ಅಷ್ಟಾವರಣ. - ಗುರು

ಅಷ್ಟಾವರಣ. - ಗುರು
ಅಷ್ಟಾವರಣ -  ಗುರು
 ಶರಣ ಧರ್ಮದ ಅಷ್ಟಾವರಣದಲ್ಲಿ ಮೊದಲ ಆವರಣವೇ ಗುರು. ಪೂಜನೀಯ ಚತುಷ್ಟಯಗಳಾದ ಗುರು ಲಿಂಗ ಜಂಗಮ ಪ್ರಸಾದಗಳಲ್ಲಿ ಒಂದು.
ಸ್ಥೂಲತನುವಿನಲ್ಲಿ (ಬಹಿರಂಗ ಸಾಧನೆ) ಗುರು ವ್ಯಕ್ತಿ.
ಸೂಕ್ಷ್ಮತನುವಿನಲ್ಲಿ (ಅಂತರಂಗ ಸಾಧನೆ) ಅರಿವೇ ಗುರು.
ಕಾರಣತನುವಿನಲ್ಲಿ ಪರಮಸತ್ಯವೇ ಗುರು.

ಗುರುವೆಂಬ ವ್ಯಕ್ತಿಯಿಂದ  ಅರಿವು ಉತ್ಪನ್ನವಾದ ಬಳಿಕ, ಮುಂದೆ ಹಾಗೆ ಪಡೆದ ಅರಿವನ್ನೆ ಗುರುವಾಗಿ ಮಾಡಿಕೊಂಡು ಅಂತರಂಗದ ಸಾಧನೆ ಮಾಡಬೇಕು. ಆಗ "ಅರಿವೇ ಗುರು". ಕಾರಣತನುವಿನಲ್ಲಿ ಮನೊಲಯವಾದ ಬಳಿಕ ನಾನು ಎಂಬುದು ಅಳಿದು ಎಲ್ಲಾ ಪರಮನೇ ಆದ ಬಳಿಕ ಆ ಪರಮಸತ್ಯವೇ ಗುರು.

 *ಎಲ್ಲ ಆಧ್ಯಾತ್ಮಿಕ ಸಾಧನೆಗೂ ಗುರುವೇ ಮೂಲ*
#ಮಡಿಕೆಯ ಮಾಡುವರೆ ಮಣ್ಣೇ ಮೊದಲು, ತೊಡಗೆಯ ಮಾಡುವರೆ ಹೊನ್ನೆ ಮೊದಲು, ಶಿವಪಥವರಿವೆಡೆ ಗುರುಪಥವೆ ಮೊದಲು ಕೂಡಲಸಂಗಮ ದೇವನರಿವೆಡೆ ಶರಣರ ಸಂಗವೆ ಮೊದಲು.
ಗುರು ಬಸವಣ್ಣನವರು ಮಡಿಕೆ ಮಾಡಲು ಮಣ್ಣು ಹೇಗೆ ಮುಖ್ಯವಾಗಿ ಬೇಕಾಗುವದೋ, ಆಭರಣ ಮಾಡಲು ಹೊನ್ನು ಹೇಗೆ ಮುಖ್ಯವಾಗಿ ಬೇಕಾಗುವದೋ ಹಾಗೆ  ಶಿವನ ನೆಲೆಯನ್ನು ಕಂಡುಕೊಳ್ಳಲು ಗುರುವಿನ ಮಾರ್ಗದರ್ಶನ ಬೇಕು. ಶರಣರ ಸತ್ಸಂಗ ಬೇಕು ಎಂಬ ಭಾವವನ್ನು ತಿಳಿಸಿದ್ದಾರೆ.

*ಗುರು ಇಲ್ಲದೆ ದೀಕ್ಷೆಯಿಲ್ಲ; ದೀಕ್ಷೆಯಿಲ್ಲದೆ ಸಾಧನೆಯಿಲ್ಲ*
ಸಾಧನಾಪಥದಲ್ಲಿ ಗುರುವಿಗಿಂತ ಅಧಿಕರಾದವರು ಯಾರೂ ಇಲ್ಲ. ಶಿಷ್ಯನ ಅಜ್ಞಾನವನ್ನು ತೊಲಗಿಸಿ ಪರಮಾತ್ಮನ ಜ್ಞಾನವನ್ನು ಮೂಡಿಸುವವನೇ ಗುರು. ಪರಮ ನಿರಂಜನನ ಕುರುಹು ಇಷ್ಟಲಿಂಗವೆಂಬುದನ್ನು ಗುರು ನಿರೂಪಿಸುತ್ತಾನೆ. ಆ ಕುರುಹಿನ ಮಧ್ಯದಲ್ಲಿ ಅರುಹಿನ ಕಳೆಯನ್ನೂ, ಜ್ಞಾನದ ಬೆಳಗನ್ನೂ ತೋರಿಸುತ್ತಾನೆ. ಆ ಬೆಳಗಿನಲ್ಲಿ ಶಿವ-ಜೀವರ ಐಕ್ಯವನ್ನೂ ಸಾಧಿಸುವ ರಹಸ್ಯವನ್ನು ಅರುಹುತ್ತಾನೆ. 

*ಸಾದಕ ಶಿಷ್ಯನಿಗೆ ಗುರುವಿನ ಮಾರ್ಗದರ್ಶನ ಯಾಕೆ ಬೇಕು?*
ಇದನ್ನು ಅತಿ ಸುಂದರವಾಗಿ ವಿವರಿಸಿದ್ದಾರೆ ಗುರು ಬಸವಣ್ಣನವರು.
#ಅರಿದಿಹೆನೆಂದಡೆ ಅರಿವಿಂಗಸಾಧ್ಯ,
ನೆನೆದಿಹೆನೆಂದಡೆ ನೆನಹಿಂಗಸಾಧ್ಯ,
ಭಾವಿಸಿಹೆನೆಂದಡೆ ಭಾವಕ್ಕಸಾಧ್ಯ,
ವಾಙ್ಮನಕ್ಕಗೋಚರ ಲಿಂಗವನರಿವ ಪರಿಯೆಂತಯ್ಯಾ, ಗುರು ತೋರದನ್ನಕ್ಕರ ?
ಗುರುಶಿಷ್ಯರ ಮಥನದಲ್ಲಿ ಸ್ವಯಂಜ್ಯೋತಿಲಿಂಗವು
ಉದಯವಪ್ಪುದೆಂಬ ಶ್ರುತಿ ಹುಸಿಯೆ
ಕೂಡಲಸಂಗಮದೇವಾ, 
ನಿಮ್ಮ ಮಹಾನುಭಾವರ ಮಥನದಿಂದ
ಎನ್ನಲ್ಲಿ ನಿಜವ ನೆಲೆಗೊಳಿಸಾ, ಪ್ರಭುವೆ/ 110
ಅಂತರಂಗದಲ್ಲಿ ಆಗುವ ಅರಿವು ಅದು  ಕೊಂಡುಕೊಳ್ಳುವ ವಸ್ತುವಲ್ಲ. ಅದು ಅರಿವಿಗೆ, ನೆನಹಿಗೆ, ಭಾವಕ್ಕೆ ಸಿಗದ ಅಗೋಚರವಾದ ತನ್ನಷ್ಟಕ್ಕೆ ತಾನೇ ಆಗುವ ಸ್ಫುರಣ.  ಅದಕ್ಕಾಗಿ ಸಾಧನೆ ಬೇಕು. ಆ ಸಾಧನೆಗಾಗಿ ಮಾರ್ಗತೋರುವ ಗುರು ಬೇಕು.  ಕಲಿವ ಹಂಬಲ, ಸಾಧಿಸುವ ಅದಮ್ಯ ಬಯಕೆ, ಶ್ರದ್ಧೆ, ಮಾರ್ಗತೋರುವ ಗುರು ಈ ನಾಲ್ಕು ಇದ್ದರೆ ಅರಿವಿನ ಹಾದಿ ಗೋಚರಿಸುವುದು.
"ಶಿಲಾಲಿಖಿತವ ಕಳೆದು, ಕಳಾಭೇದವನರಿದು ಕಳೆಯ ತುಂಬಿ ಕೊಡಬಲ್ಲರೆ ಗುರುವೆಂಬೆ, ಕೊಂಬಾತ ಶಿಷ್ಯನೆಂಬೆನಯ್ಯ” 
ಎನ್ನುತ್ತಾರೆ ತೋಂಟದ ಸಿದ್ಧಲಿಂಗಯತಿಗಳು. ಇಷ್ಟಲಿಂಗದ ಕಲ್ಲುತನವನ್ನು ಕಳೆದು ಅದರಲ್ಲಿ ಶಿಷ್ಯನ ಜೀವಕಳೆ ತುಂಬಬೇಕು ಗುರು ಎನ್ನುತ್ತಾರೆ.

*ಗುರುಗಳೇ ಶಿಷ್ಯರನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.*
 ಆಚಾರ ಸಂಪನ್ನ ಮತ್ತು ಸತ್ಕ್ರಿಯಾನಿರತನಾದವನು ಅಂಗದ ಮೇಲೆ ಲಿಂಗವನ್ನು ಧರಿಸಿ ತಾರತಮ್ಯ ಭಾವನೆಗಳನ್ನೆಲ್ಲಾ ಸುಟ್ಟು ಹಾಕಿ, ಸಾಧನೆಯಲ್ಲಿ ನಿರತನಾಗಲು ಗುರೂಪದೇಶ ಕಾರಣವಾಗುವಂತಾಗಬೇಕು. ಹೀಗಲ್ಲದೆ ಉಪಾಧಿವಿಡಿದು ಉಪದೇಶ ಮಾಡುವವನು ಗುರುವಲ್ಲ; ಉಪಾಧಿಯಲ್ಲಿ ದೀಕ್ಷೆ ಕೊಂಬಾತ ಶಿಷ್ಯನಲ್ಲ, ಇದು ಠಕ್ಕನ ಮನೆಗೆ ಠಕ್ಕ ಬಂದಂತೆ' ಎನ್ನುತ್ತಾರೆ ಅವಿರಳ ಜ್ಞಾನಿ ಚನ್ನಬಸವಣ್ಣನವರು.

 *ಗುರುವಿಲ್ಲದೆ ಲಿಂಗವಿಲ್ಲ*
ಗುರುವಿಡಿದು ಕುರುಹ ಕಾಣಬೇಕು. ಗುರುವಿಡಿದು ಅರುಹ ಕಾಣಬೇಕು, ಗುರುವಿಡಿದು ಆಚಾರವ ಕಾಣಬೇಕು, ಗುರುಕರುಣೆಯೇ ಸದಾಚಾರ, ಗುರು ಕರುಣೆಯೇ ಶಿವಾಚಾರ,  
ಮುಂದೆ ಗುರು, ಹಿಂದೆ ಲಿಂಗ;
ಅಂಗದಲ್ಲಿ ಆಚಾರವನ್ನು ತೋರುವವನು ಗುರು,
ಅಚಾರವೇ ಲಿಂಗ ಎಂದರುಹುವವನು ಗುರು,
ಪ್ರಾಣದಲ್ಲಿ ಆ ಆರಿವನ್ನು ನೆಲೆಗೊಳಿಸುವವನು ಗುರು, ಮಾಂಸಪಿಂಡವನ್ನು ಗುರು ಮಂತ್ರಪಿಂಡವನ್ನಾಗಿಸುತ್ತಾನೆ ದೀಕ್ಷೆಯಿಂದ. ಶಿವಪಥವಿದೆಂದು ತೋರಿದ ಸದ್ಗುರು ದೇವಂಗೆ ನಮೋನಮೋ ಎಂದು ಅನ್ನುತ್ತಾರೆ ತೋಂಟದ ಸಿದ್ಧಲಿಂಗಯತಿಗಳು. ಅರಿವಿನ ಬೆಳಕನ್ನು ಕೊಡುವ ಗುರುವಿನ ಸ್ವರೂಪವನ್ನು ಸೂಚಿಸಿದ್ದಾರೆ. ಲಿಂಗದೀಕ್ಷೆಯನ್ನಿತ್ತು ಸಾಧನೆಯಲ್ಲಿ ತೊಡಗಿಸುವವನು ಗುರು,

 *ಸದ್ಗುರುವಿನ ಕಾರುಣ್ಯವಾದರೂ ಅದನ್ನು ಸಾಧಿಸುವ ನಿಷ್ಠೆ ಭಕ್ತನಲ್ಲಿಯೂ ಹುಟ್ಟಬೇಕು*
ತನ್ನನ್ನು ತಾನೇ ಉದ್ಧರಿಸಿಕೊಳ್ಳಬೇಕೆಂಬ ಸ್ವಪ್ರಯತ್ನಕ್ಕೆ ಹೆಚ್ಚು ಮಹತ್ವ ಶರಣಮಾರ್ಗದಲ್ಲಿ ಲಭಿಸಿದೆ. ಶಿವಯೋಗಿ ಸಿದ್ಧರಾಮೇಶ್ವರರು
 ಶಿವಜ್ಞಾನವೆಂಬ ಅಂಜನವ ನೆಚ್ಚಿ, ಎನ್ನ ಕಣ್ಣ ಮುಸುಕಿದ ಅಜ್ಞಾನವೆಂಬ ಕಾಳಿಕೆಯ ಬೇರ್ಪಡಿಸುತ್ತಾನೆ ಶ್ರೀಗುರು ಎಂದು ಹೇಳಿದ್ದಾರೆ.

#ಭವತಿಮಿರವೆಂಬ ಅಜ್ಞಾನದಿಂದ ಮುಸುಕಿಕೊಂಡು,
ಕಾಣಬಾರದೆಯಿದ್ದ ಕಣ್ಣಿಂಗೆ ಜ್ಞಾನವೆಂಬ ಅಂಜನವನೆಚ್ಚು
ಶಿವಪಥವಿದೆಂದು ತೋರಿಸಿದ ಸದ್ಗುರುದೇವಂಗೆ
ನಮೋನಮೊಯೆಂಬೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. / 493
ಎಂಬ ತೋಂಟದ ಸಿದ್ಧಲಿಂಗನ ವಚನವೂ ಕಣ್ಣಿಗೆ ಬೆಳಕನ್ನು ಕೊಡುವ ಗುರುವಿನ
ಸ್ವರೂಪವನ್ನು ಸೂಚಿಸುತ್ತದೆ.

*ಲಿಂಗದೀಕ್ಷೆ  ಧಾರ್ಮಿಕ ಆಚರಣೆಯಲ್ಲಿ ಮಹತ್ವಪೂರ್ಣವಾದ ಆಚರಣೆ*
ಅಂಗಕ್ಕೆ ಲಿಂಗಸಂಬಂಧವನ್ನುಂಟುಮಾಡಿ ಅದರಿಂದ ಮಲತ್ರಯಗಳನ್ನು ನಾಶಗೊಳಿಸುವುದು ಲಿಂಗದೀಕ್ಷೆ. ಆಣವಮಲ, ಮಾಯಾಮಲ ಕಾರ್ಮಿಕಮಲಗಳನ್ನು ಕಳೆಯಲು ಗುರು ಲಿಂಗದೀಕ್ಷೆಯನ್ನು ಕೊಡುತ್ತಾನೆ. 
ಈ ದೀಕ್ಷೆ ಮೂರು ಬಗೆಯಾಗಿದೆ.

ಕಾಯಕ್ಕೆ ಕ್ರಿಯಾದೀಕ್ಷೆ , ಪ್ರಾಣಕ್ಕೆ ಮಂತ್ರದೀಕ್ಷೆ , ಮನಕ್ಕೆ ವೇಧಾದೀಕ್ಷೆ ಎಂದು ಕಾಯ ಪ್ರಾಣ ಮನಗಳಿಗೆ ಸಂಸ್ಕಾರ ಮಾಡಬೇಕು.
ಶರಣಧರ್ಮದ ರೂಪರೇಷೆ ಬರೆದ ಚನ್ನಬಸವಣ್ಣನವರು ಇವುಗಳ ವಿವರಗಳನ್ನು ಒಂದು ವಚನದಲ್ಲಿ ಹೀಗೆ ಹೇಳಿದ್ದಾರೆ :
ಅಣವ ಮಲ ಮಾಯಾಮಲ ಕಾರ್ಮಿಕ ಮಲವೆಂಬ ಮಲತ್ರಯಂಗಳ ಕಳೆದು,
ಆಜ್ಞಾದೀಕ್ಷೆ, ಉಪಮಾದೀಕ್ಷೆ,
 ಸ್ವಸ್ತಿಕಾರೋಹಣ, ಕಳಶಾಭಿಷೇಕ
ವಿಭೂತಿಯ ಪಟ್ಟ, ಲಿಂಗಾಯತ, 
ಲಿಂಗ ಸ್ವಾಯತ
- ಈ ಏಳು ಕಾಯಕ್ಕೆ ಉಪದೇಶವ ಮಾಡುವುದು.

ಸಮಯ, ನಿಸ್ಸಂಸಾರ, ನಿರ್ವಾಣ, ತತ್ವದೀಕ್ಷೆ, ಅಧ್ಯಾತ್ಮ, ಅನುಗ್ರಹ, ಶುದ್ಧವಿದ್ಯೆ
- ಈ ಏಳು ಪ್ರಾಣಕ್ಕೆ ಉಪದೇಶವ ಮಾಡುವುದು

ಏಕಾಗ್ರಚಿತ್ರ, ದೃಢವ್ರತ, ಪಂಚೇಂದ್ರಿಯಾರ್ಪಿತ, ಅಹಿಂಸೆ,
ಮನೋಲಯ, ನಿಜಲಿಂಗ, ಸದ್ಯೋನ್ಮುಕ್ತಿ
- ಈ ಏಳು ಮನಕ್ಕೆ ಉಪದೇಶ ಮಾಡುವುದು.
ಈ ಪ್ರಕಾರದ ಉಪದೇಶ ಸಹಜದೀಕ್ಷೆ ಎನ್ನುವರು.

ಕಾಯಕ್ಕೆ ಪ್ರಾಣಕ್ಕೆ ಮನಕ್ಕೆ ಕೊಡಬೇಕಾದ ತ್ರಿವಿಧ ದೀಕ್ಷೆಗಳ ರಹಸ್ಯ ಇಲ್ಲಿದೆ.
ಒಂದೊಂದಕ್ಕೂ ಏಳು ಬಗೆಯ ಉಪದೇಶವನ್ನು ಮಾಡಿ ಲಿಂಗವನ್ನು ಸಂಗತಗೊಳಿಸುತ್ತಾನೆ ಗುರು.

ಈ ದೃಷ್ಟಿಯಿಂದ ಗುರುವಿನಲ್ಲಿಯೂ ಮೂರು ಹಂತಗಳನ್ನು ಕಂಡಿದ್ದಾರೆ ಶರಣರು.
*ದೀಕ್ಷಾಗುರು, ಮೋಕ್ಷಗುರು, ಜ್ಞಾನಗುರು*
#ಅಂಗಕ್ಕೆ ಲಿಂಗವ ಕೊಟ್ಟವ ಆಚಾರ್ಯನಾದ.
ಮನಕ್ಕರಿವ ತೋರಿದಾತ ಮೋಕ್ಷ ಆಚಾರ್ಯನಾದ.
ಮೋಕ್ಷ ವಿಮೋಕ್ಷವಾಗಿ ಉಭಯದ ಗೊತ್ತ ತೋರಿ,
ಕಾಯದ ಕರ್ಮವ ಕೆಡಿಸಿ, ಜೀವನ ಭವವ ಛೇದಿಸಿ,
ತದ್ರೂಪ ತೋರಿದ ಜ್ಞಾನಗುರು.
ಆತ ಪ್ರಕಾಶ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ತಾನೆ./4
ಕಾಯದ ಕರ್ಮವ ಕೆಡಿಸಿ, ಜೀವನ ಭವವ ಛೇದಿಸಿ, ತದ್ರೂಪವ ತೋರಿದಾತನು ಜ್ಞಾನಗುರು.

ಹೀಗೆ ಗುರು ತ್ರಿಮುಖನಾಗಿ ಸಾಧಕನನ್ನು ಕೈಹಿಡಿದು ನಡೆಸುತ್ತಾನೆ. ಗುರುವಿನಿಂದ
ಲಿಂಗ ಲಭಿಸುತ್ತದೆ. ಕ್ರಿಯಾ ಮಂತ್ರ ಮತ್ತು ವೇಧಾದೀಕ್ಷೆಗಳಿಂದ ಸಾಧನೆಯ ಮಾರ್ಗ
ಸಿದ್ಧಿಸುತ್ತದೆ. ಗುರು ಭವಪಾಶಗಳನ್ನು ಹರಿದು ಶಿವಸಂಸ್ಕಾರಿಯನ್ನಾಗಿ ಮಾಡುತ್ತಾನೆ
ಶಿಷ್ಯನನ್ನು, ಶಿವಮಂತ್ರವ ಅರುಹಿ ಮಂತ್ರ ಶರೀರಿ ಮಾಡುತ್ತಾನೆ.

#ಎನ್ನ ತನುವ ಶೋಧಿಸಿ
ಚಿನುಮಯಲಿಂಗವ ಮಾಡಿ ತೋರಿದನಯ್ಯ ಸದ್ಗುರು.
ಎನ್ನ ಮನವ ಶೋಧಿಸಿ
ಮನಘನಲಿಂಗವ ಮಾಡಿ ತೋರಿದನಯ್ಯ ಸದ್ಗುರು.
ಎನ್ನ ಭಾವವ ಶೋಧಿಸಿ
ಭಾವಭರಿತಲಿಂಗವ ಮಾಡಿ ತೋರಿದನಯ್ಯ ಸದ್ಗುರು.
ಎನ್ನ ಕರಣಂಗಳ ಕಳೆದು ಲಿಂಗಕರಣಂಗಳ ಮಾಡಿದ
ಸದ್ಗುರುದೇವಂಗೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ. / 144
ಹೀಗೆ ಕುರುಹುವಿಡಿದು ಅರುಹನ್ನು ಕಾಣುವ ರಹಸ್ಯವನ್ನು ಕೈಗೂಡಿಸಿಕೊಡುತ್ತಾನೆ.
ಇದನ್ನು ಷಣ್ಮುಖಸ್ವಾಮಿಯ ಇನ್ನೊಂದು ವಚನ ಬಹಳ ಅರ್ಥವತ್ತಾಗಿ ಹೀಗೆ
ನಿರೂಪಿಸುತ್ತಿದೆ :

#ಎನ್ನ ಕರಸ್ಥಳ ಮಧ್ಯದಲ್ಲಿ ಪರಮ ನಿರಂಜನ ಕುರುಹುದೋರಿದ ;
ಆ ಕುರುಹಿನ ಮಧ್ಯದಲ್ಲಿ ಅರುಹಿನ ಕಳೆ ತೋರಿದ
ಆ ಕಳೆಯ ಮಧ್ಯದಲ್ಲಿ ಮಹಾಜ್ಞಾನದ ಬೆಳಗು ತೋರಿದ
ಆ ಬೆಳಗಿನ ನಿಲವಿನೊಳಗೆ ಎನ್ನ ತೋರಿದ.
ಎನ್ನೊಳಗೆ ತನ್ನ ತೋರಿದ
ತನ್ನೊಳಗೆನ್ನೆ ನಿಂಬಿಟ್ಟು ಕೊಂಡ ಮಹಾಗುರುವಿಗೆ
ನಮೋ ನಮೋ ಎನುತಿರ್ಪನಯ್ಯ ಅಖಂಡೇಶ್ವರಾ,
ಇಷ್ಟಲಿಂಗೋಪಾಸನೆಯ ಎಲ್ಲ ಹಂತಗಳೂ ಇಲ್ಲಿ ಕಾಣತ್ತವೆ. ಪರಮ ನಿರಂಜನನ
ಕುರುಹು ಇಷ್ಟಲಿಂಗವೆಂಬುದನ್ನು ಗುರು ನಿರೂಪಿಸುತ್ತಾನೆ. ಆ ಕುರುಹಿನ ಮಧ್ಯದಲ್ಲಿ
ಅರುಹಿನ ಕಳೆಯನ್ನೂ, ಜ್ಞಾನದ ಬೆಳಗನ್ನೂ ತೋರಿಸುತ್ತಾನೆ. ಆ ಬೆಳಗಿನಲ್ಲಿ ಶಿವ
ಜೀವರ ಐಕ್ಯವನ್ನೂ ಸಾಧಿಸುವ ರಹಸ್ಯವನ್ನು ಅರುಹುತ್ತಾನೆ.

 *ಯೋಗ್ಯ ಗುರುವಿನಿಂದ ಯೋಗ್ಯ ಶಿಷ್ಯನಿಗೆ ಲಭಿಸಿದ ದೀಕ್ಷೆ ಸಾರ್ಥಕವಾಗುತ್ತದೆ*. 
#ಉಪಚಾರದ ಗುರುವಿಂಗೆ ಉಪಚಾರದ ಶಿಷ್ಯನು,
ಉಪಚಾರದ ಲಿಂಗ ಉಪಚಾರದ ಜಂಗಮವು,
ಉಪಚಾರದ ಪ್ರಸಾದವ ಕೊಂಡು, ಗುರುವಿಂಗೆ ಭವದ ಲೆಂಕನಾಗೆ,
ಅಂಧನ ಕೈಯ ಅಂಧಕ ಹಿಡಿದಂತೆ-
ಇಬ್ಬರೂ ಹೊಲಬುಗೆಟ್ಟರು ಕಾಣಾ ಗುಹೇಶ್ವರಾ. / 425
 ಎನ್ನುತ್ತಾರೆ ಅಲ್ಲಮಪ್ರಭುಗಳು. 

ಶರಣ ಅಂಬಿಗರ ಚೌಡಯ್ಯ ಗುರು ಹೇಗಿರಬೇಕು ಎಂದು ತಿಳಿಸಿದ್ದಾರೆ.
#ಅರಿಯದ ಗುರು ಅರಿಯದ ಶಿಷ್ಯಂಗೆ
ಅನುಗ್ರಹವ ಮಾಡಿದಡೇನಪ್ಪುದೆಲವೋ.
ಅಂಧಕನ ಕೈಯನಂಧಕ ಹಿಡಿದಡೆ
ಮುಂದನಾರು ಕಾಬರು ಹೇಳೆಲೆ ಮರುಳೇ?
ತೊರೆಯಲದ್ದವನನೀಸಲರಿಯದವ ತೆಗೆವ ತೆರನಂತೆಂದನಂಬಿಗ ಚೌಡಯ್ಯ/6/39

ಅಜ್ಞಾನಿಗುರು ಅಜ್ಞಾನಿ ಶಿಷ್ಯನಿಗೆ ಗುರುವಾಗಿ ಅನುಗ್ರಹಮಾಡಿದರೆ, ಶಿಷ್ಯನಲ್ಲಿ ಎನು ಬದಲಾವಣೆಯಾದೀತು?
 ಗುರುವೇ  ಕತ್ತಲೆಯಲ್ಲಿದ್ದರೆ ಆತ ತನ್ನನ್ನೇ ನಂಬಿಕೊಂಡಿರುವ ಕುರುಡ ಶಿಷ್ಯರಿಗೆ ಅದು ಹೇಗೆ ಬೆಳಕನ್ನು ತೋರಿಸಬಲ್ಲ'? ಈಜು ಬಾರದವನು ಪ್ರವಾಹದಲ್ಲಿ ಸಿಲುಕಿದವನನ್ನು ಅದು ಹೇಗೆ ಕಾಪಾಡುತ್ತಾನೆ? ಎನ್ನುತ್ತಾರೆ
ಶರಣ ಅಂಬಿಗರ ಚೌಡಯ್ಯ.

 #ಲೋಕದಲ್ಲಿಹ ನೂರಾರು ಗುರುಗಳ ನೋಡಿ ನೋಡಿ
ನಾನು ಬೇಸರುಗೊಂಡೆನಯ್ಯಾ.
ವಿತ್ತಾಪಹಾರಿ ಗುರುಗಳು ನೂರಾರು;
ಶಾಸ್ತ್ರಾರ್ಥ ಹೇಳುವ ಗುರುಗಳು ನೂರಾರು;
ಮಂತ್ರತಂತ್ರದಿಂದುಭಯ ಲೋಕದಲ್ಲಿ
ಸುಖದುಃಖವೀವ ಗುರುಗಳು ನೂರಾರು;
ಸತ್ಕರ್ಮೊಪದೇಶವನರುಹಿ
ಸ್ವರ್ಗಮತ್ರ್ಯದಲ್ಲಿ ಸುಖವೀವ ಗುರುಗಳು ನೂರಾರು;
ವಿಚಾರಮುಖದಿಂದ ಷಟ್ಸಾಧನೆಯನರುಹುವ ಗುರುಗಳು
ನೂರಾರು.
ವಿಷಯಂಗಳೆಲ್ಲ ಮಿಥ್ಯಂಗಳೆಂದರುಹಿ
ಆತ್ಮಾನುರಾಗತ್ವವನೀವ ಗುರುಗಳು ನೂರಾರು;
ಶಿವಜೀವರ ಏಕತ್ವವನರುಹಿ
ನಿರ್ಮಲಜ್ಞಾನವೀವ ಗುರುಗಳು ಪ್ರಮಥರು.
ಸಂಶಯಾಳಿಗಳನೆಲ್ಲ ಜ್ಞಾನಾಗ್ನಿಯಿಂದ ದಹಿಸಿ
ಮುಕ್ತಿಯ ಹಂಗೆಂಬುದ ಅರುಹಿನ ಬಂಧದಲ್ಲಿರಿಸಿದ ಗುರು
ಚೆನ್ನಬಸವಣ್ಣನಲ್ಲದೆ ಮತ್ತೋರ್ವನ ಕಾಣೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ. / 1662
 ಎಂದು ಮುಂತಾಗಿ ಶಿವಯೋಗಿ ಸಿದ್ಧರಾಮೇಶ್ವರರು ಹೇಳುತ್ತಾ
“ಸಂಶಯಾಳಿಗಳನೆಲ್ಲ ಜ್ಞಾನಾಗ್ನಿಯಿಂದ ದಹಿಸಿ ಮುಕ್ತಿಯ ಹಂಗೆಂಬುದ ಅರುಹಿನ ಬಂಧದಲ್ಲಿರಿಸಿದ ಗುರು ಮಾತ್ರ ನಿಜವಾದ ಗುರುವೆಂದು ಪುರಸ್ಕರಿಸುತ್ತಾರೆ.

ಇಂತಹ ಗುರು, ಯೋಗ್ಯ ಶಿಷ್ಯನಿಗೆ ಮಾತ್ರ ದೀಕ್ಷೆಯನ್ನೀಯುತ್ತಾನೆ. ಅಳಿಮನದವನಿಗೆ ದೀಕ್ಷೆಯನ್ನು ಕೊಟ್ಟರೆ, ಬಸವಣ್ಣನವರು ಹೇಳುವುದು 
ಸಗಣಿಯ ಬೆನಕಂಗೆ ಸಂಪಿಗೆಯರಳಲ್ಲಿ ಪೂಜಿಸಿದಂತೆ, ಮಣ್ಣ ಪುತ್ಥಳಿಯ ಜಲದಲ್ಲಿ ತೊಳೆದಂತೆ, ಕುಂಬಳದಕಾಯಿಗೆ ಕಬ್ಬುನದ ಕಟ್ಟಿಕೊಟ್ಟಂತೆ ಆಗುತ್ತದೆ.

 “ಗುರುವೆಂಬಾತನು ಶಿಷ್ಯನ ಕಾಯ ಜೀವ ಮನಗಳನ್ನು ಶುದ್ಧಮಾಡಬೇಕು, ಆಚಾರ ಭ್ರಷ್ಟರಿಗೆ ಹಸ್ತಾನುಗ್ರಹವ ಮಾಡಬಾರದು. ಅದು “ಹಸನಮಾಡಿ ಹರಗಿ ಹೊಲದಲ್ಲಿ ಕಸವ ಬಿತ್ತುವ ಮರುಳರಂತೆ” ಆಗುತ್ತದೆ.

#ಹೊಟ್ಟೆಯ ಮೇಲೆ ಕಟ್ಟೋಗರದ ಮೊಟ್ಟೆಯ ಕಟ್ಟಿದಡೇನು?
ಹಸಿವು ಹೋಹುದೆ?
ಅಂಗದ ಮೇಲೆ ಲಿಂಗಸ್ವಾಯತವಾದಡೇನು?
ಭಕ್ತನಾಗಬಲ್ಲನೆ?
ಇಟ್ಟ ಕಲ್ಲು ಮೆಳೆಯ ಮೇಲೆ ಸಿಲುಕಿದಡೆ,
ಆ ಕಲ್ಲು ಲಿಂಗವೆ? ಆ ಮೆಳೆ ಭಕ್ತನೆ? ಇಟ್ಟಾತ ಗುರುವೆ?
ಇಂತಪ್ಪವರ ಕಂಡಡೆ ನಾಚುವೆನಯ್ಯಾ-ಗುಹೇಶ್ವರಾ. / 1622
ಎಂದು ಅಲ್ಲಮಪ್ರಭು ಇಂತಹ ಗುರು ಶಿಷ್ಯರ ಸಂಬಂಧವನ್ನು ವಿಡಂಬಿಸುತ್ತಾರೆ. 
ನಿಜವಾದ ಗುರು
 “ನಡೆ ನುಡಿ ಶುದ್ಧವಾದವರಿಗಲ್ಲದೆ ಅನುಗ್ರಹಿಸ ನೋಡಾ. ಪರಮಾರ್ಥರಲ್ಲದ
ಜಡ ನರರನೊಲ್ಲೆ ,ದೀಕ್ಷೆಯ ಕೊಡೆನು” ಎನ್ನುತ್ತಾರೆ ಚನ್ನಬಸವಣ್ಣನವರು.
ಹೀಗೆ ದೀಕ್ಷೆಗೆ ಯೋಗ್ಯತೆ ಬಹಳ ಮುಖ್ಯ ಎಂಬುದನ್ನು ಶರಣರು ಒತ್ತಿ ಹೇಳುತ್ತಾರೆ. 
ಈ ಯೋಗ್ಯತೆ ಲೌಕಿಕ ಜಾತಿ ಅಂತಸ್ತು ಅಧಿಕಾರಗಳಿಂದ ಲಭಿಸುವುದಿಲ್ಲ . ಸ್ವಭಾವತಃ ಸಿದ್ಧವಾದದ್ದು. ಆಂತರಿಕವಾದ ಅಭೀಷ್ಟೆಯಿಂದ ಶಕ್ತಿಪಾತವಾದುದರ ಫಲ.  ಶಕ್ತಿಪಾತ ಅಂದರೆ ದೈವಕೃಪೆ ಲಭಿಸಿದವನು ಯಾರೇ ಆಗಲಿ ಆತನು ದೀಕ್ಷೆಗೆ ಅರ್ಹನಾಗುತ್ತಾನೆ.
#ಬ್ರಾಹ್ಮಣನಾಗಲಿ ಕ್ಷತ್ರಿಯನಾಗಲಿ ವೈಶ್ಯನಾಗಲಿ ಶೂದ್ರನಾಗಲಿ
ಆವಜಾತಿಯಲ್ಲಿ ಹುಟ್ಟಿದಾತನಾದಡಾಗಲಿ,
ಗುರುಕಾರುಣ್ಯವ ಪಡೆದು ಅಂಗದ ಮೇಲೆ ಲಿಂಗಧಾರಣವಾಗಿ
ಆಚಾರಕ್ರಿಯಾಸಂಪನ್ನನಾದ ಮಹಾತ್ಮನೇ ಮೂರುಲೋಕಕ್ಕಧಿಕ ನೋಡಾ !
ಅದೆಂತೆಂದೊಡೆ :
``ಬ್ರಾಹ್ಮಣಃ ಕ್ಷತ್ರಿಯೋ ವೈಶ್ಯಃ ಶೂದ್ರೋ ವಾಪ್ಯಂತ್ಯಜೋಪಿ ವಾ |
ಶಿವಭಕ್ತಃ ಸದಾ ಪೂಜ್ಯಃ ಸರ್ವಾವಸ್ಥಾಂ ಗತೋಪಿ ವಾ ||''
ಎಂದುದಾಗಿ,
ಇಂತಪ್ಪ ಪರಮ ಶಿವಭಕ್ತನು ಶರಣ ನೋಡಾ ಅಖಂಡೇಶ್ವರಾ. / 488

ಹೀಗೆ ಆಚಾರ ಸಂಪನ್ನ ಮತ್ತು ಸಕ್ರಿಯಾನಿರತನಾದವನು ಅಂಗದ ಮೇಲೆ ಲಿಂಗವನ್ನು ಧರಿಸಿ ತಾರತಮ್ಯ ಭಾವನೆಗಳನ್ನೆಲ್ಲಾ ಸುಟ್ಟು ಹಾಕಿ, ಸಾಧನೆಯಲ್ಲಿ ನಿರತನಾಗಲು ಗುರೂಪದೇಶ ಕಾರಣವಾಗುವಂತಾಗಬೇಕು. ಹೀಗಲ್ಲದೆ ಉಪಾಧಿ ಹಿಡಿದು ಉಪದೇಶ
ಮಾಡುವವನು ಗುರುವಲ್ಲ; ಉಪಾಧಿಯಲ್ಲಿ ದೀಕ್ಷೆ ಕೊಂಬಾತ ಶಿಷ್ಯನಲ್ಲ, ಇದು
ಠಕ್ಕನ ಮನೆಗೆ ಠಕ್ಕ ಬಂದಂತೆ' ಎನ್ನುತ್ತಾರೆ ಚನ್ನಬಸವಣ್ಣನವರು. ದೀಕ್ಷೆಯನ್ನು ಪಡೆದು
ಭವಿತನವನ್ನು ಕಳೆದುಕೊಂಡ ಶಿಷ್ಯ, ಮತ್ತೆ ಭವಿತನದ ಕಾರ್ಯಗಳಲ್ಲಿ ನಿರತನಾಗಬಾರದು.
ಅಂತೆಯೇ ದೀಕ್ಷೆಯನ್ನಿತ್ತ ಗುರು ಆ ಶಿಷ್ಯನಲ್ಲಿ ಮತ್ತೆ ಭವಿತನವನ್ನು ಕಂಡು ತಾರತಮ್ಯ
ಮಾಡಬಾರದು.

#ಕುಲಹೀನ ಶಿಷ್ಯಂಗೆ ಅನುಗ್ರಹವ ಕೊಟ್ಟು
ತನ್ನ ಪ್ರಾಣಲಿಂಗವ ನಿಕ್ಷೇಪಿಸಿ, ಕರ್ಣಮಂತ್ರವ ಹೇಳಿ,
ಆ ಗುರು ಬಂದು ಆ ಶಿಷ್ಯನ ಮನೆಯ ಹೊಗಲೊಲ್ಲದೆ
ಅಕ್ಕಿ ತುಪ್ಪವನೀಸಿಕೊಂಬವನ ಕೇಡಿಂಗೆ ಇನ್ನೇವೆನಯ್ಯಾ ?
ತನ್ನ ಪ್ರಾಣಲಿಂಗವನವನಿಗೆ ಕೊಟ್ಟು ತಾ ಹೋಗೆನೆಂಬ
ವ್ರತಗೇಡಿಯ ಇನ್ನೇನೆನಬಹುದಯ್ಯಾ ?
ಅವನ ಧನಕ್ಕೆ ತಂದೆಯಾದನಲ್ಲದೆ ಅವನಿಗೆ ತಂದೆಯಾದುದಿಲ್ಲ.
ಇದು ಕಾರಣ-ಕೂಡಲಚೆನ್ನಸಂಗಯ್ಯಾ
ಆ ಲಿಂಗವ ಮಾರಿಕೊಂಡುಂಬ ಭಂಗಕಾರರು
ಕೆಟ್ಟಕೇಡನೇನೆಂಬೆನಯ್ಯಾ ! / 560
 ಇಂತಹ ಗುರುವನ್ನು
ಕಂಡು ಚನ್ನಬಸವಣ್ಣ ಬೇಸರಿಸಿದ್ದರೆ, “ಗುರು ಲಿಂಗ ಜಂಗಮದ ಹೆಸರಿನಿಂದ ಕಾಯಕವ
ಮಾಡಿ ಗುರುಚರಣಕೆ ವಂಚಿಸಿ, ತಂದೆ ತಾಯಿ ಬಂಧು ಬಳಗ ಹೆಂಡಿರು, ಮಕ್ಕಳು,
ಒಡಹುಟ್ಟಿದವರು ಎಂದು ಸಮಸ್ತ ಪದಾರ್ಥವ ಭಾಗವ ಮಾಡುವ ಭಕ್ತರನ್ನು
ಕಂಡು ಮರುಗುತ್ತಾರೆ ಬಸವಣ್ಣನವರು,

*ಗುರು-ಶಿಷ್ಯರಿಬ್ಬರ ನೈತಿಕಾಚರಣೆ*
ಗುರು-ಶಿಷ್ಯರಿಬ್ಬರ ನೈತಿಕಾಚರಣೆಗೂ ಶರಣರು ಗಮನವನ್ನು ಕೊಟ್ಟದ್ದು ಮಹತ್ವದ ಸಂಗತಿ, ಗುರುವಿನಲ್ಲಿ ಗುಣವನ್ನು ಹುಡುಕಬಾರದು ಎಂಬ ಮಾತು ನಿಷ್ಠೆಯ ಬೆಳವಣಿಗೆಗೆ ಉಚಿತವೇ ಹೊರತು, ಅದು ಗುರುವಿನ ಅನಾಚಾರಕ್ಕೆ ರಕ್ಷಣೆಯಾಗಲಾರದು.  ಗುರುವಿನಲ್ಲಿರಬೇಕಾದದ್ದು ನಡೆ ನುಡಿಗಳ ಸಮನ್ವಯ, ಅಶೆ ಆಮಿಷಗಳ ಭ್ರಾಂತಿಭ್ರಮೆಗಳನ್ನಳಿದ ಅಂತರಂಗ ಬಹಿರಂಗ ಶುದ್ಧವಾದ ಸರ್ವಾಚಾರ.

*ಗುರುವಿನ ಅನುಗ್ರಹ ಪಡೆದ ಮಾತ್ರಕ್ಕೆ ಶಿಷ್ಯನ ಭವಬಂಧನ ಹರಿಯದು*
ಗುರು ತನ್ನಂತೆ ಶಿಷ್ಯನನ್ನು ಮಾಡುತ್ತಾನೆ ನಿಜ, ಆದರೆ ಹಾಗಾಗುವುದಕ್ಕೆ ಶಿಷ್ಯನ ಪ್ರಯತ್ನವೂ ಆವಶ್ಯಕ.
#ಏರಿಯ ಕಟ್ಟಬಹುದಲ್ಲದೆ ನೀರ ತುಂಬಬಹುದೆ?
ಕೈದುವ ಕೊಡಬಹುದಲ್ಲದೆ ಕಲಿತನವ ಕೊಡಬಹುದೆ?
ವಿವಾಹವ ಮಾಡಬಹುದಲ್ಲದೆ ಪುರುಷತನವ ಹರಸಬಹುದೆ?
ಘನವ ತೋರಬಹುದಲ್ಲದೆ ನೆನಹ ನಿಲಿಸಬಹುದೆ 
`ಓದು ಒಕ್ಕಾಲು ಬುದ್ಧಿ ಮುಕ್ಕಾಲು' ಎಂಬ ಲೋಕದ ಗಾದೆಮಾತಿನಂತೆ,
ಸದ್ಗುರುಕಾರುಣ್ಯವಾದಡೂ ಸಾಧಿಸಿದವನಿಲ್ಲ , ಸಕಳೇಶ್ವರಾ. / 32
ಎಂಬ ವಚನದಲ್ಲಿ ಸಕಲೇಶ ಮಾದರಸರು ಇದನ್ನು ಬಹಳ ಚೆನ್ನಾಗಿ ಹೇಳಿದ್ದಾರೆ. ಸದ್ಗುರು
ವಿನ ಕಾರುಣ್ಯವಾದರೂ ಅದನ್ನು ಸಾಧಿಸುವ ನಿಷ್ಠೆ ಭಕ್ತನಲ್ಲಿಯೂ ಹುಟ್ಟಬೇಕು. ತನ್ನನ್ನು ತಾನೇ ಉದ್ಧರಿಸಿಕೊಳ್ಳಬೇಕೆಂಬ ಸ್ವಪ್ರಯತ್ನಕ್ಕೆ ಹೆಚ್ಚು ಮಹತ್ವ ಶರಣಮಾರ್ಗದಲ್ಲಿ ಲಭಿಸಿದೆ.

ಹೀಗೆ ಗುರುಕಾರುಣ್ಯ ಶಿಷ್ಯ ಪ್ರಯತ್ನ ಎರಡೂ ಸೇರಿದಾಗ ಅದು ಕೊನೆಯಲ್ಲಿ
ಗುರು ಶಿಷ್ಯ ಎಂಬ ಭೇದ ಭಾವನೆಯನ್ನು ಅಳಿಸಿ ಹಾಕುವ ಸಾಮರಸ್ಯದ ನಿಲವಿಗೆ
ಏರುತ್ತದೆ. 
#ಜ್ಯೋತಿಕರ್ಪುರದ ಸಂಗ ಜ್ಯೋತಿಯಪ್ಪಂತೆ,
ಅಪ್ಪುವಿನ ಸಂಗದಿಂದ ಉಪ್ಪುವಪ್ಪುವಪ್ಪಂತೆ,
ಶ್ರೀಗುರುವಿನ ಸಂಗವ ಶಿಷ್ಯಮಾಡಿ ಶ್ರೀಗುರುವಪ್ಪುದು ತಪ್ಪದು.
ಶಿವನಾಣೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ. / 131
ಎನ್ನುತ್ತಾರೆ ಉರಿಲಿಂಗಪೆದ್ದಿ ಶರಣಗುರುಗಳು.
 
#ಗುರು, ಶಿಷ್ಯ ಸಂಬಂಧವನರಸಲೆಂದು ಹೋದಡೆ,
ತಾನೆ ಗುರುವಾದ ತಾನೆ ಶಿಷ್ಯನಾದ, ತಾನೆ ಲಿಂಗವಾದ.
ಗುಹೇಶ್ವರಾ-ನಿಮ್ಮ ಶರಣನ ಕಾಯದ ಕೈಯಲ್ಲಿ ಲಿಂಗವ ಕೊಟ್ಟಡೆ,
ಭಾವ ಬತ್ತಲೆಯಾಯಿತ್ತು ! / 766
ಎಂಬ ಅಲ್ಲಮ ಪ್ರಭುವಿನ ಮಾತು ಗುರುಶಿಷ್ಯ ಸಂಬಂಧದ ಕೊನೆಯ ಹಂತವನ್ನು
ಸೂಚಿಸುತ್ತದೆ. 

 *ಶರಣ ಧರ್ಮದಲ್ಲಿ ಗುರು ಹೇಗಿರಬೇಕು?*
ಕಾಯದೊಳಗಿನ ಪರತತ್ವವನ್ನು ಇಷ್ಟಲಿಂಗದಲ್ಲಿನ ಪರವಸ್ತುವಿನ ನೆಲೆಯನ್ನು ಬಲ್ಲವನೋ, ಆತ ಗುರು. ಗುರುವಾದವನು ತನ್ನ ಶಿಷ್ಯರಲ್ಲಿಯೂ ಶಿವಸ್ವರೂಪವನ್ನು ಕಾಣುವಂತಿರಬೇಕು. ಶಿಷ್ಯನಿಗೆ ಅನುಗ್ರಹವ ಮಾಡಿ ದೀಕ್ಷೆ ಕೊಟ್ಟ ಬಳಿಕ ಆತನ ಪೂರ್ವಾಶ್ರಮದ ಕುಲ ಜಾತಿ ಎಣಿಸಿ ಮಡಿ ಮೈಲಿಗೆ ಎಣಿಸಿದರೆ ಆತ ಗುರುವಲ್ಲ. ಪ್ರಚಾರಕ್ಕೋಸ್ಕರ , ಅರ್ಥ ಸಂಪಾದನೆಗಾಗಿ  ಉಪದೇಶವೀಯುವವನು ಗುರುವಲ್ಲ.
ಕಾಮ, ಹೇಮೆ, ಕಾಂಚನಗಳ ಮೋಹ ಹೊಂದಿದವನು ಗುರುವಲ್ಲ. ಮಲತ್ರಯಗಳ ಸುಳಿಗೆ ಸಿಕ್ಕು ಮಾಯಾವಶನಾಗಿ ಇಂದ್ರಿಯ ಭೋಗಾಸಕ್ತಿಯ ಲೋಲೂಪನಾದವನು ಗುರುವಲ್ಲ.
ಯಾರ ಸಂಪರ್ಕಕ್ಕೆ ಬಂದಾಗ ನಮಗೆ ಪರಮಾತ್ಮನ ದರ್ಶನದ ಅನುಭವ ಉಂಟಾಗುತ್ತದೆಯೋ, ಯಾರ ಬಳಿ ಬಂದಾಗ ನಮಗೆ ದೇವರ ಅನುಗ್ರಹದ ಆನಂದ ತುಂಬಿ ಬರುತ್ತದೆಯೋ ಆತನೇ ಸದ್ಗುರು. ಗುರುವಿನ‌ ಕಂಡೋಡನೆ‌ ಹರನ ಸ್ಮರಣೆಯಾಗಬೇಕು.
ಯಾರ ಮಾತು ಮಂತ್ರವಾಗಿದೆಯೋ
ಆತನು ಗುರು.
*ಅರಿವೇ ಗುರು*
ಸದ್ಗುರುವಿನ  ಕಾರುಣ್ಯ ದೀಕ್ಷೆ ಪಡೆದು ಸದ್ಗುರುವು ತೋರಿದ ದಾರಿಯಲ್ಲಿ ಕಟಿಬದ್ಧವಾಗಿ ಸಾಗುವ ಪ್ರಯತ್ನಶೀಲತೆ ಶಿಷ್ಯನಿಗೆ ಬೇಕು. ಹಾಗಾದಲ್ಲಿ ಮಾತ್ರ "ಅರಿವು " ಎಂಬ ನಿರುಪಾದಿಕ ಗುರು ಶಿಷ್ಯನಲ್ಲಿ ಜಾಗೃತವಾಗಿ ಲಿಂಗಸ್ವಾಯತ ಮತ್ತು ಲಿಂಗಸನ್ನಿಹಿತ ವಾಗುವುದು. ಲಿಂಗದೀಕ್ಷೆ, ಗುರು ಉಪದೇಶಕ್ಕೆ ಗುರು ವ್ಯಕ್ತಿಯಾದರೆ, ಸ್ವಾಯತ ಸನ್ನಿಹತಕ್ಕೆ ನಮ್ಮ ಅರಿವೇ ಗುರು. 

*ಕಾರಣ ತನುವಿಗೆ ಶಿವನೆಂಬ ಪರಮಸತ್ಯವೇ ಗುರು*
ಕಾರಣತನುವಿಗೆ ಪರಮಸತ್ಯವೇ ಗುರು. ಆ ಪರಮಸತ್ಯವೇ ಶಿವ. 

"ಗು"ಕಾರವು ತ್ರಿಗುಣಗಳನ್ನು‌ ಮೀರಿದ ಸ್ಥಿತಿ
"ರು"ಕಾರವು  ದೇಹಭಾವವಳಿದು ದೇವಭಾವವಾದ  ಪರಶಿವನ ರೂಪ. ಹೀಗೆ
ದೇಹಭಾವ ವರ್ಜಿಸಿದ್ದ ಪರಶಿವನೇ ಗುರು. ಶಿವನೇ ಆದಿಗುರು. ಶಕ್ತಿಗೆ, ಸಪ್ತಋಷಿಗಳಿಗೆ ಆತ್ಮಜ್ಞಾನ, ವಿಶ್ವದ ರಹಸ್ಯ, ಏಳು ಯೋಗ ಮಾರ್ಗಗಳನ್ನು  ಅರುಹಿದ ಆದಿಗುರು ಶಿವ ಎಂದು ವೇದ ಶ್ರುತಿ ಆಗಮಗಳು ಹೇಳುತ್ತವೆ.

#ಶಿವ ಗುರು ಎಂದು ಬಲ್ಲಾತನೆ ಗುರು, 
ಶಿವ ಲಿಂಗ ಎಂದು ಬಲ್ಲಾತನೆ ಗುರು, 
ಶಿವ ಜಂಗಮ ಎಂದು ಬಲ್ಲಾತನೆ ಗುರು, 
ಶಿವ ಆಚಾರ ಎಂದು ಬಲ್ಲಾತನೆ ಗುರು, 
ಶಿವ ಪ್ರಸಾದವೆಂದು ಬಲ್ಲಾತನೆ ಗುರು, 
ಈ ಪಂಚವಿಧವೇ ಪಂಚಬ್ರಹ್ಮ ವೆಂದು ಅರುಹಿದ ಸಂಗನ ಬಸವಣ್ಣ ನನಗೆ ಗುರು, ನಿಮಗೆ ಗುರು ಜಗಕ್ಕೆಲ್ಲ ಗುರು ಎನ್ನುತ್ತಾರೆ ಅಲ್ಲಮ ಪ್ರಭುಗಳು.

"ಮಹಾಜ್ಞಾನಜ್ಯೋತಿಪ್ರಕಾಶವಾದ
ಜ್ಯೋತಿರ್ಮಯಲಿಂಗವೇ ಗುರುವಯ್ಯಾ" ಎನ್ನುತ್ತಾರೆ ಉರಿಲಿಂಗಪೆದ್ದಿ ಶರಣಗುರು.

ಶಿವನೇ ನನ್ನ ಗುರು, ನನ್ನ ಪರಮಗುರು, ನನ್ನ ಗತಿಮತಿ, ನನ್ನ ಅರಿವಿನ ಜ್ಯೋತಿ, ನೀವು ನನ್ನ ಗುರು ನಾನು ನಿಮ್ಮ ಶಿಷ್ಯ ಎಂದು ಬಸವಣ್ಣನವರು ಇಷ್ಟದೇವ ಕೂಡಲಸಂಗಮನಲ್ಲಿ ನಿವೇದನೆ ಮಾಡುತ್ತಾರೆ.
#ಎನ್ನ ಗುರು ಪರಮಗುರು ನೀವೆ ಕಂಡಯ್ಯ,
ಎನ್ನ ಗತಿಮತಿ ನೀವೆ ಕಂಡಯ್ಯ,
ಎನ್ನ ಅರಿವಿನ ಜ್ಯೋತಿ ನೀವೆ ಕಂಡಯ್ಯ,
ಎನ್ನಂತರಂಗ ಬಹಿರಂಗದ ಮಹವು ನೀವೆ ಕಂಡಯ್ಯ.
ಕೂಡಲಸಂಗಮದೇವಾ,
ನೀವೆನಗೆ ಗುರು, ನಾ ನಿಮಗೆ ಶಿಷ್ಯನೆಂಬುದನು
ನಿಮ್ಮ ಶರಣ ಸಿದ್ಧರಾಮಯ್ಯದೇವರೆ ಬಲ್ಲರು. / 340
ಲಿಂಗಸ್ವಾಯತ್ತ ಆದ ಶರಣನಿಗೆ ಪರಮ ಪರಶಿವನೇ ಅರಿವಿನ ಜ್ಯೋತಿಯಾಗಿ ಪರಮಗುರುವಾಗುತ್ತಾನೆ ಎನ್ನುತ್ತಾರೆ ಗುರು ಬಸವಣ್ಣನವರು.
-✍️ Dr Prema Pangi
#ಪ್ರೇಮಾ_ಪಾಂಗಿ,# ಅಷ್ಟಾವರಣ_ಗುರು

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma