಗಾಂಗ ತ್ರಿವಿಧಿ ರಚಿಸಿದ್ದಾರೆ.
ಸಿದ್ಧರಾಮರ ವಚನಗಳಲ್ಲಿ ಸಾಮಾಜಿಕ ಕಳಕಳಿ, ಕಾವ್ಯ ಗುಣ, ಸ್ವಾಭಿಮಾನ, ಆತ್ಮಸ್ಥೈರ್ಯ, ಭಾವ ತೀವ್ರತೆ ಮತ್ತು ಗುರು ಬಸವಣ್ಣನವರ ಗಾಢ ಪ್ರಭಾವವನ್ನು ಅವರ ಮೇಲಿಟ್ಟ ಅಪಾರ ಗೌರವ ಪ್ರೀತಿ ಆದರದ ಭಾವನೆ ಕಾಣಬಹುದು.

ಅನುಭವ ಮಂಟಪಕ್ಕೆ ಕಾಲಿಡುತ್ತಲೇ ಭಾವಪರವಶರಾದ ಸಿದ್ಧರಾಮರು ಈ ಹಿಂದೆ ಬಸವಣ್ಣನವರು ತಮ್ಮನ್ನು ಕಲ್ಯಾಣಕ್ಕೆ ಕರೆತರುವ ಪ್ರಯತ್ನ ಮಾಡಿದ್ದನ್ನು ಸ್ಮರಿಸಿಕೊಳ್ಳುತ್ತಾರೆ. ಸಿದ್ಧರಾಮರನ್ನು ಕಲ್ಯಾಣಕ್ಕೆ ಕರೆ ತರುವ ಪ್ರಯತ್ನದಲ್ಲಿ ಬಸವಣ್ಣನವರು ಸೊನ್ನಲಾಪುರಕ್ಕೆ ಬಂದು ಅವರಿಗೆ ನಾನಾ ರೀತಿ ಬುದ್ಧಿವಾದ ಹೇಳಿದ್ದು ಸ್ಮರಿಸುತ್ತ  ಸಿದ್ಧರಾಮರು ಬಸವಣ್ಣನವರು ಬಂದು ಬೈದು ಹೋದದ್ದನ್ನು ಮರೆಯುವೆನೆ? ಅವರು ಬಂದು ಬೈದುದ್ದೇ ಎನಗೆ ದೀಕ್ಷೆಯಾಯಿತು, ಆ ದೀಕ್ಷೆಯಿಂದ ಫಲಪದಕ್ಕೆ  ಲೌಕಿಕ ವಿಚಾರಗಳಿಗೆ ದೂರವಾದೆನು ಎಂದು ಹೇಳುತ್ತಾ ಅಲ್ಲಮ ಪ್ರಭುಗಳು ತಮ್ಮನ್ನು ಕಲ್ಯಾಣಕ್ಕೆ ಕರೆ ತಂದರೂ ತಮಗೆ ಬಸವಣ್ಣನವರೇ ಪರಮಾರಾಧ್ಯವೆಂದಿದ್ದಾರೆ.

*ಅಂದು ಬಸವಣ್ಣ ಬಂದು ಜರಿದು ಹೋದುದ
ಮರೆದೆನೆ ಆ ನೋವ!
ಜರಿದುದೆ ಎನಗೆ ದೀಕ್ಷೆಯಾಯಿತ್ತು!
ಆ ದೀಕ್ಷೆಯ ಗುಣದಿಂದ ಫಲಪದಕ್ಕೆ ದೂರವಾದೆ
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ
ಬಸವಣ್ಣನೆನ್ನ ಪರಮಾರಾಧ್ಯ!

*ಎಲೆ ಎಲೆ ಲಿಂಗವೆ, ನಾನಂದೆ ಬರಲಿಲ್ಲ ಕಲ್ಯಾಣಕ್ಕೆ.
ಎಲೆ ಎಲೆ ಲಿಂಗವೆ, ನಾನಂದೆ ಬರಲಿಲ್ಲ ಮಾರ್ಗಕ್ಕೆ.
ಎಲೆ ಎಲೆ ಲಿಂಗವೆ, ನಾನಂದೆ ಚೆನ್ನಬಸವಣ್ಣನಾಗಲಲ್ಲ.
ಲಿಂಗವೆ ಲಿಂಗವೆ, ಕಪಿಲಸಿದ್ಧಮಲ್ಲಿಕಾರ್ಜುನಾ*. 

ಸಿದ್ಧರಾಮೇಶ್ವರ ಶರಣರು ತಾವು ಬಹಳ ತಡವಾಗಿ ಕಲ್ಯಾಣಕ್ಕೆ ಬಂದುದಕ್ಕೆ ಕಳೆದು ಹೋದ ಸಮಯಕ್ಕೆ ಮರುಗು ತ್ತಾರೆ. ಬಸವಣ್ಣನವರು ಕರೆದಾಗಲೇ ಬಂದಿದ್ದರೆ ಆಗಲೇ ಸರಿಯಾದ ಮಾರ್ಗಕ್ಕೆ ಬರುತ್ತಿದ್ದೆ. ಅವರ ಸಂಗದಲ್ಲಿ ನಾನು ಚೆನ್ನಬಸವಣ್ಣನಂತೆ ಅವಿರಾಳಜ್ಞಾನಿ ಯಾಗುತ್ತಿದ್ದೆ. ಲಿಂಗವೇ ಲಿಂಗವೇ ಎನ್ನುತ್ತಾ ತಾವು ಪೂಜೆ ಮಾಡಿಕೊಳ್ಳುತ್ತಿದ್ದ ಇಷ್ಟಲಿಂಗದಲ್ಲಿ 
ಲಿಂಗಪರವಶರಾಗುತ್ತಾರೆ.

*ಅಯ್ಯಾ, ನೀವೆನ್ನ ಕರಸ್ಥಲಕ್ಕೆ ಬಂದಿರಾಗಿ, ಆನು ತನುಪ್ರಾಣ ಇಷ್ಟಲಿಂಗಿಯಾದೆನು.
ಅಯ್ಯಾ, ನಿನ್ನ ಪ್ರಸಾದ ಪಾದೋದಕಕ್ಕೆ ಯೋಗ್ಯನಾದೆ.
ಅಜಾತನೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ಆನು ನೀನೆಂಬ ಕನ್ನಡವಿನ್ನೇಕಯ್ಯ*?

ಇಷ್ಟಲಿಂಗ ದೀಕ್ಷೆ ಪಡೆದ ನಂತರ ಸಂತೋಷ ಭರಿತರಾಗಿ ನುಡಿದ ವಚನ ಇದು.
ಶಿವನ ಕುರುಹೇ ಆಗಿ ಈಗ ನೀವು ನನ್ನ ಕರಸ್ಥಲಕ್ಕೆ ಬಂದ ಕಾರಣ, ನಾನು, ತನು ಮತ್ತು ಪ್ರಾಣ ಇಷ್ಟಲಿಂಗಿಯಾದನು. ಪ್ರಸಾದ  ಹಾಗೂ ಜ್ಞಾನದ ಪಾದೋದಕ ಪಡೆದ ಬಳಿಕ, ಇಷ್ಟದೇವ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ನಾನು ನೀನೆಂಬ ಬೇರೆ ಭಾವ ಅಳಿಯಿತು. ಅಜಾತನಾದ ಹುಟ್ಟು ಸಾವು ಇಲ್ಲದ ನಿರಾಕಾರ ನಿರ್ಗುಣ ದೇವನೇ, ಇನ್ನು ನಾನು ನೀನು ಎಂಬ ಅಂತರ ಏಕಯ್ಯಾ ಎಂದು ಪ್ರಶ್ನಿಸುತ್ತಾರೆ. 

ಸಿದ್ಧರಾಮ ಶಿವಯೋಗಿಗಳು ಬಸವಣ್ಣನವರ ಸಾಮೀಪ್ಯಕ್ಕೆ ಬಂದ ಮೇಲೆ ಅವರ ವ್ಯಕ್ತಿತ್ವಕ್ಕೆ ಮಾರು ಹೋಗಿ ತನು ಮನ ಪ್ರಾಣ ಶುದ್ಧೀಕರಿಸಿ ಬಸವಾಕ್ಷರ ಮಂತ್ರವನ್ನೇ ಬದುಕಿದರು. ಅವರಿಗೆ ಬಸವಣ್ಣನವರೇ ಸರ್ವಸ್ವ. ಅವರೇ ಗುರು ಲಿಂಗ ಜಂಗಮದ ಪ್ರತೀಕ.

*ಪಾವನವಾದೆನು ಬಸವಣ್ಣಾ,
ನಿಮ್ಮ ಪಾವನಮೂರ್ತಿಯ ಕಂಡು.
ಪರತತ್ವವನೈದಿದೆ ಬಸವಣ್ಣಾ,
ನಿಮ್ಮ ಪರಮಸೀಮೆಯ ಕಂಡು.
ಪದ ನಾಲ್ಕು ಮೀರಿದೆ ಬಸವಣ್ಣಾ,
ನಿಮ್ಮ ಪರುಷಪಾದವ ಕಂಡು
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿದೆ;
ಬಸವಣ್ಣಾ, ಬಸವಣ್ಣಾ, ಬಸವಣ್ಣಾ,
ನೀನು ಗುರುವಾದೆಯಾಗಿ*.

ಇಲ್ಲಿ ಸಿದ್ಧರಾಮರಿಗೆ ಬಸವಣ್ಣನವರೇ ಪಾವನಮೂರ್ತಿಯಾಗಿ ಕಂಡು ಅವರನ್ನು ಕಂಡು ತಾನು ಪಾವನನಾದೇನು ಎನ್ನುತ್ತಾರೆ. ಗುರು ಲಿಂಗ ಜಂಗಮದ ಹೊಸ ಸೂತ್ರ ಸಿದ್ಧಪಡಿಸಿದ ಬಸವಣ್ಣನವರ ಕ್ರಾಂತಿಯ ಕಂಡು ಬೆರಗಾದರು ಸಿದ್ಧರಾಮರು “ಪಾವನವಾದೆನು ಬಸವಣ್ಣ” ಎಂದು ಉದ್ಗರಿಸಿದ್ದಾರೆ. ಪರತತ್ವವನ್ನು ಲಿಂಗ ಮುಖೇನ ಹೇಳಿದ ಬಸವಣ್ಣನವರ ವೈಚಾರಿಕ ನಿಲುವಿನ ಸೀಮೆ ಅಗಾಧವಾದದ್ದು. ನಾಲ್ಕು ಪದ ಅಂದರೆ ಧರ್ಮ ಕಾಮ ಅರ್ಥ ಮೋಕ್ಷ, ಇವುಗಳನ್ನು ಮೀರಿದ  ಅರಿವು ಬಸವಣ್ಣ. ಇಂತಹ ಪರುಷಮಣಿಯಾದ ಜ್ಞಾನಿಯ ಪಾದ ಕಂಡು, ಅರಿತು ಶಿವನ ಕೂಡಿದೆ. (ಐಕ್ಯಸ್ತಲ) ಬಸವಣ್ಣಾ, ಬಸವಣ್ಣಾ, ಬಸವಣ್ಣಾ ನೀವೆನ್ನ ಗುರುವಾದಿರಿ ಎಂದು ಭಾವ ಪರವಶರಾಗಿ ಉದ್ಗರಿಸಿದ್ದಾರೆ.

*ಮಾಡಿದರು ಮಾಡಿದರು ತನ್ನ ಹಿತಕ್ಕಲ್ಲದೆ, 
ಮತ್ತಾರ ಹಿತಕ್ಕಲ್ಲ ನೋಡಯ್ಯಾ,
ತನ್ನ ಬಿಟ್ಟನ್ನಹಿತವ ನೋಡಿದಡೆ
ಕೂಡಿಕೊಂಬ ನಮ್ಮ ಕಪಿಲಸಿದ್ದಮಲ್ಲಿಕಾರ್ಜುನ*
ಎಂದು ಎಲ್ಲರೂ ಬರೀ ತಮ್ಮ ಹಿತಕ್ಕಾಗಿಯೇ ಕಾರ್ಯ ಮಾಡುತ್ತಾರೆ. ಬೇರೆಯವರ ಹಿತಕ್ಕಾಗಿ ಯೋಚಿಸಿ ಕಾರ್ಯ ಮಾಡುವದಿಲ್ಲ. ನಮ್ಮ ಸ್ವಾರ್ಥ, ಹಿತ ನೋಡದೆ ಸಮಾಜ ಸೇವೆ ಮಾಡಿದರೆ ಮಾತ್ರ ನಮ್ಮ ಶಿವನಲ್ಲಿ ಕೂಡಲು ಸಾಧ್ಯ ಎಂದು ತಿಳಿಸುತ್ತಾರೆ.

"ದೇಹ ನಾನಲ್ಲ, ಜೀವ ನಾನಲ್ಲವೆಂಬುದದು ಶಿವನೆನಿಸಿತ್ತು.
ಶಿವ-ಜೀವಂಗೆ ಭೇದವೆಂಬುದು ಇಲ್ಲ ಕಾಣಾ.
ಉದಕವಿದ್ದೆಡೆಯಲ್ಲಿ, ಗಗನಪರಿಪೂರ್ಣದಲ್ಲಿ,
ರವಿ ತಾರೆ ಮೇಘವಾದಂತೆ-
ಪರಿಪೂರ್ಣ ವಸ್ತುವೆ ಚಿದಾಕಾಶದಲ್ಲಿ ಶಿವ ಜೀವ ಮಾಯಾ
ಪ್ರಕೃತಿ ಎನಿಸಿತ್ತಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ*. 

ದೇಹ ನಾನಲ್ಲ ಅಂದರೆ ಸಪ್ತಧಾತು ಅಂದರೆ  ರಸ, ರಕ್ತ, ಮಾಂಸ, ಮೇದಸ್ಸು, ಅಸ್ಥಿ, ಮಜ್ಜೆ, ಶುಕ್ರ ಗಳಿಂದ ಆದ ದೇಹ ನಾನಲ್ಲ. 
ಜೀವ ನಾನಲ್ಲ. ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನವೆಂಬ ಪಂಚ ಪ್ರಾಣಗಳೂ ನಾನಲ್ಲ. ದೇಹ ಮತ್ತು ಜೀವ ನಾನಲ್ಲವೆಂಬುದು ತಿಳಿದರೆ  ಶಿವ ಸಾಕ್ಷಾತ್ಕಾರ ವಾಗುತ್ತದೆ. ಶಿವ-ಜೀವನಿಗೆ ಭೇದವಿಲ್ಲ. ನೀರು ಮತ್ತು ಪರಿಪೂರ್ಣವಾದ ಗಗನವಿದ್ದರೆ
ರವಿ ತಾರೆ ಮೋಡಗಳು ಸೃಷ್ಟಿ ಯಾಗುತ್ತವೆ. ಅದೇ ರೀತಿ ಪರಿಪೂರ್ಣವಾದ ಪರವಸ್ತುವೇ  ಚಿತ್ ಆಕಾಶದಲ್ಲಿ ಶಿವ ಜೀವ ಮಾಯಾ
ಪ್ರಕೃತಿ ಎನಿಸುತ್ತದೆ.

#*ಜಲದ ಸಿಂಹಾಸನದ ಕೆಲದಲಷ್ಟಮ ಬೆಟ್ಟ
ಕುಲಗಿರಿಗಳೆರಡು ಮತ್ತಿಕ್ಕೆಲದ.
ನೆಲೆಯನರಿಯರು ಬ್ರಹ್ಮಕುಲವನರಿಯರು
ಯೋಗ ಹೊಲಬುಗೆಟ್ಟರು ಯೋಗಸಿದ್ಧರೆಲ್ಲ.
ಈರಾರನೊಂದೆಂದು ಹಿಡಿದಾತ ನಿಷ್ಕಲ ಯೋಗಿ
ತಾ ಕಪಿಲಸಿದ್ಧಮಲ್ಲಿನಾಥ*.

ದೇಹವೆಂಬ ಜಲದ ಸಿಂಹಾಸನದಲ್ಲಿ ಅಷ್ಟಮದ ಗಳೆಂಬ ಎಂಟು ಬೆಟ್ಟಗಳು
ಅಹಂಕಾರ ಮಮಕಾರಗಳೆಂಬ ಎರಡು  ಕುಲಗಿರಿಗಳು ಮತಿ ಇಲ್ಲದ 
ನೆಲೆಯನ್ನು ಅರಿಯದ  ಪರ ಬ್ರಹ್ಮ ಸ್ವರೂಪವನ್ನು ಅರಿಯದೇ 
ಅಷ್ಟಾಂಗಯೋಗಮಾಡಿ ಯೋಗಸಿದ್ಧರೆಲ್ಲ    ಹೊಲಬುಗೆಟ್ಟರು.ಆರು ಅಂಗಸ್ಥಲ, ಆರು ಲಿಂಗಸ್ಥಲಗಳಾದ ಹನ್ನೆರಡನ್ನು ಒಂದೇ ಪರಬ್ರಹ್ಮದಿಂದಾದುವೆಂದು ಭಾವಿಸಿ ಇಷ್ಟಲಿಂಗರೂಪದಿಂದ ಕರಸ್ಥಲಕ್ಕೆ ಬಂದಿತೆಂದು ಅದರ ಏಕರೂಪವನ್ನು ಕಂಡುಕೊಳ್ಳುವವ ಯೋಗಿಯೇ ನಿಷ್ಕಲ ಯೋಗಿ. ಇದು ಷಟಸ್ಥಲಮಾರ್ಗದ ಶಿವಯೋಗ. ನಿತ್ಯ ಶಿವಯೋಗ ಸಾಧನೆ ಮಾಡಿದ  ಕರ್ಮಯೋಗಿ ಸಿದ್ಧರಾಮರು ಮುಂದೆ  "ಶಿವಯೋಗಿ ಸಿದ್ಧರಾಮ" ಎಂದು ಕರೆಸಿಕೊಂಡರು.

*ಯೋಗವ ಸಾಧಿಸಿದವನೊಬ್ಬ ನಿಜಗುಣ;
ಯೋಗವ ಸಾಧಿಸಿದವನೊಬ್ಬ ವೃಷಭಯೋಗೀಶ್ವರ;
ಯೋಗವ ಸಾಧಿಸಿದವನೊಬ್ಬ ಶಿವನಾಗಮಯ್ಯ;
ಯೋಗವ ಸಾಧಿಸಿದೆ ನಾನೊಬ್ಬ
ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಕೂಡುವ ಯೋಗವ*.

ಶಿವಯೋಗ ಸಾಧಿಸಿದ ವೃಷಭಯೋಗೀಶ್ವರ, ಶಿವನಾಗಮಯ್ಯ, ನಿಜಗುಣ ಅವರಂತೆ ತಾನೂ ಸಹ ನಿರಾಕಾರನಿರ್ಗುಣ ಶಿವನಲ್ಲಿ ಕೂಡುವ ಶಿವಯೋಗ ಸಾಧಿಸಿದ ಶಿವಯೋಗಿ ಎಂದು ತಿಳಿಸುತ್ತಾರೆ.

#*ಅಹುದಹುದು ಮತ್ತೇನು?
ಮರಹಿಂಗೆ ಹಿರಿದು ಕಿರಿದುಂಟಲ್ಲದೆ,
ಅರುಹಿಂಗೆ ಹಿರಿದು ಕಿರಿದುಂಟೆ? ಹೇಳಯ್ಯಾ.
ಸಾವಂಗ ಭಯವುಂಟಲ್ಲದೆ ಅಜಾತಂಗೆ ಭಯವುಂಟೆ? ಹೇಳಯ್ಯಾ.
ಕಪಿಲಸಿದ್ಧಮಲ್ಲಿನಾಥನಲ್ಲಿ
ಮಹಾದೇವಿಯಕ್ಕನ ನಿಲುವಿಂಗೆ ಶರಣೆಂದು ಶುದ್ಧನಾದೆ ಕಾಣಾ,ಚೆನ್ನಬಸವಣ್ಣಾ*.

ಅನುಭವ ಮಂಟಪಕ್ಕೆ ಅಕ್ಕ ಮಹಾದೇವಿಯ ಆಗಮನದ ನಂತರ ಅಧ್ಯಕ್ಷ ಅಲ್ಲಮ ಪ್ರಭುಗಳು ಹಲವು ಪ್ರಶ್ನೆಗಳನ್ನು ಕೇಳಿ ಪರೀಕ್ಷೆ ಮಾಡಿ ನೋಡಲು, ಅವಳ ವೈರಾಗ್ಯ, ಅರಿವು ಗಳಿಂದ ಸಿದ್ಧರಾಮೇಶ್ವರರು ಸಂತಸಗೊಂಡು ನುಡಿದ ವಚನ. ಅಕ್ಕ ಮಹಾದೇವಿ ಎಲ್ಲರಗಿಂತ ಚಿಕ್ಕವಳು, ಆದರೂ ಅರಿವಿನಲ್ಲಿ ಹಿರಿಯ ಆಗಿ ಅಕ್ಕ ಎನಿಸಿ ಕೊಂಡಳು.

#"ಲಿಂಗ ಗುಣಗಳ ತಿಳಿದು, ಅಂಗಗುಣಗಳನತಿಗಳೆದು ಲಿಂಗವಾದುದೇ ಸ್ವರ್ಗ" ಎನ್ನುತ್ತಾರೆ ಶಿವಯೋಗಿ ಸಿದ್ಧರಾಮರು. 

ಕೈಲಾಸವನ್ನು ಕುರಿತು ಸಿದ್ದರಾಮರು ಹೇಳುವುದು :
#*ಕೈಲಾಸ ಕೈಲಾಸವೆಂದು ಬಡಿದಾಡುವ ಅಣ್ಣಗಳಿಲಾ ಕೇಳಿರಯ್ಯ, .....
 ಅಂಗಾಂಗ ಸಮರಸವ ತಿಳಿದು ನಿಮ್ಮ ಪಾದ ಪದ್ಮದೊಳು
ಬಯಲಾದ ಪದವಿ ಕೈಲಾಸವಯ್ಯ ಕಪಿಲಸಿದ್ಧ ಮಲ್ಲಿಕಾರ್ಜುನಯ್ಯ*,

ಕೈಲಾಸ ವೆಂದರೆ ದೂರದ ಬೆಟ್ಟವಲ್ಲ. ಬಯಲಾದ ಪದವಿ ಕೈಲಾಸ ಅಂದರೆ ಲಿಂಗಾಂಗ ಸಾಮರಸ್ಯ ದಲ್ಲಿ ನೀಜೈಕ್ಯರಾಗಿ ಪರಮಾತ್ಮನಲ್ಲಿ ಕೂಡಿ ಶಿವಾತ್ಮರಾದರೆ ಅದುವೇ ಕೈಲಾಸ ವೆಂದು ತಿಳಿಸಿದ್ದಾರೆ."ಇಲ್ಲಿ ಬಯಲಾಗು ” ಎಂಬ ಮಾತು ಬರುತ್ತದೆ. ಶರಣರ ಮೋಕ್ಷದ ಕಲ್ಪನೆಯಲ್ಲಿ ಈ ಮಾತು ಬಹಳ ಪ್ರಮುಖ ಪಾತ್ರ ವಹಿಸುತ್ತದೆ.

#*ಮದ್ದುತಿಂದ ಮನುಜನಂತೆ ವ್ಯರ್ಥಹೋಗದಿರಾ, ಮನವೆ,
ವರ್ಷದಲಾದಡೂ ಒಂದು ದಿವಸ ಶಿವರಾತ್ರಿಯ ಮಾಡು ಮನವೆ.
ಕಪಿಲಸಿದ್ಧಮಲ್ಲೇಶನೆಂಬ ಇಷ್ಟಲಿಂಗಕ್ಕೆ*.

ವರ್ಷದಲ್ಲಿ ಒಂದು ದಿನ ಬರುವ ಶಿವರಾತ್ರಿ ಆಚರಿಸಿ ಮನದಲ್ಲಿ ಶಿವ ಧ್ಯಾನ ಮಾಡಿ ಎಂದು ತಿಳಿಸುತ್ತಾರೆ.

#*ಅಂಗವೇ ಲಿಂಗವಾಗಿಹೆನೆಂಬವನ ಭಾವ 
ಇದರಲ್ಲೇ ನಿಶ್ಚಯ ನೋಡಾ ಮನವೆ.
ಸ್ತುತಿ ನಿಂದೆಗಳಲ್ಲಿ ಹರ್ಷರೋಷಗಳಿಲ್ಲದಿರಬೇಕು.
ನೀಚಾನೀಚ ಗುಣವ ನೋಡದೆ ನಮ್ಮ ಭಾಷಾವಂತನಾಗಬೇಕು.
ಸರ್ವ ಜೀವಿಗಳ ತನ್ನಂತೆ ತಿಳಿದು ನೋಡಬೇಕು.
ಸಂಶಯಾಸಂಶಯವಳಿದು ನಿಶ್ಚಿಂತನಾಗಬೇಕು.
ಆಕಾಶದ ಬೆಳಗಿನ ಬೆಳಗ ನೋಡಿ ಬೆಳಗುಮಯನಾಗಬೇಕು. ನೋಡಾ ಎಲೆ ಮನವೆ, ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ*.

ಎಂದು ಶರಣರು ಇರುವ ವಿಧಾನ ತಿಳಿಸುತ್ತಾರೆ. ತನ್ನ ಅಂಗವೇ ಲಿಂಗವಾಗಿದೆ ಎನ್ನುವ ಭಾವ, ನಿಶ್ಚಯವಾದ ಮನ,
ಸ್ತುತಿ ನಿಂದೆಗಳಲ್ಲಿ, ಹರ್ಷ ಮತ್ತು ರೋಷ ಗಳಿಲ್ಲದೇ ಸ್ತಿತಿಪ್ರಜ್ಞ ನಾಗಿರಬೇಕು.
ನೀಚಾನೀಚ ಗುಣ ಗಳನ್ನು ನೋಡದೆ ಸದುವಿನಯದ ಭಾಷಾವಂತನಾಗಬೇಕು.
ಸರ್ವ ಜೀವಿಗಳನ್ನು ತನ್ನಂತೆ ತಿಳಿಯಬೇಕು. ಎಲ್ಲಾ ಸಂಶಯ ನಾಶಮಾಡಿ ಸಂಶಾತೀತ ನಾಗಿ ನಿಶ್ಚಿಂತನಾಗಬೇಕು. ಆಕಾಶದ ಬೆಳಗಿನ ಬೆಳಗ ನೋಡಿ ಬೆಳಗುಮಯನಾಗಬೇಕು. 

#*ಅಣುವಿನೊಳಗೆ ಅಣುವಾಗಿಪ್ಪಿರಿ, ಎಲೆ ದೇವಾ, ನೀವು;
ಮನದೊಳಗೆ ಘನವಾಗಿಪ್ಪಿರಿ ಎಲೆ ದೇವಾ.
ಜಗದೊಳಗೆಲ್ಲಿಯೂ ನೀವಿಲ್ಲದೆಡೆಯುಂಟೆ?
ಎಂಬತ್ತು ನಾಲ್ಕು ಲಕ್ಷ ಶಿವಾಲಯಂಗಳ ಮಾಡಿ
ನೀವು ಒಮ್ಮನದೊಳಗಿಪ್ಪುದ ಕಂಡು ನಾನು ಮಾಡಿದೆನಲ್ಲದೆ, ಕಪಿಲಸಿದ್ಧಮಲ್ಲಯ್ಯಾ,
ಎನಗೆ ಬೇರೆ ಸ್ವತಂತ್ರವಿಲ್ಲವೆಂದರಿವೆನು*.

ದೇವಾ ನೀವು ಅಣುವಿನೊಳಗಿನ ಅಣು ರೇಣು ಸ್ವರೂಪ , ದೇವಾ, ನೀವು ನಮ್ಮ ಮನದೊಳಗಿನ ಘನ ಸ್ವರೂಪ. ದೇವಾ,
ಜಗದೊಳಗೆ ನೀವಿಲ್ಲದ ಸ್ಥಳ ಯಾವುದೂ ಇಲ್ಲ. ಎಂಬತ್ತನಾಲ್ಕು ಲಕ್ಷ ಶಿವಾಲಯಗಳನ್ನು 
ನಿಮ್ಮಲ್ಲಿ  ಒಮ್ಮನವಾಗಿಯೇ ಮಾಡಿದ್ದರಿಂದ ಅದರ ಕರ್ತ ನೀನೇ ದೇವಾ ಎಂದು ಎಲ್ಲ ಶಿವೆಚ್ಛೆ ಎನ್ನುತ್ತಾರೆ.

#*ಸರ್ವಂ ಶಿವಮಯಂ ಜಗತ್' ಎಂಬುದ ತಿಳಿಯದೆ ನುಡಿದವರ ನುಡಿಯಂತೆ ನಡೆಯದಿರಾ ಮನವೆ.
`ಸರ್ವಂ ಶಿವಮಯಂ ಜಗತ್' ಎಂದು ತಿಳಿದು ತಿಳಿದು ಸುಖಿಯಾಗು ಮನವೆ.
ಪಿಂಡ ಬ್ರಹ್ಮಾಂಡಕ್ಕೆ`ತಿಲಷೋಡಶಭಾಗೇನ ಭೇದೋ ನಾಸ್ತಿ ವರಾನನೇ' ಎಂಬುದು ಪುಸಿಯಲ್ಲ ನೋಡಾ ಮನವೆ.ಈಶ್ವರನ ಪಂಚಮುಖಂದ ಪಂಚತತ್ವಗಳುದಯಿಸಿದವು.ಈ ತತ್ವಂಗಳೊಂದೊಂದು ಕೂಡಿ ತನ್ನ ಚೈತನ್ಯ ಬೆರಸಿದಲ್ಲಿ,ಪಿಂಡ ಬ್ರಹ್ಮಾಂಡವೆನಿಸಿತ್ತು ನೋಡಾ ಮನವೆ.
ತನ್ನ ತಾನರಿದು ನೋಡಿದಡೆ,`ಸರ್ವಂ ಶಿವಕಪಿಲಸಿದ್ಧಮಲ್ಲಿಕಾರ್ಜುನಮಯಂ ಜಗತ್'ಎಂದರಿದು ಬಂದಿತ್ತು ನೋಡಾ ಮನವೆ*.

`ಸರ್ವಂ ಶಿವಮಯಂ ಜಗತ್' ಇದನ್ನು ತಿಳಿಯದೇ ಅನ್ನಬಾರದು. ತಿಳಿದು ತಿಳಿದು ಸುಖಿಯಾಗಬೇಕು. ಈಶ್ವರನ ಪಂಚಮುಖ ದಿಂದ ಪಂಚತತ್ವಗಳು ಉದಯಿಸಿದವು.ಈ ಪಂಚ ತತ್ವಂಗಳೊಂದಿಗೆ ಶಿವ ಚೈತನ್ಯ ವು ಕೂಡಿ ಜಗತ್ ನಿರ್ಮಾಣ ವಾಯಿತು.
'ತನ್ನ ತಾನರಿದು ನೋಡಿದಡೆ' ಮಾತ್ರ  ಸರ್ವಂ ಶಿವಮಯಂ ಜಗತ್ ಎಂದು ಅರಿವಾಗುವುದು ಎಂದು ಜ್ಞಾನ ಅರಿವಿನ ಮಹತ್ವ ತಿಳಿಸುತ್ತಾರೆ.

#*ಹಸಿವುದೋರದ ಮುನ್ನ, ತೃಷೆದೋರದ ಮುನ್ನ,
ವ್ಯಾಧಿವಿಪತ್ತುಗಳು ಬಂದಡಸದ ಮುನ್ನ,
ಕಪಿಲಸಿದ್ಧಮಲ್ಲಿಕಾರ್ಜುನಂಗವ ಪೂಜಿಸೋ ಮುನ್ನ ಮುನ್ನ*!

ಹಸಿವು ಬಾಯಾರಿಕೆ ತೊರುವ ಮುನ್ನ,
ವ್ಯಾಧಿವಿಪತ್ತುಗಳು ಬರುವ ಮುನ್ನ,
ಶಿವನನ್ನು ಪೂಜಿಸೋ ಎಂದು ತಿಳಿಹೇಳಿದರು. ಬರೀ ಕಷ್ಟ ಬಂದಾಗ ಮಾತ್ರ ದೇವರನ್ನು ನೆನೆಯದೇ ಸುಖ ಕಾಲದಲ್ಲಿ ಇದ್ದಾಗಲೇ ಪೂಜಿಸು ಎನ್ನುತ್ತಾರೆ.

#*ಕೆರೆಯ ನೀರು, ಮರದ ಪುಷ್ಪ ಧರಿಸಿದಡೇನು ಅಯ್ಯಾ,
ಆಗುವುದೆ ಆಗುವುದೆ ಲಿಂಗಾರ್ಚನೆ?
ನೀರೆರೆಯಲಿಕ್ಕಾತನೇನು ಬಿಸಿಲಿನಿಂದ ಬಳಲಿದನೆ?
ಪುಷ್ಪದಿಂದ ಧರಿಸಲಿಕ್ಕಾತನೇನು ವಿಟರಾಜನೆ?
ನಿನ್ನ ಮನವೆಂಬ ನೀರಿಂದ, 
ಜ್ಞಾನವೆಂಬ ಪುಷ್ಪದಿಂದ ಪೂಜಿಸಬಲ್ಲಡೆ
ಭಕ್ತನೆಂಬೆ, ಮಹೇಶ್ವರನೆಂಬೆ ನೋಡಾ, 
ಕಪಿಲಸಿದ್ಧ ಮಲ್ಲಿಕಾರ್ಜುನಾ*.

#'ಮನವೆಂಬ ನೀರಿನಿಂದ, 
ಜ್ಞಾನವೆಂಬ ಪುಷ್ಪದಿಂದ ಲಿಂಗ ಪೂಜಿಸಿದರೆ ಮಾತ್ರ ಭಕ್ತ, ಮಹೇಶ್ವರ' ಎಂದು 
ಪೂಜೆ ಕಾಟಾಚಾರಕ್ಕೆ ಅರ್ಥವಿಲ್ಲದೆ ಮಾಡಬಾರದು. ಅರಿವಿನಿಂದ ಪೂರ್ಣ ಮನದಿಂದ ಮಾಡಿದವರು ಮಾತ್ರ ಸಾಧಕರು ಎಂದು ಪೂಜೆ ಮಾಡುವ ಸರಿಯಾದ ಮಾರ್ಗ ತಿಳಿಸಿದ್ದಾರೆ.

ತಾವು ಮಾಡಿದ ಜನಹಿತ ಕಾರ್ಯಗಳನ್ನು ತೋರಿಸಲು ಬಸವಣ್ಣ, ಚೆನ್ನಬಸವಣ್ಣ ಮಡಿವಾಳ ಮಾಚಿದೇವ ಮುಂತಾದ ಶರಣರನ್ನು ಸೊನ್ನಲಾಪುರಕ್ಕೆ ಕರೆ ತರುತ್ತಾರೆ.  ಬಸವಣ್ಣ ಮತ್ತು ಚೆನ್ನಬಸವಣ್ಣ ಇಬ್ಬರನ್ನು ಎರಡು ಕುದುರೆಗಳ ಮೇಲೆ ಕುಳ್ಳಿರಿಸಿ ಮೆರವಣಿಗೆಯಲ್ಲಿ ಕರೆದೊಯ್ಯುವರು. ಆ ಸ್ಥಳವನ್ನೇ ‘ಜೋಡು ಬಸವಣ್ಣನವರ ಗುಡಿ’ ಎಂದು ಕರೆಯುತ್ತಾರೆ. 
`ಶಿವಯೋಗಿಯ ಶರೀರಂ ವೃಥಾ ಸವೆಯಲಾಗದು ಅನುಗೊಂಬನಿತು ಕಾಯಕಂ ನಡೆಯುತಿರಬೇಕು' ಎಂದು ತಮ್ಮ ರಾಜಗುರು ಕಾಯಕ ನಿರ್ವಹಣೆಗೆ ಶರಣರ ಅಪ್ಪಣೆ ಪಡೆದು ಸೊನ್ನಲಿಗೆ ಗೆ ತೆರಳುತ್ತಾರೆ.

ಕಲ್ಯಾಣ ರಕ್ತಕ್ರಾಂತಿಯ ನಂತರ ಚೆನ್ನ ಬಸವಣ್ಣನವರ ನೇತೃತ್ವದಲ್ಲಿ ಶರಣರು ಸೊನ್ನಲಾಪುರ ಅಂದರೆ ಇಂದಿನ ಸೊಲ್ಲಾಪುರಕ್ಕೆ ಬಂದು ಸಿದ್ಧರಾಮನನ್ನು ಭೇಟಿಯಾಗಿ  ಅಲ್ಲಿ ಸ್ವಲ್ಪ ದಿನ ತಂಗುತ್ತಾರೆ. ಅಲ್ಲಿ ರಾಣಿ ಚಾಮಲಾದೇವಿಯ ಸೈನಿಕರ ಸಹಾಯದೊಂದಿಗೆ ಬಿಜ್ಜಳನ ಮಗ ಸೋವಿದೇವನ ಸೈನಿಕರನ್ನು ಹಿಮ್ಮೆಟ್ಟಿಸಲು ಸಾಧ್ಯವಾಯಿತು ಎಂದೆನ್ನಬಹುದು. ಶರಣರ ಮುಂದಿನ ಮಾರ್ಗವನ್ನು, ಪ್ರಮುಖ ಕಾರ್ಯಗಳಾದ ವಚನ ಸಾಹಿತ್ಯ ರಕ್ಷಣೆ, ಶರಣರ ಜೀವ ರಕ್ಷಣೆಯನ್ನು ರಾಜಗುರುಗಳಾದ ಸಿದ್ಧರಾಮೇಶ್ವರರೊಡನೆ ಸಮಾಲೋಚಿಸಿ ಕದಂಬರ ಆಧಿನದಲ್ಲಿದ್ದ  ಉಳವಿಗೆ ಹೋಗಲು ನಿರ್ಧರಿಸುತ್ತಾರೆ. ಈ ವಿಷಯ ಕದಂಬರಿಗೆ ಸಂದೇಶ ಕಳಿಸಿ ದಾರಿಯ ಮಧ್ಯೆ ಶರಣರ ರಕ್ಷಣೆ ಕೋರುತ್ತಾರೆ ಸಿದ್ಧರಾಮರು. ಬಲಾಢ್ಯ ಸೋಮಿದೇವನ ಸೇನೆಯಿಂದ  ರಾಣಿ ಚಾಮಲಾದೇವಿಗೆ ತೊಂದರೆಯಾಗಬಾರದೆಂದು ಶರಣರು ಸೊನ್ನಲಾಪುರ ದಿಂದ ಉಳವಿಗೆ  ವಚನಗಳ ಕಟ್ಟನ್ನು ಹೊತ್ತು ಸಾಗುತ್ತಾರೆ. ತಮ್ಮ ಜೀವದ ಭರವಸೆ ಇಲ್ಲದ ಕಾರಣ, ಚೆನ್ನಬಸವಣ್ಣನ ವರು ಹೋಗುವುದಕ್ಕಿಂತ ಮೊದಲು ಸಿದ್ಧರಾಮರನ್ನು ಮೂರನೆಯ ಶೂನ್ಯ ಪೀಠಾಧಿಪತಿಗಳಾಗಿ ಮಾಡುತ್ತಾರೆ. 
ನಂತರ ಹಲವು ವರ್ಷಗಳ ಕಾಲ ಸಿದ್ಧರಾಮರು ದೇಶ ಸಂಚಾರ ಮಾಡಿ  ಅಲ್ಲಲ್ಲಿ ಚದುರಿ ಹೋಗಿ ಧರ್ಮ ಪ್ರಸಾರ ಮಾಡುತ್ತಿದ್ದ ಶರಣರನ್ನು ಭೇಟಿಯಾಗಿ ಅವರನ್ನು ಹುರಿದುಂಬಿಸಿ ಶರಣ ಧರ್ಮ ಉಳಿಯುವಂತೆ ಮಾಡುತ್ತಾರೆ. ಸಿದ್ಧರಾಮೇಶ್ವರರು ಸಂಚರಿಸಿ ಶಿವಯೋಗಾನುಷ್ಟಾನ ಮಾಡಿದ ಸ್ಥಳಗಳೆಲ್ಲಾ ಗದ್ದುಗೆಗಳಾಗಿವೆ. ಅವರ 77 ಗದ್ದುಗೆಗಳನ್ನು ಗುರುತಿಸಿದ್ದಾರೆ. ಸೊಲ್ಲಾಪುರ, ಸೊನ್ನಲಿಗೆ,  ಗ್ಯಾರನಗಟ್ಟ, ಕಾರೇಕುರ್ಚಿ, ಗೋಡೇಕೆರೆ, ಯಳನಾಡು, ಬೆಳಗುಂಬ, ಅರಸೀಕೆರೆ, ಕಡೂರಿನ ಸೊಲ್ಲಾಪುರ ಅಭಿನವ ಸೊನ್ನಲಿಗೆ ಇವು  ಪ್ರಸಿದ್ಧ ಸಿದ್ಧರಾಮನ ಗದ್ದುಗೆಗಳು. ಈ ಸ್ಥಳ ಗಳಲ್ಲಿ ಸಿದ್ಧರಾಮೇಶ್ವರರು ಅನುಷ್ಟಾನ ಮಾಡಿ ದೀಕ್ಷೆ ಕೊಟ್ಟಿದ್ದರೆಂದು ಪ್ರತೀತಿ‌. ಜತ್ ತಾಲೂಕ ಸೊನ್ನಲಿಗೆಯಲ್ಲಿ ಸಿದ್ಧರಾಮೇಶ್ವರ ದೇವಾಲಯ, ಸಿದ್ಧರಾಮೇಶ್ವರ ಕೆರೆ ಗಳಿವೆ.
 ತರೀಕೆರೆ ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ಸಿದ್ಧರಾಮೇಶ್ವರ ಗದ್ದುಗೆ ದೇವಾಲಯ ಮತ್ತು ಕೆರೆ ಇದ್ದು, ಅಲ್ಲಿ ದೊಡ್ಡ ಜಾತ್ರೆಯೇ ನಡೆಯುತ್ತದೆ. ಅವರು ಕಲ್ಯಾಣದಲ್ಲಿ ಇದ್ದಾಗ ಬೇಲೂರನಲ್ಲಿ ಕೆರೆ ಕಟ್ಟಿಸಿದ್ದು ಅಲ್ಲಿಯೂ ಅವರ ದೇವಸ್ಥಾನವೂ ಇದೆ. ಸಿದ್ದರಾಮೇಶ್ವರರು ಸೊಲ್ಲಾಪುರದಿಂದ 
ಚಡಚಣ, ಇಂಗಳೇಶ್ವರ, ಬನಹಟ್ಟಿ, ಪಟ್ಟದ ಕಲ್ಲು, ಚಳ್ಳಕೆರೆ, ಮಡಕಶಿರಾ, ಯಳನಾಡು ಹೀಗೆ ಸಂಚರಿಸುತ್ತಾ ಧರ್ಮಪ್ರಚಾರ ಕೈ ಕೊಂಡರು.
ತುಮಕೂರಿನ ಬಿಜ್ಜಾವರ ಮಧುಗಿರಿಯ ನೊಳಂಬ ಸಂಸ್ಥಾನದ ಪ್ರಭು 
ರಾಜಾಹಿರೇಗೌಡರು ಮರಣ ಹೊಂದಿದ ಬಳಿಕ ಅವರ ಪುತ್ರರು ಸೋದರತ್ತೆ ಚಾಮಲಾದೇವಿಯವರ ಮೂಲಕ ಸಿದ್ದರಾಮೇಶ್ವರರ ಸಹಾಯ ಕೋರಿದರು. ಗುರುಗಳ ಆಶೀರ್ವಾದದಿಂದ ಕೈಬಿಟ್ಟು ಹೋಗಿದ್ದ ಸಂಸ್ಥಾನ ಮರಳಿ ದೊರಕಿದ ಕೃತಜ್ಞತೆಯ ದ್ಯೋತಕವಾಗಿ ನೊಳಂಬ ರಾಜರು ಸಿದ್ದರಾಮೇಶ್ವರರ ಅನು  ಯಾಯಿಗಳಾಗಿ ಅವರಿಂದ ಧರ್ಮ ದೀಕ್ಷೆ ತೆಗೆದುಕೊಂಡರು. ಅದರ ಜ್ಞಾಪಕಾರ್ಥವಾಗಿ ನೊಳಂಬ ವೀರಶೈವ ಸಮುದಾಯ ಪ್ರತಿವರ್ಷ ಮಕರ ಸಂಕ್ರಾಂತಿಯ ಸಮಯದಲ್ಲಿ ಶ್ರೀಗುರು ಸಿದ್ದರಾಮೇಶ್ವರ ಜಯಂತಿಯನ್ನು ಭಕ್ತಿಪೂರ್ವಕವಾಗಿ ಆಚರಣೆಗೆ ಮಾಡುತ್ತಾರೆ.
ವಚನ ಚಳುವಳಿಯಲ್ಲಿ ಸಿದ್ಧರಾಮರ ಪಾತ್ರ ಬಹು ದೊಡ್ಡದು. ಗುರುದೇವರ ಅನುಜ್ಞೆಯಂತೆ ಸಿದ್ಧರಾಮರು ಜೀವಂತವಾಗಿ ಸಮಾಧಿಯಾಗಲು ಇಚ್ಚಿಸಿ ದೇಗುಲದ ಬಳಿಯ ಸ್ಥಳವನ್ನು ಅಯ್ಕೆ ಮಾಡಿಕೊಂಡು ಸಮಾಧಿಯಾಗುತ್ತಾರೆ. 
ರಾಘವಾಂಕನು  "ಸಿದ್ಧರಾಮ ಚಾರಿತ್ರ" ರಚಿಸಿದ್ದಾರೆ.  ಸಮಾಜದ ಸೇವೆ, ಲಿಂಗಪೂಜೆ ಎಂಬ ಶರಣರ ಆಶಯಗಳಿಗೆ ಬದ್ಧರಾದ ಸಿದ್ಧರಾಮರು ಸಮಷ್ಟಿ ಕಾಳಜಿಯಲ್ಲಿ ಲಿಂಗಾರ್ಚನೆ ಕಂಡ ಶ್ರೇಷ್ಠ ಸಾಧಕರು.
-  ✍️Dr Prema Pangi
#ಪ್ರೇಮಾ_ಪಾಂಗಿ,
#ಶಿವಯೋಗಿ ಸಿದ್ಧರಾಮೇಶ್ವರರು

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma