ವಿಶೇಷ ಲೇಖನ - *ನಿಜಭಕ್ತೆ ನೀಲಾಂಬಿಕೆ ಕಂಡ ಬಸವಣ್ಣನವರು*:

ನಿಜಭಕ್ತೆ ನೀಲಾಂಬಿಕೆ ಕಂಡ ಬಸವಣ್ಣನವರು
ವಿಶೇಷ ಲೇಖನ -
ನಿಜಭಕ್ತೆ ನೀಲಾಂಬಿಕೆ ಕಂಡ ಬಸವಣ್ಣನವರು
ಗುರು ಬಸವಣ್ಣನವರು ಮತ್ತು  ನೀಲಾಂಬಿಕೆ ಯರು 'ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ' ಎಂಬ ವಾಕ್ಯದಂತೆ ಬಾಳಿ ಬೆಳಗಿ ಸಾಕ್ಷಾತ್ ಮಹಾದೇವ ಸ್ವರೂಪ ಆದ ಶರಣಗುರು ದಂಪತಿಗಳು. ನೀಲಾಂಬಿಕೆ ತಾಯಿಯವರ ವಚನಗಳಲ್ಲಿ ಕಲ್ಯಾಣ ರಕ್ತಕ್ರಾಂತಿಯ ಹಲವು ಮುಖಗಳ ದರ್ಶನ ವಾಗುತ್ತದೆ. 
ನೀಲಾಂಬಿಕೆ (ನೀಲಮ್ಮ, ನೀಲಲೋಚನೆ, 
ನೀಲವ್ವ )
 ಅಂದಿನ ಶರಣ ಶರಣೆಯರು ಈಕೆಯನ್ನು ನಿಜಭಕ್ತೆ ನೀಲಾಂಬಿಕೆ ಎಂದು ಗೌರವಿಸುತ್ತಿದ್ದರು. 
ಶಿವಶರಣೆ, ವಚನಕಾರ್ತಿ, ಬಸವಣ್ಣನವರ ಎರಡನೆಯ ಮಡದಿ ನೀಲಾಂಬಿಕೆ ತಾಯಿ ಸಿದ್ಧರಸ ದಣ್ಣಾಯಕ ಹಾಗೂ ಪದ್ಮಗಂಧಿಯರ ಮಗಳು. ಬಿಜ್ಜಳನ ತಾಯಿ ಸತ್ತ ಮೇಲೆ ಬಿಜ್ಜಳ ಮತ್ತು ಆತನ ತಮ್ಮ ಕರ್ಣದೇವನು ಸಿದ್ಧರಸ ಮತ್ತು ಪದ್ಮಗಂಧಿಯವರ ಮನೆಯಲ್ಲಿ ಬೆಳೆದರು. ಹೀಗಾಗಿ ನೀಲಮ್ಮ ಬಿಜ್ಜಳನ ಸಾಕು ತಂಗಿ. .  ಪತಿಸೇವೆ, ಜಂಗಮ ದಾಸೋಹ, ಲಿಂಗಾರ್ಚನೆ ಇವು-ಈಕೆಯ ವ್ಯಕ್ತಿತ್ವವನ್ನು ಹಿರಿದಾಗಿಸಿವೆ.  ಬಾಲಸಂಗಯ್ಯ ಹೆಸರಿನ ಮಗನಿದ್ದನೆಂದು ಸಣ್ಣ ವಯಸ್ಸಿನಲ್ಲಿ ತೀರಿಕೊಂಡನೆಂದು ತಿಳಿದುಬರುತ್ತದೆ. ಈಕೆಯನ್ನು ಕುರಿತು ಅನೇಕರು ನೀಲಮ್ಮನ ಸ್ತೋತ್ರ, ನೀಲಾಂಬಿಕಾ ಪಂಚವಿಂಶತಿ, ನೀಲಮ್ಮನ ತ್ರಿವಿಧಿ ಪ್ರಸಾದ ಸಂಪಾದನೆಯನ್ನೂ ರಚಿಸಿದ್ದಾರೆ. ವೀರವಿರಾಗಿಣಿ ಅಕ್ಕಮಹಾದೇವಿ ತನ್ನ ಒಂದು ವಚನದಲ್ಲಿ ತಾನು ಅವ್ವ ನೀಲವ್ವನ ಮೋಹದ ಮಗಳು ಎಂದು ಹೇಳಿಕೊಂಡಿದ್ದಾಳೆ. ಬಸವಣ್ಣನವರು ತಮ್ಮ ಪತ್ನಿ ನೀಲಾಂಬಿಕೆ “ಪೃಥ್ವಿದಗ್ಗಳ ಚೆಲುವೆ ನೀಲಲೋಚನೆ” ಎಂದು  ಹೇಳಿದ್ದಾರೆ. ಈಕೆ ಆತ್ಮಸಾಕ್ಷಾತ್ಕಾರ ಪಥ, ಷಟ್ಸ್ಥಲ, ಅನುಭವ ಮಂಟಪದ ದಾಸೋಹ ಮತ್ತು ಶಿವಾನುಭವಗಳಲ್ಲಿ ವಹಿಸಿದ ಪಾತ್ರ ಮಹತ್ತರವಾದುದಾಗಿದೆ. 'ವಿಚಾರ ಪತ್ನಿ' ಎಂದು ತನ್ನನ್ನು ಕರೆದುಕೊಂಡ ಈಕೆ, ಬಸವಣ್ಣನವರ ಬದುಕಿನಲ್ಲಿ ಬಹುಮುಖ್ಯ ಪಾತ್ರವಹಿಸಿದ್ದಾಳೆ.
ನೀಲಾಂಬಿಕೆ ಅಧಿಕ ಸಂಖ್ಯೆಯ ವಚನಗಳನ್ನು ರಚಿಸಿದ್ದಾಳೆ. ಅವುಗಳಲ್ಲಿ ೨೮೮ ವಚನಗಳು ಉಪಲಬ್ಧವಾಗಿವೆ. ಅವುಗಳಲ್ಲಿ ಹೆಚ್ಚಾಗಿ ಬಸವ ಸ್ತುತಿ, ಅವರ ಅಗಲಿಕೆಯ ನೋವಿನ ಧ್ವನಿ ಕೇಳಿಬರುತ್ತವೆ. ಈಕೆಯ ಭಕ್ತಿ, ತಾಳ್ಮೆ, ಕಾಯಕನಿಷ್ಠೆ, ಜ್ಞಾನ, ವೈರಾಗ್ಯಗಳು ಅವಳ ವಚನಗಳಲ್ಲಿ ಮೈದಾಳಿವೆ. ತನ್ನ ವಚನಗಳಲ್ಲಿ ಪತಿ ಶರಣ ಬಸವಣ್ಣರನ್ನು "ಬಸವಯ್ಯ" ಎಂದು ಗೌರವ ಪೂರ್ಣವಾಗಿ ಸಂಭೋದಿಸಿದ್ದಾಳೆ.
ಅಂಕಿತ ನಾಮ : "ಸಂಗಯ್ಯ".
 
#ಅಲ್ಲಮನ ಸಂಗ, ಅಜಗಣ್ಣನ ಸಂಗ,
ಕಕ್ಕಯ್ಯನ ಸಂಗ, ಚಿಕ್ಕಯ್ಯನ ಸಂಗ,
ಎಲ್ಲರ ಸಂಗ, ಯತಿಗಳ ಸಂಗ, ಜತಿಗಳ ಸಂಗ,
ಮಾನ್ಯರ ಸಂಗ, ಮುಖ್ಯರ ಸಂಗ.
ಸಂಗಯ್ಯಾ, ಎನ್ನ ಸಂಗ, ಎನ್ನ ಬಸವಯ್ಯನ ಸಂಗ. / 32

ಶರಣೆ ನೀಲಾಂಬಿಕೆ ತಾಯಿ ಬಸವಣ್ಣನವರ ಲೌಕಿಕ ಮತ್ತು ಅಲೌಕಿಕ ಜೀವನಕ್ಕೆ ಪೂರಕವಾಗಿ ನಿಂತು, ಅವರ ದಾಸೋಹ ಕಾರ್ಯದಲ್ಲಿ ಸಮರ್ಪಣಾ ಭಾವದಿಂದ ಸಹಕರಿಸಿದ ಅನುಭಾವಿ. ನೀಲಮ್ಮ ಅನುಭವ ಮಂಟಪದಲ್ಲಿ ಮಹತ್ತರ ಜವಾಬ್ದಾರಿ ನಿರ್ವಹಿಸಿದರು. ಬಸವಣ್ಣನವರನ್ನು ಕೇವಲ ಪತಿಯೆಂದು ಭಾವಿಸದೆ ಗುರುವೆಂದು ದೇವರೆಂದು ನಂಬಿದ್ದರು. ಅನುಭವ ಮಂಟಪದಲ್ಲಿ ತನಗೆ ಸಿಕ್ಕ ಅಲ್ಲಮನ, ಅಜಗಣ್ಣನ, ಕಕ್ಕಯ್ಯನ, ಚಿಕ್ಕಯ್ಯನ, ಎಲ್ಲ ಯತಿಗಳ, ಜತಿಗಳ 
ಮಾನ್ಯರ, ಮುಖ್ಯರ ಸಂಗದಿಂದ ಸಂತೋಷ ಪಟ್ಟು, ಇದಕ್ಕೆ ಕಾರಣಭೂತಿಯಾದ
ಪತಿ ಬಸವಯ್ಯನ ಸಂಗ ಸಿಕ್ಕಿದ್ದಕ್ಕೆ ದೇವರಿಗೆ ಆಭಾರಿಯಾಗಿದ್ದಾಳೆ. 'ಸಂಗಯ್ಯಾ, ಎನ್ನ ಸಂಗ, ಎನ್ನ ಬಸವಯ್ಯನ ಸಂಗ'. 
ಸಂಗಯ್ಯ, ನನಗೆ ನನ್ನ ಬಸವಯ್ಯನೇ ಜೊತೆ ಎಂದು ಹೆಮ್ಮೆ, ಅಭಿಮಾನ, ಕೃತಜ್ಞತೆಯಿಂದ ದೇವರನ್ನು ಸ್ಮರಿಸಿದ್ದಾರೆ.

#ಎನಗೆ ಲಿಂಗವು ನೀವೆ ಬಸವಯ್ಯಾ,
ಎನಗೆ ಸಂಗವು ನೀವೆ ಬಸವಯ್ಯಾ,
ಎನಗೆ ಪ್ರಾಣವು ನೀವೆ ಬಸವಯ್ಯಾ,
ಎನಗೆ ಪ್ರಸಾದವು ನೀವೆ ಬಸವಯ್ಯಾ,
ಎನಗೆ ಪ್ರಭೆಯಮೂರ್ತಿಯು ನೀವೆ ಬಸವಯ್ಯಾ.
ಎನಗೆ ಸಂಗಯ್ಯನು ನೀವೆ ಬಸವಯ್ಯಾ. / 76

ನನಗೆ ಪತಿ ಬಸವಯ್ಯನೇ ದೇವರು, ನನ್ನ ಪ್ರಾಣ, ಸಂಗಯ್ಯ ಕರುಣಿಸಿದ ಪ್ರಸಾದ ಮತ್ತು ಲಿಂಗಾಂಗ ಸಾಮರಸ್ಯದ ಪ್ರಭೆಯ ಬೆಳಕು ಎಂದು ಸಂಪೂರ್ಣ ತೃಪ್ತಿ ಕಂಡವರು ನೀಲಾಂಬಿಕೆ ತಾಯಿ. ಬಸವಯ್ಯನೇ ತನಗೆ ತಕ್ಕ ಜೊತೆ. 'ನನಗೆ ಆ ಸಂಗಯ್ಯ ದೇವರು  ನೀವೇ ಬಸವಯ್ಯ' ಎಂದು ಪತಿಯ ಸಂಗದಲ್ಲಿ ಧನ್ಯತೆ ಕಂಡಿದ್ದಾರೆ. ಹೀಗೆ ತನ್ನ ಸರ್ವಸ್ವ ಬಸವಯ್ಯ ಎಂದು ಹೇಳಿ ಶರಣೆ ನೀಲಾಂಬಿಕೆ ತಾಯಿ ತಮ್ಮ ಪತಿಭಕ್ತಿ ಎನ್ನು ಮೆರೆದಿದ್ದಾರೆ.
ಬಸವಣ್ಣನವರನ್ನೇ ಅರಿವಿನ ಕುರುಹಾಗಿ, ಸಂಗಯ್ಯನಾಗಿ ತನ್ನ ಲಿಂಗಾನುಭವದ ಬೆಳಗುವ ಪ್ರಭೆಯಾಗಿ  ತನ್ನ ಸಾಧನೆಯ ಪರಮಾವಸ್ಥೆಯ ಸ್ವರೂಪವಾಗಿ ಕಂಡವಳು.  ಬಸವ ಸ್ತುತಿ ಎಷ್ಟು ಮಾಡಿದರೂ ತಾಯಿಗೆ ತೃಪ್ತಿ ಇಲ್ಲ.

#ಸರ್ವಾಂಗಶುದ್ಭವಾಗಿ ಲಿಂಗದೇಹಿಯಾನಾದೆನು.
ಸರ್ವ ಪ್ರಪಂಚವನಳಿದು ಸಮಯಾಚಾರಮೂರ್ತಿಯ ಪಡದೆನು.
ಸರ್ವಾಂಗಶುದ್ಧವಾಗಿ ವಿವರವನರಿದೆನಯ್ಯ ಸಂಗಯ್ಯ.
ನಾನು ಸರ್ವಾಂಗ ಶುದ್ಧಿಯಾಗಿ ದೇವರ ಸ್ವರೂಪ ವನ್ನ ಅರಿತೆ.

 ಸರ್ವಾಂಗಶುದ್ಭವಾಗಿ ಲಿಂಗದೇಹಿಯಾಗಿ ಸರ್ವ ಪ್ರಪಂಚ ಅಳಿದು ಬಸವಯ್ಯನಂಥ ಸದಾಚಾರ ಸಮಯಾಚಾರಮೂರ್ತಿ ಯಾದ ಪತಿ ಪಡದೆನು. ಆವರ ಸಂಗದಲ್ಲಿ ಸರ್ವಾಂಗ ಶುದ್ಧಿಯಾಗಿ ದೇವರ ಸ್ವರೂಪವನ್ನ ಅರಿತೆ ಎಂದು ಶರಣೆ ನೀಲಾಂಬಿಕೆ ತಾಯಿ ಅನುಭೂತಿ ಪಡೆಯಲು ಬಸವಣ್ಣನವರ ವಿವರಣೆ, ಆವರ ಅನುಭವ, ಅವರ ಸಾನಿಧ್ಯ ನೆರವಾಯಿತು  ಎಂದು ಸ್ಮರಿಸಿದ್ದಾರೆ.

#ಏಕಯೇವ ದೇವನೊಬ್ಬನೆ ಶರಣ ಬಸವಯ್ಯ.
ಆ ಶರಣ ಬಸವಯ್ಯನಿರವೆ ಪರಮಪ್ರಸಾದರೂಪವಾಯಿತ್ತು.
ಆ ಪರಮಪ್ರಸಾದರೂಪಮೂರ್ತಿ ನಮ್ಮ ಸಂಗಯ್ಯನಲ್ಲಿ ಸದ್ಗುರು ಬಸವಯ್ಯನು. / 114

ಸದ್ಗುರು ಆದ ಬಸವಯ್ಯ ಸಂಗಯ್ಯನು ಕರುಣಿಸಿದ ಪರಮಪ್ರಸಾದ ರೂಪಮೂರ್ತಿ. ಅವರು ನನ್ನ ಜೊತೆ ಇರುವುದೇ ನನಗೆ ದೊರೆತ ಪರಮ ಪ್ರಸಾದ  ಎಂದು ಬಸವಣ್ಣನವರನ್ನು ಸ್ತುತಿಸಿದ್ದಾರೆ ಶರಣೆ ನೀಲಾಂಬಿಕೆ ತಾಯಿ.

#ಬಸವಣ್ಣನೆ ಗುರುವೆಂದು ಭಾವಿಸಲಾಗಿ,
ಎನಗೆ ಬಸವಣ್ಣನೆ ಗುರುವಾದನಯ್ಯಾ.
ಚೆನ್ನಬಸವಣ್ಣನೆ ಲಿಂಗವೆಂದು ಭಾವಿಸಲಾಗಿ,
ಎನಗೆ ಚೆನ್ನಬಸವಣ್ಣನೆ ಲಿಂಗವಾದನಯ್ಯಾ.
ಪ್ರಭುದೇವರೆ ಜಂಗಮವೆಂದು ಭಾವಿಸಲಾಗಿ,
ಎನಗೆ ಪ್ರಭುದೇವರೆ ಜಂಗಮವಾದನಯ್ಯಾ.
ಚಿಲ್ಲಾಳದೇವನೆ ದೇಹವೆಂದು ಭಾವಿಸಲಾಗಿ,
ಎನಗೆ ಚಿಲ್ಲಾಳದೇವನೆ ದೇಹವಾದನಯ್ಯಾ.
ಇಹಃಪಗೆಯಾಂಡರೆ ಧನವೆಂದು ಭಾವಿಸಲಾಗಿ,
ಇಹಃಪಗೆಯಾಂಡರೆ ಧನವಾದನಯ್ಯಾ.
ಇಂತೀ ಐವರ ಕಾರುಣ್ಯಪ್ರಸಾದವನುಂಡು ಮಹಾಮನೆಯಲ್ಲಿ ಸುಖಿಯಾದೆ, ಸಂಗಯ್ಯಾ. / 204

ಶರಣೆ ನೀಲಾಂಬಿಕೆ ತಾಯಿಯ ಭಾವನೆ ಯಲ್ಲಿ ಅನುಭವ ಮಂಟಪದಲ್ಲಿ ಬಸವಣ್ಣ ಅವರ ಗುರು ಸ್ವರೂಪಿ, ಚನ್ನಬಸವಣ್ಣ ಲಿಂಗ ಸ್ವರೂಪಿ, ಅಲ್ಲಮರು ಜಂಗಮ ಸ್ವರೂಪಿ, ಚಿಲ್ಲಾಳದೇವ ದೇಹ ಸ್ವರೂಪಿ ಮತ್ತು ಇಹಃಪಗೆಯಾಂಡರೆ ಧನ ಸ್ವರೂಪಿ ಇವರೆಲ್ಲರ ಕಾರುಣ್ಯದಿಂದ ಅನುಭವ ಮಂಟಪದಲ್ಲಿ ಸುಖಿಯಾಗಿದ್ದೇನು ಎಂದು 
ಬಸವಣ್ಣ,ಚೆನ್ನಬಸವಣ್ಣ, ಪ್ರಭುದೇವ,ಚಿಲ್ಲಾಳದೇವರ ಸ್ತುತಿಸಿದ್ದಾಳೆ.

 ಶರಣೆ ನೀಲಾಂಬಿಕೆ ತಮ್ಮ ಬಸವಣ್ಣನವರ ಪತಿ ಪತ್ನಿ ಸಂಬಂಧ ಹೀಗೆ ವಿವರಿಸಿದ್ದಾರೆ.

#ಮಡದಿ ಎನಲಾಗದು ಬಸವಂಗೆ ಎನ್ನನು.
ಪುರುಷನೆನಲಾಗದು ಬಸವನ ಎನಗೆ.
ಉಭಯದ ಕುಳವ ಹರಿದು ಬಸವಂಗೆ ಶಿಶುವಾನಾದೆನು,
ಬಸವನೆನ್ನ ಶಿಶುವಾದನು.
ಪ್ರಮಥರು ಪುರಾತರು ಸಾಕ್ಷಿಯಾಗಿ ಸಂಗಯ್ಯನಿಕ್ಕಿದ ದಿಬ್ಯವ ಮೀರದೆ ಬಸವನೊಳಗಾನಡಗಿದೆ. / 224
-
 ಶರಣರು ಸಾಧನೆಯಲ್ಲಿ ಮೇಲೇರಿದಂತೆ,   ಶರಣ ಸತಿ - ಲಿಂಗ ಪತಿಯಾದ ಬಳಿಕ ಶರಣಂಗೆ ಸತಿಸಂಗ ನರಕ ಎಂದು  ಬಸವಣ್ಣನವರು ಮತ್ತು ಅಕ್ಕಮಹಾದೇವಿ ವಚನದಲ್ಲಿ ತಿಳಿಸಿದ್ದಾರೆ. ಮಡದಿ ಮತ್ತು ಪುರುಷ ಎಂಬ ಉಭಯ ಕುಳ ಇಲ್ಲವಾಗಿಸಿ, ನೀಲಾಂಬಿಕೆ ಇದು ದೇವರ ಇಚ್ಛೆ ಎಂದು ತಿಳಿದು ಅದನ್ನು ಮೀರಲಿಲ್ಲ. ಹೀಗೆ ಒಬ್ಬರಿಗೆ ಒಬ್ಬರು ಶಿಶುವಿನಂತೆ ಶುದ್ಧ ಮನದಲ್ಲಿ ಪ್ರೀತಿಸಿದವರು. ಅದಕ್ಕೆ ಪ್ರಥಮ ಪುರಾತನ ಶರಣರ ಸಾಕ್ಷಿ ಹೇಳುತ್ತಾಳೆ.

#ಆಡಲಿಲ್ಲವಯ್ಯಾ ನಾನು ಹೆಣ್ಣುರೂಪ ಧರಿಸಿ
ನುಡಿಯಲಿಲ್ಲವಯ್ಯಾ ನಾನು ಹೆಣ್ಣುರೂಪ ಧರಿಸಿ
ನಾನು ಹೆಣ್ಣಲ್ಲದ ಕಾರಣ, ನಾನು ಇರಪರ ನಾಸ್ತಿಯಾದವಳಯ್ಯಾ.
ನಾನು ಉಭಯದ ಸಂಗವ ಕಂಡು ಕಾಣದಂತಿದ್ದೆನಯ್ಯಾ
ಸಂಗಯ್ಯಾ, ಬಸವ ಬಯಲ ಕಂಡ ಕಾರಣ. / 41

ನೀಲಾಂಬಿಕೆ ತಾಯಿಯ ಅರಿವು ಪಕ್ವಗೊಂಡಿದ್ದು. ಸ್ವಯಂ ಅರಿವಿನಿಂದ  ಪರಮಾತ್ಮನನ್ನು ಕಾಣುವ ಶರಣೆಯಾಗಿದ್ದರಿಂದ  ಹೆಣ್ಣು ಗಂಡೆಂಬ ಭಾವನೆ ಅಳಿದು ಇಹ ಪರ ಅಳಿದು, ಮುಕ್ತಿಯ ಅನುಭೂತಿ ಹೊಂದಿದ್ದರಿಂದ, ಮಾದಕ ಹೆಣ್ಣಿನಂತೆ ಆಡಲಿಲ್ಲ ನುಡಿಯಲಿಲ್ಲ.
ಸಂಗಯ್ಯನ  (ಸಂಗಮೇಶ್ವರ ದೇವರ) ಸಂಗದಿಂದ ಲಿಂಗಾಂಗ ಸಾಮರಸ್ಯದಿಂದ ಪತಿ ಬಸವಯ್ಯ, ಅರಿವಿನ ಬಯಲು ರೂಪವೇ ಆದವರು. ಆ ಉಭಯದ ಸಂಗವ ಕಂಡು ತಮ್ಮ ಇಹಪರ ನಾಸ್ತಿ ಆಯಿತು ಎಂದಿದ್ದಾರೆ ನೀಲಾಂಬಿಕೆ ತಾಯಿ.

#ಮಾತಿನ ಹಂಗೇತಕ್ಕೆ, ಮನವೇಕಾಂತದಲ್ಲಿ ನಿಂದ ಬಳಿಕ, ಬಸವಯ್ಯಾ ?
ಅಜಾತನ ಒಲುಮೆ ಏತಕ್ಕೆ, ಅರ್ಪಿತದ ಹಂಗಹರಿದಬಳಿಕ, ಬಸವಯ್ಯಾ ?...........
ಎಂಬ ಆವರ ಮಾತಿನಲ್ಲಿ

#ಐಕ್ಯವ ತೋರಿ ಅಜಾತನಲ್ಲಡಗಿದ ಬಸವಾ.
ಅರ್ಪಿತದಲ್ಲಿ ನಿರಾಭಾರಿಯಾದ ಬಸವಾ,
ಆನು ಸುಖಸಂಯೋಗಿಯಾದೆ ನಿಮ್ಮಲ್ಲಿ ಬಸವಾ.
ಎನಗೆ ಹೆಸರಳಿಯಿತ್ತು ಕುರುಹಳಿಯಿತ್ತು ಬಸವಾ. ಸಂಗಯ್ಯ ನಿನ್ನೊಳಡಗಿ ನೀನೆನ್ನೊಳಡಗಲು./ 130 
ಎಂದೆನ್ನುವ ವಚನಗಳಲ್ಲಿ ತಾಯಿಯ ಅನುಭಾವಿಕ ಸ್ಥಿತಿ ಮತ್ತು ಬಸವಣ್ಣನವರ ಲಿಂಗಾಂಗ ಸಾಮರಸ್ಯದ ಸಹಜ ಐಕ್ಯ ಸ್ಥಿತಿ ಅರಿತ ಬಸವಣ್ಣನವರ ವಿಚಾರ ಪತ್ನಿಯ ರೂಪವನ್ನು ಕಾಣಬಹುದು.
 ಬಸವಣ್ಢನವರ "ವಿಚಾರ ಪತ್ನಿ" ಎಂದೆನಿಸಿ,  ಅವರ ಮಹಾಮನೆಯ ಸಾರ್ಥಕತೆಯ ಶಕ್ತಿಯಾದವರು ಶರಣೆ ನೀಲಾಂಬಿಕೆ ಯವರು.
*ಕಲ್ಯಾಣದ ಕ್ರಾಂತಿ*
 -  ಶರಣ ಬಸವಣ್ಣ ಗಡಿಪಾರಾಗಿ ಕೂಡಲಸಂಗಮಕ್ಕೆ ನಡೆದಾಗ ಬಸವಣ್ಣನವರು ಶರಣರ ರಕ್ಷಣೆ, ಮಾರ್ಗದರ್ಶನದ ಹೊಣೆ ಹೊರಸಿದಾಗ, ನೀಲಾಂಬಿಕೆ ತಾಯಿ ಪತಿಯ ಅಗಲಿಕೆಯ ನೋವು ಸಹಿಸಿ, ಅವರ ಅಣತಿಯಂತೆ  ಕಲ್ಯಾಣದಲ್ಲಿಯೇ ಉಳಿದು ತನ್ನ ಸೇವೆ, ಶುದ್ಧ ನಡೆ - ನುಡಿಯಿಂದ ಎಲ್ಲರ ಮೆಚ್ಚುಗೆ, ಗೌರವಕ್ಕೆ ಪಾತ್ರಳಾದಳು. ಅವರು ಪತಿಯ ಅಗಲಿಕೆಯ ನೋವು ಬದಿಗಿಟ್ಟು, ಕೈಗೊಂಡ ಶರಣರ ಸೇವೆ ಅದ್ವಿತೀಯವಾದುದು. 

ಶರಣ ಬಸವಣ್ಣ ಗಡಿಪಾರಾಗಿ ಕೂಡಲಸಂಗಮಕ್ಕೆ ನಡೆದಾಗ ನೀಲಾಂಬಿಕೆ ತಾಯಿ, ತನ್ನ ನೋವು ಮರೆತು, ಬಸವಣ್ಣನವರ ಶರಣ ಮಕ್ಕಳ ಅಗಲಿಕೆಯ ನೋವಿಗೆ ಮಿಡಿಯುತ್ತಾ, ಶೋಕತಪ್ತತೆಯಿಂದ

#ಎಲೆ ಅಯ್ಯಾ ಎಲೆ ಅಯ್ಯಾ ಏಕಾಕ್ಷರ ರೂಪ ಬಸವಾ,
ಎಲೆ ಅಯ್ಯಾ ಎಲೆ ಅಯ್ಯಾ ನಿರಕ್ಷರರೂಪ ಬಸವಾ,
ಎಲೆ ಅಯ್ಯಾ ಎಲೆ ಅಯ್ಯಾ ಮುನಿಮಾರ್ಗಶೀಲ ಬಸವಾ,
ಸಂಗಯ್ಯಾ, ಎಲೆಯಿಲ್ಲದ ವೃಕ್ಷವಾದ ಬಸವಯ್ಯನು. / 91

ಅಯ್ಯಾ, ಏಕಾಕ್ಷರ ಅಂದರೆ  ಓಂಕಾರದ  ರೂಪ ಬಸವ, ಅಕ್ಷರ ಹುಟ್ಟುವ ಮುನ್ನಿನ ನಿರಕ್ಷರರೂಪ ಬಸವ , ತಪಕ್ಕೆ ಹೊರಟ ಮುನಿಯಂತೆ ಕಾಡುಮಾರ್ಗ ಹಿಡಿದ ಬಸವ ಎಂದು ಧುಖಿಃಸುತ್ತಾರೆ. ಸದಾಕಾಲ ಶರಣರಿಂದ ಸುತ್ತುವರೆದಿದ್ದ ಬಸವಯ್ಯ, ತನ್ನ ನೆಚ್ಚಿನ ಶರಣರಿಂದ ದೂರವಾದ ನಂತರ ಬಸವಯ್ಯನು ಎಲೆಗಳಿಲ್ಲದ  ವೃಕ್ಷನಂತೆ ಆದ  ಎಂದು ಸಂಗಯ್ಯನಲ್ಲಿ ಮೊರೆ ಹೋಗಿದ್ದಾರೆ ಶರಣೆ ನೀಲಾಂಬಿಕೆ ತಾಯಿಯವರು.

ಬಿಜ್ಜಳ ರಾಜನ ವಧೆಯ ನಂತರ ಕಲ್ಯಾಣದಲ್ಲಿ ನಡೆಯುತ್ತಿರುವ ವಿಷಾದಕರ ವಿದ್ಯಾಮಾನಗಳನ್ನ ಅರಿತ ಬಸವಣ್ಣನವರು ಕಲ್ಯಾಣದಲ್ಲಿ ಉಳಿದ ಶರಣರ ಮುಂದಿನ ನಡೆ ಏನು ಎಂದು ವಿಚಾರ ವಿನಯಮ ಮಾಡಲು  ತಮ್ಮ ವಿಚಾರ ಪತ್ನಿಯಾದ ನೀಲಾಂಬಿಕೆ ಯವರನ್ನು ಕರೆತರಲು  ಶರಣ ಹಡಪದ ಅಪ್ಪಣ್ಣನವರ ಮೂಲಕ ಹೇಳಿ ಕಳುಹಿಸಿದಾಗ
ಕಲ್ಯಾಣಕ್ಕೆ ಬಂದ ಅಪ್ಪಣ್ಣನವರು ನೀಲಮ್ಮನವರಿಗೆ ಬಸವಣ್ಣನವರು ಬರ ಹೇಳಿದ್ದನ್ನು ಅರಹುತ್ತಾರೆ. ಕರೆದ ಕಾರಣ ತಿಳಿಯದ ನೀಲಾಂಬಿಕೆ ತಾಯಿ 

#ನೋಡು ನೋಡು ನೋಡು ನೋಡು ಲಿಂಗವೇ
ನೋಡು ಬಸವಯ್ಯನವರು ಮಾಡುವಾಟವ
ಸಂಗಮಕ್ಕೆ ಬಸವಯ್ಯನವರು ನಮ್ಮನು ಬರ ಹೇಳಿದರಂತೆ.
ಅಲ್ಲಿರುವ ಸಂಗಯ್ಯ ಇಲ್ಲಿಲ್ಲವೇ?
ಅಲ್ಲಿ ಇಲ್ಲಿ ಎಂಬ ಉಭಯ ಭಾವವು ಶರಣರಿಗೆ ಸಲ್ಲದು. 
ಮುಂದುವರೆದು....
#ನಾನಾರ ಸಾರುವೆನೆಂದು ಚಿಂತಿಸಲೇತಕ್ಕಯ್ಯಾ ಬಸವಾ ?
ನಾನಾರ ಹೊಂದುವೆನೆಂದು ಭ್ರಮೆಬಡಲೇತಕ್ಕಯ್ಯಾ ಬಸವಾ ?
ನಾನಾರ ಇರವನರಿವೆನೆಂದು ಪ್ರಳಾಪಿಸಲೇತಕ್ಕಯ್ಯಾ ಬಸವಾ ?
ಪರಿಣಾಮಮೂರ್ತಿ ಬಸವನರೂಪು ಎನ್ನ ಕರಸ್ಥಲದಲ್ಲಿ ಬೆಳಗಿದ ಬಳಿಕ ಸಂಗಯ್ಯನ ಹಂಗು ನಮಗೇತಕ್ಕಯ್ಯಾ ಬಸವಾ ? / 179
ಎಂದು
 ತಾನು ಯಾರನ್ನಾದರೂ ಸೇರುವೆನೆಂದು ತಾನು ಯಾರನ್ನಾದರೂ ಹೊಂದುವೆನೆಂದು ಯಾರಾದರೂ ಆಶ್ರಯದಲ್ಲಿ ಇರುವೆನೆಂಬ  ಆತಂಕ ಬೇಡ. ಬಸವಣ್ಣನವರ ರೂಪವು ತನ್ನ ಇಷ್ಟಲಿಂಗದ ಕರಸ್ಥಲದಲ್ಲಿರಲು ಕೂಡಲಸಂಗಮದ ಸಂಗಯ್ಯನ ಹಂಗೇಕೆ ಎಂದು ಪ್ರಶ್ನಿಸುತ್ತಾರೆ. ಬಸವರಸರೇ ತನ್ನ ಲಿಂಗದಲ್ಲಿರುವಾಗ ಸಂಗಯ್ಯನ ಸಾನ್ನಿಧ್ಯದ ಆಶೆ ತನಗಿಲ್ಲ. ಬಸವಯ್ಯನೇ ನನ್ನ ಕರಸ್ಥಲದಲ್ಲಿ ಬೆಳಗುವ ದೇವರು ಎಂದು ಸಂದೇಶ ಕಳಿಸಿ.
ಇಂಥ ಅತ್ಯಂತ ಕಷ್ಟ ವಿಷಮ ಸಂದಿಗ್ಧತೆಯಲ್ಲಿ ಶರಣ ಮಕ್ಕಳನ್ನು ತೊರೆಯಲು ಮನಸ್ಸು ಮಾಡುವದಿಲ್ಲ.

#ಅಲ್ಲಲ್ಲಿಯ ಶರಣರು ಅಲ್ಲಲ್ಲಿಯೇ ನಿಲಲು,
ಅಲ್ಲಲ್ಲಿಯ ಭಕ್ತಿ ಅಲ್ಲಲ್ಲಿಯೆ ಅಡಗಿತ್ತು.
ಅಲ್ಲಲ್ಲಿಯ ಕಾಯವಲ್ಲಲ್ಲಿಯೆ ಸಂದು ನಾನು
ಅಲ್ಲಲ್ಲಿಯೆ ಅಡಗಿಯಾನು ಅನುಮಿಷ ದೃಷ್ಟಿಯುಳ್ಳವಳಾದೆನು.
ಅಲ್ಲಲ್ಲಿಯೇ ಭ್ರಮಿಸಲು ಭ್ರಮೆಯಡಗಿ
ಸಂಗಯ್ಯನಲ್ಲಿ ಮುಖವರಿತೆನಯ್ಯ ಬಸವಪ್ರಭುವೆ. / 33

ಎಂದು ತಿಳಿ ಹೇಳಿ ಕೂಡಲಸಂಗಮಕ್ಕೆ ಹೋಗಲು ನಿರಾಕರಿಸಿ, ಬಸವರಸರೇ ತನ್ನ ಇಷ್ಟಲಿಂಗದಲ್ಲಿರುವಾಗ ಸಂಗಯ್ಯನ ಸಾನ್ನಿಧ್ಯದ ಆಶೆ ತನಗಿಲ್ಲ. ಅಲ್ಲಿಯ ಸಂಗಯ್ಯನೇ ತನ್ನ ಇಷ್ಟಲಿಂಗದಲ್ಲಿ ಇರುವದನ್ನು ಅರಿತು ಲಿಂಗದಲ್ಲಿ ಅನಿಮಿಷ ದೃಷ್ಟಿಯುಳ್ಳವಳಾಗಿದ್ದೇನೆ.
ಎಲ್ಲ ಭ್ರಮೆಯಡಗಿ ಸಂಗಯ್ಯನಲ್ಲಿ ನಿಮ್ಮ ಮುಖವರಿತೆನಯ್ಯವೆಂದು ಹೇಳಿ  ಕಲ್ಯಾಣದಲ್ಲಿ ಕಷ್ಟದಲ್ಲಿದ್ದ ಶರಣರಿಗೆ ಬೆಂಬಲವಾಗಿ ನಿಲ್ಲುತ್ತಾಳೆ.

ಬಿಜ್ಜಳನ ಕೊಲೆಯಾದ ನಂತರ ಪರಿಸ್ಥಿತಿ ಇನ್ನೂ ಉಲ್ಭಣಿ ಸುತ್ತದೆ.
ಪತಿಯ ಅಗಲಿಕೆಯ ನೋವಿನಲ್ಲಿಯೇ ತಳ ಮಳಿಸಿದ ಮನ , ನಂತರ ನಡೆದ ಶರಣ ಮಕ್ಕಳ ಮಾರಣ ಹೋಮ, ವಚನ ಕಟ್ಟು ಗಳನ್ನು ಸುಡುವದನ್ನು ನೋಡಿ ರೋಧಿಸುತ್ತದೆ.

#ಅಟ್ಟಡವಿಯಲ್ಲಿ ಬಿಟ್ಟುಹೋದಿರಿ ಬಸವಯ್ಯಾ.
ನಟ್ಟನಡುಗ್ರಾಮವ ಕೆಡಿಸಿಹೋದಿರಿ ಬಸವಯ್ಯಾ.
ಹುಟ್ಟಿಲ್ಲದ ಬಂಜೆಗೆ ಮಕ್ಕಳ ಕೊಟ್ಟಿರಿ ಬಸವಯ್ಯಾ.
ಆ ಮಕ್ಕಳ ಫಲವಿಲ್ಲದಂತೆ ಮಾಡಿದಿರಿ ಬಸವಯ್ಯಾ.
ಸಂಗಯ್ಯನಲ್ಲಿ ನೀನೆಂತಪ್ಪ ಮಹಿಮನಯ್ಯಾ ಬಸವಯ್ಯಾ ? / 10
ಅವಳ ಕಣ್ಣು ಮುಂದೆಯೇ ಹಲವು ಶರಣ ಮಕ್ಕಳ ಕೊಲೆಯಾಗಿ ಇವುಗಳಿಂದಾದ ತೀವ್ರ ಹತಾಶೆ, ಈ ಸ್ಥಿತಿಯಲ್ಲಿ ಜೊತೆಯಿಲ್ಲದ ಪತಿಯ ಮೇಲಿನ ಮುನಿಸು, ನೂರಾರು ಶರಣ ಮಕ್ಕಳ ಪಡೆದರೂ ಫಲವಿಲ್ಲದಂತಾಯಿತಲ್ಲಾ ಎಂದು ಅವಳ ಮಾತೃ ಹೃದಯ ರೋಧಿಸುತ್ತದೆ.

 ನಂತರ ಪರಿಸ್ಥಿತಿಯ ಭೀಕರತೆಯ ಅರಿವಾಗಿ, ಬಸವಣ್ಣನವರನ್ನು ಭೇಟಿಯಾಗಿ  ಸಮಾಲೋಚಿಸಿ ಸಂತೈಸಿ ಮುಂದಿನ ಹಾದಿ ಅರಿತು ಉಳಿದ ವಚನಗಳನ್ನು ಶರಣರನ್ನು ರಕ್ಷಿಸಿ ಮತ್ತೇ  ಸಮಾಜ ಕಟ್ಟುವ ಕೆಲಸಕ್ಕೆ ಬದ್ಧಳಾಗಬೇಕೆಂದು ನೀಲಾಂಬಿಕೆ ತಾಯಿ, ಹಿರಿಯ ಶರಣ ಹಡಪದ ಅಪ್ಪನವರ ಜೊತೆಗೆ ಕೂಡಲ ಸಂಗಮಕ್ಕೆ ಪಯಣ ಬೆಳೆಸುತ್ತಾರೆ. ಆದರೆ ರಕ್ಕಸ ತಂಗಡಗಿ ಮುಟ್ಟುವಷ್ಟರಲ್ಲಿ ಬಸವಣ್ಣನವರು ಸಂಗಮದಲ್ಲಿ ಐಕ್ಯರಾದ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸುತ್ತದೆ. ಅವರ ಅಗಾಧವಾದ ನೋವು ತಡೆಯಿಲ್ಲದ ಭೋರ್ಗರೆಯುವ ನದಿಯಂತೆ ವಚನ ರೂಪ ವಾಗಿ ಹರಿಯುತ್ತದೆ.

#ಎಲೆ ಅಯ್ಯಗಳಿರಾ, 
ಎಲೆಗಳೆದ ವೃಕ್ಷವ ಕಂಡಿರೆ ಬಸವನ ?
ಎಲೆ ಅಯ್ಯಗಳಿರಾ, ರೂಹಿಲ್ಲದ ಚೋಹವ ಕಂಡಿರೆ ಬಸವನ ?
ಎಲೆ ಸ್ವಾಮಿಗಳಿರಾ, ನಿಮ್ಮ ನಿಲವಿನ ದರ್ಪಣವ ಕಂಡಿರೆ ಬಸವನ ? ಸಂಗಯ್ಯನಲ್ಲಿ ಸ್ವಯವಳಿದ 
ಬಸವನ ಕುರುಹ ಕಂಡಿರೆ ?
ಅವಳ  ಹೃದಯ ರೋಧನ ನೆರೆದಿದ್ದ ಅಯ್ಯ ಸ್ವಾಮಿ ಶರಣರಷ್ಟೇ ಅಲ್ಲ, ಕಲ್ಲುಗಳನ್ನು ಕೂಡ ಕರಗಿಸುವಂತಹದು.

#ಏಕಯೇವದೇವ ಬಸವಾ,
ಏಕಲಿಂಗಾಂಗಿ ಬಸವಾ,
ಪ್ರಸಾದಪರಿಪೂರ್ಣಮೂರ್ತಿ ಬಸವಾ,
ಪರಿಣಾಮವಡಗಿ ಪ್ರಸನ್ನನಾದ ಬಸವಾ
ಕಾಯವಿಲ್ಲದ ಗಮನಿ ಬಸವಾ,
ಕಲೆಯಳಿದುಳಿದೆ ಬಸವಾ,
ಪ್ರಭಾವವಡಗಿ ಸಂಗಯ್ಯನಲ್ಲಿ ನಿಸ್ಸಂಗಿಯಾದೆಯಾ ಬಸವಾ. / 115
ಎನ್ನುತ್ತಾ......
#ನಾಡಿನ ಹೆಣ್ಣುಗಳೆಲ್ಲಾ ಬನ್ನಿರೆ ಅಕ್ಕಗಳಿರಾ,
ಅಕ್ಕನರಸ ಬಸವಯ್ಯನು ಬಯಲ ಕಂಡು ಬಟ್ಟಬಯಲಾದನು.
ಅಕ್ಕನರಸನಿಲ್ಲದೆ ನಿರಕ್ಕರನಾದನು ಬಸವಯ್ಯನು. ನಮ್ಮ ಸಂಗಯ್ಯನಲ್ಲಿ ಬಸವಯ್ಯನೈಕ್ಯ ಬಯಲಿಲ್ಲದ ಬಯಲು. / 178
ನಾಡಿನ ಅಕ್ಕ ತಂಗಿಯರೆಲ್ಲರನ್ನು ಕೂಗಿ ಕರೆಯುತ್ತಾ ಪತಿ  ಬಸವಯ್ಯ ಬಯಲಾದ ಸ್ಥಿತಿ ವಿಷಾದಿಸುತ್ತಾರೆ.
ಬಸವಣ್ಣನವರು ಸಂಗಯ್ಯನಲ್ಲಿ ಐಕ್ಯನಾಗಿದ್ದನ್ನು  ಬಯಲಿಲ್ಲದ ಬಯಲು ಎಂದು ಅನುಭಾವಿಕ ಪ್ರಜ್ಞೆಯಲ್ಲಿ  ತಿಳಿಸುತ್ತಾರೆ.  ಅಕ್ಕನರಸ ಅಂದರೆ ಗಂಗಾಂಬಿಕೆಯ ಅರಸ, ಪತಿ. 'ಬಸವಣ್ಣನವರು ಬಯಲ ಕಂಡು ಬಟ್ಟ ಬಯಲಾದರು. ಸಂಗಯ್ಯನಲ್ಲಿ ಬಸವಣ್ಣನವರ ಐಕ್ಯವು ಬಯಲಿಲ್ಲದ ಬಯಲು 'ಎಂದು ನೋವಿನಲ್ಲಿಯೂ ಬಸವಣ್ಣನವರ ಐಕ್ಯಕ್ಕೆ  ಶರಣ ಸಂಸ್ಕೃತಿಗೆ ಘನತೆ  ತೋರಿದ್ದಾರೆ.(ಇಂದಿಗೂ ನಿಜಶರಣರು ಬಸವಣ್ಣನವರ  ಐಕ್ಯವನ್ನು ಇದೇ ರೀತಿಯಲ್ಲಿ ದೃಷ್ಠಿಸುತ್ತಾರೆ.)

#ನಾನಾರ ಹೆಸರ ಕುರುಹಿಡಲಯ್ಯಾ ಬಸವಾ ?
ನಾನಾರ ರೂಪ ನಿಜವಿಡಲಯ್ಯಾ ಬಸವಾ ?
ನಾನಾರ ಮಾತ ನೆಲೆಗೊಳಿಸಲಯ್ಯಾ ಬಸವಾ ?
ನಾನಾರ ಮನವನಂಗೈಸಲಯ್ಯಾ ಬಸವಾ ?
ಎನ್ನ ಸುಖಾಕಾರಮೂರ್ತಿ ಬಸವನಡಗಿದಬಳಿಕ ಎನಗೆ ಹೆಸರಿಲ್ಲ.
ರೂಪು ನಿರೂಪವಾಯಿತ್ತಯ್ಯಾ ಸಂಗಯ್ಯಾ, ಬಸವನಡಗಿದಬಳಿಕ / 180

ಬಸವಣ್ಣನವರು ಐಕ್ಯವಾದ ಬಳಿಕ ತಾನು ಯಾರ ಹೆಸರನ್ನು ಕೂಗಿ ಕರೆಯಲಿ, ಬಸವಣ್ಣನವರಿಲ್ಲದ ಬದುಕಿನಲ್ಲಿ ಯಾರ ಭಾವ ರೂಪವನ್ನು ನಿಜ ಮಾಡಲಿ? ಬಸವಣ್ಣನಿಲ್ಲದ ಜೀವನದಲ್ಲಿ ತಾನು ಯಾರ ಮಾತನ್ನು ನೆಲೆಗೊಳಿಸಲಿ ? ತಾನು ಯಾರ ಮನವನ್ನು ಅಂಗೈಸಲಿ? ತನ್ನ ಸುಖ ಕರಮೂರ್ತಿ ಬಸವ ಸಂಗಯ್ಯನೊಳಗೆ ಅಡಗಿದಬಳಿಕ ತನಗೆ ಹೆಸರಿಲ್ಲ. ತನ್ನ ರೂಪು ನಿರೂಪವಾಯಿತ್ತು ಎಂದು ಹಲುಬುತ್ತಾರೆ.
 ಬಸವಣ್ಣನವರು ಕೂಡಲ ಸಂಗಮದಲ್ಲಿ ಐಕ್ಯವಾದ ನೋವನ್ನು ನೀಲಮ್ಮ ತಮ್ಮ  ವಚನಗಳಲ್ಲಿ ಅತ್ಯಂತ ಅರ್ಥಬದ್ಧವಾಗಿ, ಮಾರ್ಮಿಕವಾಗಿ ನಿರೂಪಿಸಿದ್ದಾರೆ:

#ಬಸವನರಿವು ನಿರಾಧಾರವಾಯಿತ್ತು.
ಬಸವನ ಮಾಟ ನಿರ್ಮಾಟವಾಯಿತ್ತು.
ಬಸವನಭಕ್ತಿ ಬಯಲನೆ ಕೂಡಿ ನಿರ್ವಯಲಾಯಿತ್ತು.
ಬಸವಾ ಬಸವಾ ಬಸವಾ ಎಂಬ ಶಬ್ದವಡಗಿ ನಿಶ್ಶಬ್ದವಾಯಿತ್ತಯ್ಯಾ ಸಂಗಯ್ಯಾ. / 206

ಬಸವಣ್ಣನವರು ನೀಡಿದ ಅರಿವು ಆಧಾರವೇ ಇಲ್ಲವಾಗಿ  ನಿರಾಧಾರವಾಯಿತ್ತು. ಬಸವಣ್ಣನವರಿಲ್ಲದ ಕಾರಣ ಆ ಮಾಟವು ನಿರ್ಮಾಟವಾಗಿತ್ತು. ಅವರು ಕಟ್ಟಿದ ಮಹಾಮನೆ ಹಾಳಾಯಿತ್ತು. ಬಸವಣ್ಣನವರಿಲ್ಲದ ಕಾರಣ ಅವರ ಅಸೀಮಿತ ಭಕ್ತಿ  ಅವರೊಂದಿಗೆ ಬಯಲೊಳಗೆ ಕೂಡಿ ನಿರ್ವಯಲಾಯಿತ್ತು. ಬಸವಾ ಬಸವಾ ಬಸವಾ ಎಂಬ ಎಲ್ಲ ಕಡೆ ಕೇಳುವ ಶಬ್ದ ನಿಂತು ಹೋಗಿ
ನಿಶಬ್ದವಾಯಿತು ಸಂಗಯ್ಯಾ ಎಂಬ ಆತಂಕ ದಿಂದ ದೇವರಲ್ಲಿ ಮೊರೆ ಇಡುತ್ತಾರೆ. 

 ಬಸವಣ್ಣನವರು ಜೀವಿತವಾಗಿದ್ದಾಗ ಬಸವಾಕ್ಷರಗಳೆ ಮಂತ್ರವಾಗಿತ್ತು. ಇಂತಹ ಬಸವಾ ಬಸವಾ ಎಂಬ ಶಬ್ದವು ಅಡಗಿ ನಿಶಬ್ದವಾಯಿತ್ತು ಸಂಗಯ್ಯಾ ಎಂದು ತಮ್ಮ ಅಳಲನ್ನು ದೇವರಲ್ಲಿ ತೋಡಿಕೊಂಡರು.

ಅವರ ಹೃದಯದ  ಭಾವನೆಗಳು ವಚನವಾಣಿಯಾಗಿ  ಹೊರಹೊಮ್ಮಿದವು.

#ಅಂಗದ ಸಂಗಿಗನಲ್ಲ ನಮ್ಮ ಬಸವಯ್ಯನು.
ಪ್ರಾಣದ ಭ್ರಮೆಯವನಲ್ಲ ನಮ್ಮ ಬಸವಯ್ಯನು.
ಉಭಯದ ಹಂಗಹರಿದು ಉಪಮಾತೀತನಾದ ನಮ್ಮ ಬಸವಯ್ಯನು.
ಸಂಗಯ್ಯನಲ್ಲಿ ಕೂಡಿ
ನಿರಾಳ ಪ್ರಸನ್ನಮೂರ್ತಿಯಾದ ನಮ್ಮ ಬಸವಯ್ಯನು. / 2

ಅಂತಹ ದುಃಖ ಸನ್ನಿವೇಶದಲ್ಲಿಯೂ  'ಉಪಮಾತೀತನಾದ ನಮ್ಮ ಬಸವಯ್ಯನು.
ಸಂಗಯ್ಯನಲ್ಲಿ ಕೂಡಿ
ನಿರಾಳ ಪ್ರಸನ್ನಮೂರ್ತಿಯಾದ ' ಎಂಬ ಬಸವಣ್ಣನವರ ಸ್ತುತಿ ಸಹಜವಾಗಿ   ವಚನರೂಪಕವಾಗಿ ಮೂಡಿದೆ.

#ಸಂಗವಪ್ಪ ಬಸವಾ,
ನಿಸ್ಸಂಗ ನಿರಾಲಂಬಿಯಾದೆಯಾ ಬಸವಾ.
ಅಪ್ರತಿಮ ಅನುಪಮ ಬಸವಾ,
ಅನಾದಿಸ್ವಭಾವವಾದನಯ್ಯಾ. ಸಂಗಯ್ಯಾ, ನಿಮ್ಮ ಬಸವ ನಿನ್ನಲ್ಲಿ ಅಡಗಿದನು. / 273

ಪತಿ ಬಸವಣ್ಣನವರು ಅಪ್ರತಿಮರು ಅನುಪಮರು, ಅನಾದಿಸ್ವಭಾವದವರು ಎಂದರೆ ಶೃಷ್ಟಿಕರ್ತ ಶಿವನ ಶೃಷ್ಟಿರಚನೆಗಿಂತ ಮೊದಲಿನ ನಿರಾವಲಂಬ ಸ್ಥಿತಿ(ಬಯಲು) ಪಡೆದು ನಿನ್ನಲ್ಲಿ ಅಡಗಿದರು  ಸಂಗಯ್ಯ ಎಂದು ದೇವರಲ್ಲಿ ಹೇಳಿಕೊಳ್ಳುತ್ತಾರೆ.
#ಎಲೆ ಅಯ್ಯಾ ಬಸವಾ, ಕರಸ್ಥಲ ಬಯಲಾಯಿತ್ತೆನಗೆ,
ಕರಸ್ಥಲ ಮನಸ್ಥಲವಾಯಿತ್ತು ಬಸವಾ.
ಸಂಗಯ್ಯಾ, ಬಸವ ಹೋದನತ್ತ
ನಾನಡಗಿದೆನಯ್ಯಾ ನಿಮ್ಮಲಿತ್ತ. / 92

ಬಸವಣ್ಣನವರಿಲ್ಲದ ಬದುಕು ತನಗೂ ಬೇಡವೆಂದು ತೀರ್ಮಾನಿಸಿ ನದಿಯ ಆಚೆಗೆ ಬಸವಣ್ಣನವರು ಐಕ್ಯವಾದರೆ , ಉಕ್ಕಿ ಹರಿಯುತ್ತಿದ್ದ ನದಿಯ ಈಚೆಗೆ ಇರುವ ರಕ್ಕಸ ತಂಗಡಗಿಯಲ್ಲಿ ನೀಲಾಂಬಿಕೆ ತಾಯಿ ಐಕ್ಯರಾಗುತ್ತಾರೆ.  ಶಿವನ ಮೊರೆಹೋಗುತ್ತಾರೆ. ಅನಿಮಿಷ ದೃಷ್ಟಿಯಿಂದ ಶಿವಯೋಗದಲ್ಲಿ  ನಿರತರಾದಾಗ ಎಲ್ಲಾ  ಭ್ರಮೆ ಅಳಿದು ಯೋಗ ವಿಧಾನದಿಂದ ಇಷ್ಟಲಿಂಗದಲ್ಲಿ ದೃಷ್ಟಿ ನೆಟ್ಟು ಲಿಂಗನಲ್ಲಿಯೇ ಐಕ್ಯರಾದರು.
ರಕ್ಕಸ ತಂಗಡಗಿಯಲ್ಲಿ ನೀಲಾಂಬಿಕೆ ತಾಯಿ, ಶರಣ ಹಡಪದ ಅಪ್ಪಣ್ಣನವರ ಗದ್ದುಗೆ (ಸಮಾಧಿ ಸ್ಥಳ) ಮತ್ತು ದೇವಸ್ಥಾನ ಗಳಿವೆ. 

#ಬಸವಾ ಬಸವಾ ಎಂಬ ಶಬ್ದವಡಗಿತ್ತು.
ಬಸವ ಬಸವಾಯೆಂಬ ರೂಪು ನಿರೂಪಾಯಿತ್ತು.
ಬಸವನ ಕಾಯವಳಿದು ನಿರಾಕುಳವಾಗಲು
ಆನು ಬಸವಾ ಬಸವಾ ಬಸವಾಯೆಂದು ಬಯಲಾದೆನಯ್ಯಾ. / 208
ಎಂದು ಇಷ್ಟದೈವ ಸಂಗಮೇಶ್ವರ ದೇವರಿಗೆ ಅರುಹಿ ನೀಲಾಂಬಿಕೆ ತಾಯಿಯವರು 'ಬಸವ'  ನಾಮಸ್ಮರಣೆಗೈಯುತ್ತ ಬಸವ ಮಹಾಬಯಲಿನಲ್ಲಿ  ಬಯಲಾದರು.

ನೀಲಾಂಬಿಕೆ ತಾಯಿಗೆ ಪತಿ ಬಸವಯ್ಯ ಮತ್ತು ಸಂಗಯ್ಯ ಬೇರೆ ಅಲ್ಲ. ಇಬ್ಬರೂ ಒಂದೇ ಎಂಬ ಭಾವ. ಬಸವಯ್ಯನೇ  ಸಂಗಯ್ಯ. ಸಂಗಯ್ಯನೇ ಬಸವಯ್ಯ ಎಂಬ ಭಾವ ಅವರ ವಚನಗಳಲ್ಲಿ ಕಾಣಸಿಗುತ್ತದೆ.

#ರೂಪಿಲ್ಲದ ವಸ್ತುವೆ ರೂಪಾದೆಯಾ ಬಸವಯ್ಯಾ?
ನಿರೂಪಿಲ್ಲದ ವಸ್ತುವೆ ನಿರೂಪಾದೆಯಾ ಬಸವಯ್ಯಾ ?
ರೂಪು ನಿರೂಪು ಸಂಗಷ್ಟವಾಯಿತ್ತಯ್ಯಾ ಸಂಗಯ್ಯನ ಗುರುಬಸವಾ. / 263
- ✍️ Dr Prema Pangi
#ಪ್ರೇಮಾ_ಪಾಂಗಿ, #ಶರಣೆ_ನೀಲಾಂಬಿಕೆ

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma