ವೀರರಾಣಿ ಕಿತ್ತೂರ ಚೆನ್ನಮ್ಮ
ವೀರರಾಣಿ ಕಿತ್ತೂರು ಚೆನ್ನಮ್ಮ :
ಕಿತ್ತೂರು ದೇಸಾಯಿ ಸಂಸ್ಥಾನವು
(1590 - 1824) ಕಿತ್ತೂರು ಸಂಸ್ಥಾನ ಆರಂಭಗೊಂಡಿದ್ದು, 1590ರಲ್ಲಿ. ಇದನ್ನು ಕಟ್ಟಿದ್ದು ಹಿರೇಮಲ್ಲ ಶೆಟ್ಟಿ. ಈ ಪುಟ್ಟ ಸಂಸ್ಥಾನ ಆದಿಲ್ ಶಾಹಿ, ಮೊಘಲ, ಪೇಶ್ವೆ, ಟಿಪ್ಪೂ, ಈಸ್ಟ್ ಇಂಡಿಯಾ ಕಂಪನಿ ಎಲ್ಲರಿಂದಲೂ ನಿರಂತರ ತೊಂದರೆ ಅನುಭವಿಸಿದರೂ 1824 ರ ವರೆಗೆ ತನ್ನ ಸ್ವಾತಂತ್ರ್ಯವನ್ನು ಕಾಪಾಡಿ ಕೊಳ್ಳುವದರಲ್ಲಿ ಯಶಸ್ವಿಯಾಗಿತ್ತು. ಈ ಸಂಸ್ಥಾನದ ಕೊನೆಯ ರಾಣಿ ಚನ್ನಮ್ಮ ಕಿತ್ತೂರು ಸಂಸ್ಥಾನದ ಸ್ವಾತಂತ್ರ ಕಾಪಾಡಿಕೊಳ್ಳಲು ಬ್ರಿಟಿಷರೊಂದಿಗೆ ವೀರಾವೇಷದಿಂದ ಹೋರಾಡಿ; ಬ್ರಿಟಿಷ ರೊಂದಿಗೆ ಹೋರಾಡಿದ ಪ್ರಥಮ ಭಾರತೀಯ ರಾಣಿಯಾದಳು. ಅವಳ ಧೈರ್ಯ, ವೀರಾವೇಶದ ಹೋರಾಟ, ಸ್ವಾತಂತ್ರದ ಸಂಕಲ್ಪವು ಮುಂದಿನ ಸಾವಿರಾರು ಸ್ವಾತಂತ್ರ ಹೋರಾಟಗಾರರಿಗೆ ದೇಶಭಕ್ತರಿಗೆ ಸ್ಪೂರ್ತಿಯಾಯಿತು. ಅವಳ ಹೆಸರು ಅಜರಾಮರವಾಗಿ ಎಲ್ಲ ಭಾರತೀಯರಿಗೆ ವೀರ ರಾಣಿ ಚೆನ್ನಮ್ಮ ಸ್ವಾತಂತ್ರದ ಸ್ಫೂರ್ತಿಯ ಸೆಲೆಯಾದಳು.
*ವೀರರಾಣಿ ಕಿತ್ತೂರು ಚೆನ್ನಮ್ಮ*: -
ಕಾಲ: 1778 - 1829
ಸ್ವಾತಂತ್ರ ಸಂಗ್ರಾಮದ ಬೆಳ್ಳಿ ಚುಕ್ಕೆ , ಬ್ರಿಟಿಷರ ಆಳ್ವಿಕೆಯ ವಿರುದ್ದ ಹೋರಾಡಿದ ಪ್ರಥಮ ಸ್ವಾತಂತ್ರ ಹೋರಾಟಗಾರ್ತಿ ಕಿತ್ತೂರು ಚೆನ್ನಮ್ಮಳ ಜನ್ಮದಿನದ ಹಾರ್ಧಿಕ ಶುಭಾಶಯಗಳು. ಆಗಸದಲ್ಲಿ ಹಗಲಿನ ಬೆಳಗಿನ ಮುನ್ಸೂಚನೆ ಕೊಡುವುದೇ ಬೆಳ್ಳಿ ಚುಕ್ಕೆ. ಅದರಂತೆಯೇ ಕಿತ್ತೂರ ರಾಣಿ ಚೆನ್ನಮ್ಮಳ ಹೋರಾಟವು ಭಾರತದ ಸ್ವತಂತ್ರದ ಮುನ್ಸೂಚನೆ ಮತ್ತು ಸ್ವತಂತ್ರ ಸಂಗ್ರಾಮದ ಪ್ರಥಮ ಹೋರಾಟ ವಾಯಿತು.
ಸ್ವತಂತ್ರ, ಸ್ವಾಭಿಮಾನದ ಹೋರಾಟಗಾರ್ತಿ ವೀರಮಹಿಳೆ ಕಿತ್ತೂರ ರಾಣಿ ಚೆನ್ನಮ್ಮ ದೇಶದ ಸ್ವಾತಂತ್ರ್ಯದ ಇತಿಹಾಸದಲ್ಲಿಯೇ ಅಗ್ರಸ್ಥಾನ ತಲುಪಿ ಹಲವು ಹೋರಾಟಗಾರರಿಗೆ ಸ್ಫೂರ್ತಿ ದಾಯಕವಾದವಳು. ಕನ್ನಡನಾಡಿನ ವೀರವನಿತೆ ಕಿತ್ತೂರು ಚೆನ್ನಮ್ಮ ಇಂಗ್ಲಿಷರ ಸೈನ್ಯವನ್ನು ಧೈರ್ಯವಾಗಿ ಎದುರಿಸಿ ನಿಂತವಳು. ವೀರರಾಣಿ ಝಾನ್ಸಿ ಲಕ್ಷ್ಮೀಬಾಯಿ ಸ್ವಾತಂತ್ರಕ್ಕಾಗಿ ಪ್ರಾಣ ಒಪ್ಪಿಸುವುದಕ್ಕೆ ಸುಮಾರು ಮೂವತೈದು ವರ್ಷಗಳ ಹಿಂದೆಯೇ ಕನ್ನಡನಾಡಿನಲ್ಲಿ ಈಕೆ ಬೆಳಗಿದಳು.
ಆ ಕಾಲಕ್ಕೆ ಕಿತ್ತೂರು ಬಹಳ ಸಂಪನ್ನ ನಾಡಾಗಿತ್ತು. ಕಿತ್ತೂರ ದೊರೆಗಳಲ್ಲಿ ಮಲ್ಲಸರ್ಜನು ಬಹುಪ್ರಸಿದ್ಧಿ ಪಡೆದ ದೊರೆಯಾಗಿದ್ದನು. ಇವನು 1782 ರಿಂದ 1816ರ ವರೆಗೆ ಆಳಿದನು. ಆ ಕಾಲದಲ್ಲಿ ಕಿತ್ತೂರು, ಉತ್ತರದಲ್ಲಿ ಸ್ವರಾಜ್ಯದ ವಿಸ್ತರಣೆಗಾಗಿ ಹೋರಾಡುತ್ತಿದ್ದ ಪೇಶ್ವೆಯರು, ಪೂರ್ವಕ್ಕೆ ಆಕ್ರಮಣಕಾರಿ ಧೋರಣೆಯ ಹೈದರಾಬಾದ ನಿಜಾಮಶಾಹಿ ಹಾಗೂ ದಕ್ಷಿಣಕ್ಕೆ ಮೈಸೂರಿನ ಹೈದರ್ ಅಲಿ ಇವರೆಲ್ಲರ ನಡುವೆ ತಮ್ಮ ಉಳಿವಿಗಾಗಿ ಹೋರಾಡುತ್ತಿದ್ದ ಚಿಕ್ಕ ಪಾಳೆಗಾರ ಸಂಸ್ಥಾನ ವಾಗಿತ್ತು. ಇಂತಹ ವಿಷಮ ರಾಜಕೀಯ ಪರಿಸ್ಥಿತಿಯು ಧೂರ್ತಧೋರಣೆಯ ಬ್ರಿಟಿಷ ಈಸ್ಟ ಇಂಡಿಯಾ ಕಂಪನಿಗೆ ಸುವರ್ಣಾವಕಾಶವನ್ನು ಒದಗಿಸಿತ್ತು. ಮಲ್ಲಸರ್ಜನ ದೊರೆಯನ್ನು ಟಿಪ್ಪು ಸುಲ್ತಾನನು ಸೆರೆ ಹಿಡಿದು ಕಪಾಲದುರ್ಗದಲ್ಲಿ ಸೆರೆಯಿಟ್ಟಿದ್ದನು. ಉಪಾಯದಿಂದ ತಪ್ಪಿಸಿಕೊಂಡ ದೊರೆ ಕಿತ್ತೂರು ಸಂಸ್ಥಾನ ಉಳಿಸಲು 1809 ರಲ್ಲಿ ಪೇಶ್ವೆಯವರಿಗೆ ರೂ.1,75000 ಕೊಟ್ಟು, ಅವರ ಸ್ಥಾನಿಕ ಕಾವಲು ಸೈನ್ಯದ ಖರ್ಚನ್ನು ನೀಡಿ ಅವರಿಂದ ಸನದು ಪಡೆದಿದ್ದನು.
ಚೆನ್ನಮ್ಮ ಕಿತ್ತೂರಿನ ಸೊಸೆ ; ಕಾಗತಿಯ ಮಗಳು. ಕಿತ್ತೂರಿನ ಆಡಳಿತಕ್ಕೆ ಒಳಗಾದ ಊರು ಕಾಗತಿ. ಬೆಳಗಾವಿಯಿಂದ ಐದು ಮೈಲಿನ ಆಚೆಯ ಕಾಗತಿಯ ದೇಸಾಯಿ ಮನೆತನದಲ್ಲಿ ಧೂಳಪ್ಪ ಗೌಡ ಹೆಸರಾಗಿದ್ದರು. ಇವರು ಯುದ್ಧಕಲೆಯಲ್ಲಿ ನಿಷ್ಣಾತರಾಗಿದ್ದರು. ಕಿತ್ತೂರಿನ ಅರಸು ಮನೆತನದ ವಿಷಯದಲ್ಲಿ ಕಾಗತಿ ದೇಸಾಯಿಯವರಿಗೆ ಬಹಳ ಅಭಿಮಾನ.
ಕಾಗತಿ ದೇಸಾಯರ ಮನೆತನದಲ್ಲಿ 1778 ರಲ್ಲಿ ಹೆಣ್ಣು ಮಗುವೊಂದು ಜನಿಸಿತು. ರಾಜಕಳೆಯಿಂದ ಬೆಳಗುತ್ತಿದ್ದ ಈ ಮಗುವೇ ಮುಂದೆ ಕಿತ್ತೂರಿನ ಸುಪ್ರಸಿದ್ಧ ರಾಣಿ ಚೆನ್ನಮ್ಮನಾದಳು. ಮಗು ಜನಿಸಿದಾಗ ಜಂಗಮಮೂರ್ತಿಗಳು ಜನನ ಮುಹೂರ್ತವನ್ನು ಪರಿಶೀಲಿಸಿ ಈ ಮಗು ನಾಡಿನ ರಾಣಿಯಾಗಿ ವೀರಮಾತೆಯಾಗಿ ವಿಖ್ಯಾತಿಯಾಗುವುದಾಗಿ ಭವಿಷ್ಯ ನುಡಿದರು. ಈ ಭವಿಷ್ಯವನ್ನು ಕೇಳಿದ ಧೂಳಪ್ಪಗೌಡರು ಮಗಳನ್ನು ಆ ರೀತಿ ಪೋಷಿಸಬೇಕೆಂದು ನಿಶ್ಚಯ ಮಾಡಿದರು.
ಬೆಳೆಬೆಳೆದಂತೆ ಚೆನ್ನಮ್ಮ ಸಾಹಿತ್ಯ, ಸಂಗೀತ, ಸಂಸ್ಕೃತಿ, ಇತಿಹಾಸ ಹಾಗೂ ರಾಜಕಾರಣಗಳಲ್ಲಿ ಜ್ಞಾನವನ್ನು ಸಂಪಾದಿಸತೊಡಗಿದಳು. ಹುಡುಗಿಯರಿಗೆ ಉಚಿತವಾದ ಈ ವಿದ್ಯೆಗಳನ್ನು ಕಲಿತದ್ದು ಮಾತ್ರವಲ್ಲ, ರಾಜ ಮನೆತನದ ಗಂಡುಹುಡುಗರು ಕಲಿಯುವ ಕುದುರೆ ಸವಾರಿ ಮತ್ತು ಯುದ್ಧ ವಿದ್ಯೆಗಳನ್ನೂ ಕಲಿತಳು. ಚನ್ನಮ್ಮನಿಗೆ ಈಗ ಹದಿನಾರು ವರ್ಷ ಬಹಳ ಚೆಲುವೆ. ಧೀಮಂತಳು, ಶೂರಳು. ಬಿಲ್ಲು ಬಾಣ ಹಿಡಿದು ಬೇಟೆಯಾಡುತ್ತಿದ್ದಳು. ಕುದುರೆ ಸವಾರಿ ಮಾಡುತ್ತಿದ್ದಳು. ಭರ್ಜಿ ಎಸೆತ, ಕತ್ತಿ ವರಸೆಗಳಲ್ಲಿ ಅವಳು ಅಪ್ರತಿಮ ಜಾಣೆಯಾಗಿದ್ದಳು.
ಕಿತ್ತೂರಿನ ದೊರೆ ಮಲ್ಲಸರ್ಜ ಈ ಚೆನ್ನಮ್ಮ ಸುಂದರಿಯ ಬಗೆಗೆ ಸಾಕಷ್ಟು ಕೇಳಿ ತಿಳಿದುಕೊಂಡಿದ್ದನು. ತರುಣಿಯಾದ ಚೆನ್ನಮ್ಮ ಮಲ್ಲಸರ್ಜ ದೊರೆಯ ಕೀರ್ತಿ ಪರಾಕ್ರಮಗಳನ್ನು ಕೇಳಿ ಮಾರುಹೋಗಿದ್ದಳು. ಹಿರಿಯರು ಈ ದಾಂಪತ್ಯವನ್ನು ಹೊಂದಿಸಿದರು. ಮದುವೆ ಬಹು ಸಂಭ್ರಮದಿಂದ ನಡೆಯಿತು. ಮಲ್ಲಸರ್ಜ ದೊರೆಯ ಹಿರಿಯ ಹೆಂಡತಿ ರುದ್ರಮ್ಮ ಚೆನ್ನಮ್ಮನನ್ನು ಸವತಿಯೆಂದು ಭಾವಿಸಲಿಲ್ಲ. ತಂಗಿಯೆಂದು ಪ್ರೀತಿಸತೊಡಗಿದಳು. ಚೆನ್ನಮ್ಮ ಹಿರಿಯ ರಾಣಿಯನ್ನು ಅಕ್ಕನಂತೆ ಗೌರವಿಸತೊಡಗಿದಳು.
ಚೆನ್ನಮ್ಮ ಕೇವಲ ರಾಣಿಯಾಗಿ ಅರಮನೆಯ ಅಲಂಕಾರವಾಗಲು ಬಯಸಲಿಲ್ಲ. ರಾಜ್ಯದ ಆಗುಹೋಗುಗಳಲ್ಲಿ ಆಸಕ್ತಿಯನ್ನು ತಳೆದು ಪ್ರಜೆಗಳ ಸರ್ವತೋಮುಖ ಅಭಿವೃದ್ಧಿಗಾಗಿ ಪತಿಯ ಬಲಗೈಯಾದಳು.
ಸುಖದ ಸುಪ್ಪತ್ತಿಗೆಯಲ್ಲಿ ಓಲಾಡುತ್ತಿದ್ದ ಕಿತ್ತೂರಿನ ಅರಮನೆಗೆ ಈಗ ವಜ್ರಾಘಾತವಾಗುವಂತಹ ಪ್ರಸಂಗ ಬಂದಿತು. ವಂಚನೆಯಿಂದ ಪೇಶ್ವೆಯರು ಮಲ್ಲಸರ್ಜನನ್ನು ಸೆರೆಹಿಡಿದುಕೊಂಡು ಹೊಗಿದ್ದವರು, ಅವನು ಕಾರಾಗೃಹದಲ್ಲಿ ತೀಕ್ಷ್ಣ ಬೇನೆಗೆ ತುತ್ತಾದ ಕೂಡಲೇ ಬಿಡುಗಡೆ ಮಾಡಿದರು. ಆದರೆ ದಾರಿಯಲ್ಲಿಯೇ ತನ್ನ ಸರಹದ್ದಿನಲ್ಲಿ ಬರುವ ಅರಭಾವಿ ಮಠದ ಹತ್ತಿರ ಮಲ್ಲಸರ್ಜರಾಜ ತನ್ನ ಕೊನೆಯುಸಿರನ್ನೆಳೆದನು. ಇದು ಆದದ್ದು 1816 ರಲ್ಲಿ. ಕಿತ್ತೂರು ದುಃಖದ ಕಡಲಿನಲ್ಲಿ ಮುಳುಗಿತು. ಚೆನ್ನಮ್ಮ ತತ್ತರಿಸಿಹೋದಳು. ಆದರೆ ಅವಳು ಧೈರ್ಯವನ್ನು ತಂದುಕೊಂಡು ದುಃಖವನ್ನು ಸಹಿಸಿದಳು. ಹಿರಿಯ ಮಗ ಶಿವಲಿಂಗರುದ್ರ ಸರ್ಜನನ್ನು ಪಟ್ಟಕ್ಕೆ ಕೂಡಿಸಿ ರಾಜ್ಯದ ಆಡಳಿತಸೂತ್ರವು ಸರಾಗವಾಗುವಂತೆ ನೋಡಿಕೊಂಡಳು. ಚಿಕ್ಕಮ್ಮಳ ಮಾರ್ಗದರ್ಶನದಲ್ಲಿ ಶಿವಲಿಂಗರುದ್ರ ಸರ್ಜನು 1816 ರಿಂದ 1824ರವರೆಗೆ ಚೆನ್ನಾಗಿ ರಾಜ್ಯಭಾರವನ್ನು ಮಾಡಿದನು. ಶಿವಲಿಂಗರುದ್ರ ಸರ್ಜನು ಪೇಶ್ವೆ ಹಾಗೂ ಟಿಪ್ಪು ಸುಲ್ತಾನ ಇವರ ಕಿರಿಕಿರಿ ತಪ್ಪಿಸಲು ಬ್ರಿಟಿಷರ ಜೊತೆಗೆ ಒಪ್ಪಂದ ಮಾಡಿಕೊಂಡನು . ಪ್ರತಿ ವರ್ಷ ರೂ. 1,7೦,೦೦೦ ಕಾಣಿಕೆ ಕೊಡುವ ಕರಾರಿನ ಮೇಲೆ ಬ್ರಿಟಿಷರು ಈ ದೊರೆಗೆ ಸನ್ನದು ನೀಡಿದರು. ಕಿತ್ತೂರಿನ ದುರ್ದೈವ, ಶಿವಲಿಂಗರುದ್ರ ಸರ್ಜನು 11 ಸೆಪ್ಟೆಂಬರ 1824 ರಂದು ವಾರಸದಾರರಿಲ್ಲದೆ ತೀರಿಕೊಂಡನು. ಈ ಎಳೆವಯಸ್ಸಿನ ದೊರೆಯ ಹೆಂಡತಿ ವೀರಮ್ಮನಿಗೆ ಆಗ 11 ವರ್ಷ ವಯಸ್ಸು! ಮರಣದ ಪೂರ್ವದಲ್ಲಿ ಶಿವಲಿಂಗರುದ್ರಸರ್ಜ ಮಾಸ್ತಮರಡಿ ಗೌಡರ ಪುತ್ರ ಶಿವಲಿಂಗಪ್ಪನನ್ನು ದತ್ತಕ ತೆಗೆದುಕೊಂಡಿದ್ದನು. ರಾಣಿ ಚೆನ್ನಮ್ಮ ದತ್ತು ಮಗನ ಹೆಸರಿನಿಂದ ರಾಜ್ಯದ ಕಾರಭಾರವನ್ನು ನಡೆಸಲಾರಂಭಿಸಿದಳು. ಈ ದತ್ತಕವನ್ನು ಧಾರವಾಡದಲ್ಲಿ ಆಗ ಕಲೆಕ್ಟರನೂ ಮತ್ತು ಬ್ರಿಟೀಷರ ಮುಖ್ಯ ಪೊಲಿಟಿಕಲ್ ಏಜಂಟನೂ ಆಗಿದ್ದ ಥ್ಯಾಕರೆ ತಿರಸ್ಕರಿಸುತ್ತಾನೆ! 13 ಸೆಪ್ಟೆಂಬರ 1824 ರಂದು ಥ್ಯಾಕರೆ ಸ್ವತಃ ಕಿತ್ತೂರಿಗೆ ಬಂದು ಕಂಪನಿ ಸರ್ಕಾರದಿಂದ ಮುಂದಿನ ಆದೇಶ ಬರುವವರೆಗೂ ತಾತ್ಕಾಲಿಕವಾಗಿ ಮಲ್ಲಪ್ಪಶೆಟ್ಟಿ ಹಾಗು ಹಾವೇರಿ ವೆಂಕಟರಾವ ಇವರನ್ನು ಸಂಸ್ಥಾನದ ವ್ಯವಹಾರ ನಿರ್ವಹಿಸಲು ನೇಮಕ ಮಾಡುತ್ತಾನೆ. ದತ್ತಕ ಮಗ ಶಿವಲಿಂಗಪ್ಪನನ್ನು ಸಂಸ್ಥಾನ ಬಿಟ್ಟು ಹೋಗಬೇಕೆಂದು ಥ್ಯಾಕರೆ ಆದೇಶಿಸಿದನು. ಹಾಗೂ ಕಿತ್ತೂರಿನ ಭಂಡಾರಕ್ಕೆ ಬೀಗಮುದ್ರೆ ಹಾಕುತ್ತಾನೆ. ಅದನ್ನು ಕಾಯುವವರು ಇಂಗ್ಲಿಷರ ನೌಕರರು!! ಇದು ಅಧಿಕಪ್ರಸಂಗತನದ ಅವಮಾನಕಾರಕ ಘಟನೆಯೆಂದು ರಾಣಿ ಚೆನ್ನಮ್ಮ ಬಗೆದಳು. ಅವಳ ಆತ್ಮಾಭಿಮಾನ ಸಿಡಿದೆದ್ದಿತು.
ಕಿತ್ತೂರು ಮತ್ತು ಈಸ್ಟ್ ಇಂಡಿಯಾ ಕಂಪನಿಯ ಒಪ್ಪಂದದ ಪ್ರಕಾರ ಕಿತ್ತೂರು ಸಂಸ್ಥಾನ ಸಂಪೂರ್ಣವಾಗಿ ಆಂತರಿಕ ಸ್ವಾತಂತ್ರ್ಯವನ್ನು ಹೊಂದಿತ್ತು. ದತ್ತು ತೆಗೆದುಕೊಳ್ಳುವುದು ರಾಜನಿಗೆ ಸಂಬಂಧಿಸಿದ ವಿಷಯ. ಇದಕ್ಕೂ ಇಂಗ್ಲಿಷರಿಗೂ ಏನು ಸಂಬಂಧ? ಇದು ರಾಣಿ ಚೆನ್ನಮ್ಮನವರ ದೃಷ್ಟಿಕೋನವಾಗಿತ್ತು. ಕಿತ್ತೂರ ಸಂಸ್ಥಾನಕ್ಕೆ ಇಂಗ್ಲಿಷರಿಂದ ಬಂದ ಗಂಡಾಂತರವನ್ನು ತೊಡೆದುಹಾಕಲು ಅವಳು ಸಜ್ಜಾಗಬೇಕಾಯಿತು. ಬಂದ ಗಂಡಾಂತರದ ಅರಿವನ್ನು ರಾಣಿ ಚೆನ್ನಮ್ಮ ಪ್ರಜೆಗಳ ಸಭೆಯನ್ನು ಕರೆದು ನಿವೇದಿಸಿದಳು. “ಇಡಿಗಾಳಾದರೆ ಬದುಕವೆವು; ಬಿಡಿಗಳಾದರೆ ಸಾಯುವೆವು” ಎಂದು ಒಗ್ಗಟ್ಟಿನ ಮಂತ್ರವನ್ನು ಭೋಧಿಸಿದಳು.
ಕಿತ್ತೂರಿನ ಹಿರಿಯರು ಹಾಗೂ ಮುಖಂಡರು ಸಂಸ್ಥಾನ ಕಾಯ್ದುಕೊಳ್ಳುವ ಪ್ರತಿಜ್ಞೆ ಮಾಡಿದರು. “ಸಂಸ್ಥಾನದ ಐಕ್ಯವನ್ನು ಕಾಯ್ದುಕೊಂಡು ಹೋಗುತ್ತೇವೆ” ಎಂದು ಅವರೆಲ್ಲರೂ ತಮ್ಮ ಶಸ್ತ್ರಾಸ್ತ್ರಗಳನ್ನು ಮುಟ್ಟಿ ಆಣೆ ಮಾಡಿದರು. ಕಿತ್ತೂರನಾಡು ಒಂದಾಗಿ ನಿಂತಿತು. ಇದು ಚೆನ್ನಮ್ಮರಾಣಿಯ ಅದ್ಭುತ ಸಂಘಟನಾ ಶಕ್ತಿಯ ಮಾದರಿಯಾಗಿತ್ತು. ಇದನ್ನು ತಿಳಿದ ಥ್ಯಾಕರೆ ಕಂಗೆಟ್ಟಿದ್ದರಲ್ಲಿ ಅಚ್ಚರಿಯಿಲ್ಲ. ಈ ಸಂಘಟನೆಯನ್ನು ಮುರಿಯಲು ಥ್ಯಾಕರೆ ನಾನಾ ರೀತಿಯ ಹಂಚಿಕೆಗಳನ್ನು ಹೂಡಿದನು. ಸಂಧಾನ ಮಾರ್ಗದಿಂದ ಸಂಸ್ಥಾನವನ್ನು ಉಳಿಸಿಕೊಳ್ಳಬೇಕೆಂದು ರಾಣಿ ಸಾಕಷ್ಟು ಪ್ರಯತ್ನಿಸತೊಡಗಿದಳು. ಪ್ರಸಂಗ ಬಂದರೆ ಯದ್ಧಕ್ಕೂ ಅಣಿಯಾಗಬೇಕೆಂದು ಯುದ್ಧದ ಸಿದ್ಧತೆಯನ್ನು ಮಾಡತೊಡಗಿದಳು. ತನ್ನ ಪರವಾಗಿ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಗೆ ವಿಷಯವನ್ನು ತಿಳಿಸಿ ವಾದ ಮಾಡಲು ಲಿಂಗಭಟ್ಟ ಮತ್ತು ರಾಜಪ್ಪ ಎಂಬ ಇಬ್ಬರು ವಕೀಲರನ್ನು ಕಳುಹಿಸಿದಳು. ಜೊತೆಗೇ ಯುದ್ಧಕ್ಕೆ ಅಣಿಯಾಗಲು ಕೋಟೆಕೊತ್ತಲಗಳನ್ನು ಭದ್ರಮಾಡಿಕೊಂಡಳು. ಬೇರೆ ಬೇರೆ ಸ್ಥಳಗಳ ಅಧಿಕಾರಿಗಳನ್ನು ಕರೆಸಿಕೊಂಡಳು. ರಾಜ್ಯದ ರಕ್ಷಣೆಯನ್ನು ಕುರಿತು ಅವರ ಜೊತೆಗೆ ಆಲೋಚನೆ ನಡೆಸಿದಳು. ಕೋಟೆ ಬತೇರಿಗಳ ಮೇಲೆ ತೋಪುಗಳನ್ನು ಇರಿಸಿದಳು. ಕೊಲ್ಲಾಪುರದ ಪೇಶ್ವೆ ಮಹಾರಾಜನ ಬಳಿಗೆ ರಾಯಭಾರಿಯನ್ನು ಕಳುಹಿಸಿದಳು; “ನಾವು ಕಷ್ಟದಲ್ಲಿದ್ದೇವೆ, ಸಹಾಯ ಮಾಡಿ” ಎಂದು. ಆದರೆ ಆ ಭಾರತೀಯ ರಾಜ-ಕಿತ್ತೂರಿನಿಂದ ಬಂದ ರಾಯಬಾರಿಯನ್ನು ಹಿಡಿದು ಬ್ರಿಟಿಷರಿಗೆ ಒಪ್ಪಿಸಿದ!!
“ಶಾಂತಿಗೆ ಬದ್ಧರು, ಯುದ್ಧಕ್ಕೂ ಸಿದ್ಧರು” ಎಂಬುದು ರಾಣಿಯ ಘೋಷಣೆಯಾಗಿತ್ತು. ಕಿತ್ತೂರ ಸಂಸ್ಥಾನಕ್ಕೆ ಥ್ಯಾಕರೆ ಹಾಗೂ ಚಾಪ್ಲಿನ್ನರು ಕಂಟಕರಾಗಿದ್ದರು. ಇದನ್ನರಿತ ರಾಣಿ ರಾಜತಾಂತ್ರಿಕ ಚಟುವಟಿಕೆಗಳನ್ನು ಪ್ರಾರಂಭಿಸಿದಳು. ಮುಂಬಯಿಯ ಗವರ್ನರ್ ಎಲ್ಫಿನ್ಸ್ಟನ್ ಸಾಹೇಬನ ಮೇಲೆ ಪ್ರಭಾವ ಬೀರಲು ಬೇಕಾದಷ್ಟು ಪ್ರಯತ್ನ ಮಾಡಿದಳು. ಈ ಶಾಂತಿಯುತ ಸಂಧಾನ ಪ್ರಯತ್ನಗಳು ಫಲಿಸಲಿಲ್ಲ. ಕಿತ್ತೂರು ಈಗ ಮದ್ದಿನ ಗುಡ್ಡದ ಮೇಲೆ ನಿಂತಂತಾಯಿತು. ಎಲ್ಲ ಕಡೆಗೂ ಸ್ಫೋಟಕ ಪರಿಸ್ಥಿತಿಯ ನಿರ್ಮಾಣವಾಯಿತು.
ಕಿತ್ತೂರಿನದು ಸಣ್ಣ ಸೈನ್ಯ; ಕಂಪನಿ ಸರ್ಕಾರದ್ದೋ ಪ್ರಬಲವಾದ ಸೈನ್ಯ. ಇದು ಕಿತ್ತೂರಿನ ವೀರರಿಗೆ ತಿಳಿದ ಮಾತಾಗಿತ್ತು. ಆದರೆ ಈಗ ಮಾರ್ಗವೇ ಉಳಿಯಲಿಲ್ಲ. ಸ್ವಾತಂತ್ರ ಇಲ್ಲವೇ ಪರಾಧೀನತೆ – ಯಾವುದನ್ನು ಆರಿಸಿಕೊಳ್ಳಬೇಕು ? ಎಂತಹ ವಿಪತ್ತು ಬಂದರೂ ಮೊದಲಿನದ್ದನ್ನೇ ಆರಿಸಿಕೊಳ್ಳುವ ದೃಢ ಪ್ರತಿಜ್ಞೆಯನ್ನೇ ಕಿತ್ತೂರಿನ ಬಂಟರು ಮಾಡಿದರು. ಕಿತ್ತೂರಿನ ಜನತೆ ಸರ್ವತ್ಯಾಗಕ್ಕೆ ಸಿದ್ಧರಾದರು.
1824ನೇಯ ಇಸವಿ ಅಕ್ಟೋಬರ್ 22ನೇ ದಿನಾಂಕ. ಮಹಾನವಮಿ ಆಯುಧಪೂಜೆ. ಹಿಂದುಗಳಿಗೆ ಬಹು ದೊಡ್ಡ ಹಬ್ಬ. ಬ್ರಿಟಿಷರ ಸೈನ್ಯ ಕಿತ್ತೂರಿನ ಮುಂದೆ ಕಾಣಿಸಿಕೊಂಡಿತು. ಥ್ಯಾಕರೆ, ಅವನ ಕೈಕೆಳಗೆ ಕ್ಯಾಪ್ಟನ್ ಬ್ಲಾಕ್ ಎಂಬಾತ, ಐನೂರು ಮಂದಿ ಸೈನಿಕರು ತುಪಾಕಿಗಳೊಂದಿಗೆ ಬಂದರು. ಸ್ವತಃ ಚೆನ್ನಮ್ಮ ರಾಣಿ ಕುದುರೆಯೇರಿ ಕತ್ತಿ ಹಿಡಿದು ರಣರಂಗವನ್ನು ಪ್ರವೇಶಿಸಿದಳು. ಥ್ಯಾಕರೆಯು ಕ್ಯಾಪ್ಟನ್ ಬ್ಲಾಕ್ನಿಗೆ ತುಪಾಕಿಗಳನ್ನು ಕೋಟೆಯೊಳಗೆ ತರಲು ಹೇಳಿದನು. ದೊಡ್ಡ ದೊಡ್ಡ ಬಾಗಿಲುಗಳ ಹತ್ತಿರ ತೋಪುಗಳನ್ನು ಇಡಿಸಿದನು. ಕಿತ್ತೂರಿನ ಜನರಿಗೆ ಇದರ ಮರ್ಮ ತಿಳಿಯಿತು. ಕೋಟೆಯ ಹೊರಬಾಗಿಲನ್ನು ಮುಚ್ಚಲಾಯಿತು. ಕೋಟೆ ಸ್ವಾತಂತ್ರ ವೀರರಿಂದ ಕಿಕ್ಕಿರಿದು ತುಂಬಿತು.
ಚೆನ್ನಮ್ಮ ಈಗ ಪ್ರಕಟವಾಗಲೇಬೇಕಾಯಿತು. ಅವಳ ಬಿನ್ನಹದ ಮೇರೆಗೆ ಅಂಬಡಗಟ್ಟಿ, ಸಂಗೊಳ್ಳಿ, ಅಂಕಲಗಿ, ಹೆಗ್ಗೇರಿ, ಹೂಲಿ, ಮದಿನಟ್ಟಿ, ಹುಣಸಿಕಟ್ಟಿ, ವಣ್ಣೂರು, ತಲ್ಲೂರು ಮೊದಲಾದ ಗ್ರಾಮಗಳಿಂದ ದಂಡು ಕಿತ್ತೂರಿನ ಸಹಾಯಕ್ಕೆ ಧಾವಿಸಿ ಬಂದಿತು. ಚೆನ್ನಮ್ಮ ಊಟ ನಿದ್ರೆಗಳನ್ನು ಮರೆತು ಕಿತ್ತೂರನ್ನು ರಕ್ಷಿಸಿಕೊಳ್ಳಲು ಅನವರತ ದುಡಿಯತೊಡಗಿದಳು. ಪುರುಷ ಉಡಿಗೆಯನ್ನು ತೊಟ್ಟು ಕೈಯಲ್ಲಿ ಖಡ್ಗವನ್ನು ಹಿಡಿದು ದೊಡ್ಡ ಕುದುರೆಯನ್ನೇರಿ ಸೈನಿಕ ತರಬೇತನ್ನು ಸ್ವತಃ ನೋಡಿಕೊಳ್ಳತೊಡಗಿದಳು. “ಕಿತ್ತೂರನ್ನು ಈ ಪುಂಡರಿಂದ ರಕ್ಷಿಸು, ಭಗವಂತಾ!” ಎನ್ನುವುದೇ ಅವಳ ಪೂಜಾ ಮಂತ್ರ ಧ್ಯಾನವಾಯಿತು.
ಕಿತ್ತೂರಿನ ಒಳಗೆ ರಣೋತ್ಸಾಹ ತುಂಬಿ ತುಳುಕತೊಡಗಿತು. ಮುದುಕರು ಯುವಕರಾದರು. ಕಿತ್ತೂರಿನ ಹೆಂಗೆಳೆಯರು ರಣಚಂಡಿಗಳಾಗಿ ಶಕ್ತಿಯ ಅವತಾರದಂತೆ ಸಿಡಿದೆದ್ದರು. ಬದುಕಿ ಕಿತ್ತೂರನ್ನು ಕಾಯಬೇಕು, ಇಲ್ಲವೆ ಸತ್ತು ಸ್ವರ್ಗವನ್ನು ಸೇರಬೇಕು. “ಹರಹರ ಮಹಾದೇವ”! ಎಂಬ ರಣಗರ್ಜನೆ ಗಡಚಿಕ್ಕಿತು.
ಈ ರಣೋತ್ಸಾಹವನ್ನು ನೋಡಿ ಥ್ಯಾಕರೆಯ ಸಿಟ್ಟು ನೆತ್ತಿಗೇರಿತ್ತು. ಅವನು ಗುಂಡು ಹಾರಿಸಿ ತನ್ನ ಮನೋಗತವನ್ನು ಸೂಚಿಸಿದನು. ಗುಂಡಿಗೆ ಪ್ರತಿ ಗುಂಡು ಹಾರಿತು. ಥ್ಯಾಕರೆ ಮತ್ತೆ ತುಪಾಕಿಗಳನ್ನು ತರಿಸಿ ಸಜ್ಜಾದನು. “ಇಪ್ಪತ್ತು ನಿಮಿಷಗಳಲ್ಲಿ ಕೋಟೆಯ ಬಾಗಿಲನ್ನು ತೆರೆಯದಿದ್ದರೆ ಅದನ್ನು ಒಡೆಯಲಾಗುವುದು. ಕಿತ್ತೂರನ್ನು ಸುಟ್ಟುಬಿಡಲಾಗುವುದು” ಎಂದು ಥ್ಯಾಕರೆ ಚೀರತೊಡಗಿದನು. ಇದು ಕನ್ನಡಿಗರ ಆತ್ಮಾಭಿಮಾನವನ್ನು ಕೆರಳಿಸಿತು. ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪ, ಮಹಾಮುಖಂಡ ಗುರುಸಿದ್ದಪ್ಪ ಎಲ್ಲರೂ ಸಮಾಲೋಚನೆ ಮಾಡಿದರು. ಯುವಕರು ಪೂತ್ಕರಿಸತೊಡಗಿದರು: “ಹೆಬ್ಬಾಗಿಲನ್ನು ತೆರೆಯಿರಿ. ಇಂಗ್ಲಿಷರನ್ನು ಧೂಳೀಪಟ ಮಾಡುತ್ತೇವೆ! ಕಿತ್ತೂರಿನ ಸೇಡನ್ನು ತೀರಿಸಿಕೊಳ್ಳೋಣ, ನಮ್ಮ ರಾಜ್ಯಕ್ಕೆ ಕೈಹಾಕಿದ ನೀಚರನ್ನು ಸದೆಬಡಿಯೋಣ, ಉನ್ಮತ್ತ ಥ್ಯಾಕರೆಗೆ ಪಾಠ ಕಲಿಸೋಣ!”.
ಕೋಟೆಗೆ ಮುತ್ತಿಗೆ ಹಾಕಲು ಬ್ರಿಟಿಷ್ ಅಧಿಕಾರಿಗಳು ಸಿದ್ಧರಾಗುತ್ತಿದ್ದರು. ಅಷ್ಟರಲ್ಲಿ “ಹರಹರ ಮಹಾದೇವ! ಚೆನ್ನಮ್ಮರಾಣಿಗೆ ಜಯವಾಗಲಿ, ಕಿತ್ತೂರ ಲಕ್ಷ್ಮಿಗೆ ಜಯವಾಗಲಿ” ಎಂಬ ಜಯಘೋಷದ ಮಧ್ಯದಲ್ಲಿ ಕೋಟೆಯ ಬಾಗಿಲನ್ನು ತೆಗೆದ ಜನರು ಆಯುಧಪಾಣಿಗಳಾಗಿ ಹೊರಬಿದ್ದರು. ಇಂಗ್ಲೀಷ ಸೈನ್ಯದ ಮೇಲೆ ಎರಗಿದರು. ಇಂಗ್ಲೀಷ್ ಸೈನ್ಯ ಹೀಗಾಗಬಹುದೆಂದು ತಿಳಿದುಕೊಂಡಿರಲಿಲ್ಲ. ಇದು ಮಿಂಚಿನ ದಾಳಿಯಾಗಿತ್ತು. ಗುರುಸಿದ್ದಪ್ಪನ ಸೈನ್ಯಶಕ್ತಿ ಇಲ್ಲಿ ಮಿಂಚಿನ ಕುದುರೆಯಾಗಿತ್ತು. ಸ್ವತಃ ಚೆನ್ನಮ್ಮರಾಣಿಯು ಕುದುರೆ ಏರಿ ಕತ್ತಿ ಹಿಡಿದು ರಣರಂಗವನ್ನು ಪ್ರವೇಶಿಸಿದಳು. ಸೈನ್ಯ ತನ್ನ ಕೋಟೆಯನ್ನು ಮುತ್ತಿದಾಗ ಸೈನ್ಯದ ಕಣ್ಣಾದಳು; ಸ್ಪೂರ್ತಿಯಾದಳು. ತಾನೇ ಕುದುರೆ ಏರಿ ಕತ್ತಿ ಹಿಡಿದು ಹೋರಾಡಿದಳು. ಕಿತ್ತೂರಿನ ಸೈನ್ಯಕ್ಕೆ ಉತ್ಸಾಹ ತುಂಬಿತುಳುಕಿತು. ಇಂಗ್ಲೀಷರ ಮದ್ದುಗುಂಡು, ಆಯುಧಗಳನ್ನು ಕಿತ್ತೂರ ವೀರರು ವಶಪಡಿಸಿಕೊಂಡರು. ಕೈಗೆ ಸಿಕ್ಕ ಇಂಗ್ಲೀಷ್ ಅಧಿಕಾರಿಗಳನ್ನು ಕಡಿದುಹಾಕಿದರು. ನುಚ್ಚು ನೂರು ಮಾಡಿದರು. ಥ್ಯಾಕರೆ ಕಕ್ಕಾಬಿಕ್ಕಿಯಾದನು. ಕಿತ್ತೂರಿನ ಈ ಅಪರಿಮಿತ ಶಕ್ತಿಯನ್ನು ಕಂಡು ಅವನ ಜಂಘಾಬಲವೇ ಅಡಗಿತು. ಈ ಪರಿಸ್ಥಿತಿಯನ್ನು ನಿಯಂತ್ರಿಸುವುದು ತನಗೆ ಸಾಧ್ಯವಿಲ್ಲವೆಂಬ ಮಾತು ಅವನಿಗೆ ಸೂರ್ಯಪ್ರಕಾಶದಷ್ಟು ಸ್ಪಷ್ಟವಾಯಿತು ಶತ್ರುಗಳ ಮೇಲೆ ಸಿಡಿದೆದ್ದ ಕಿತ್ತೂರಿನ ಬಂಟರು ವೈರಿಗಳ ರುಂಡಗಳನ್ನು ಚೆಂಡಾಡತೊಡಗಿದರು. ಯುದ್ಧದ ಕಾವು ಏರತೊಡಗಿತು. ಅದೇ ಈಗ ಕಿತ್ತೂರಿನ ಬಂಟರು ದ್ರೋಹಿಗಳಾದ ಕನ್ನೂರ ಮಲ್ಲಪ್ಪ, ಕನ್ನೂರ ವೀರಪ್ಪ, ಸರದಾರ ಮಲ್ಲಪ್ಪರ ಕಥೆ ಮುಗಿಸಿದ್ದರು.
ಸರದಾರ ಗುರುಸಿದ್ದಪ್ಪನು ಈ ಕಾಳಗದ ಕಹಳೆಯನ್ನು ಊದಿ ಸೂತ್ರವನ್ನು ಹಿಡಿದು ಹೋರಾಡತೊಡಗಿದನು.
ಥ್ಯಾಕರೆ ನಿಸ್ಸಹಾಯಕನಾದನು. ಅವನಿಗೆ ಗಂಡಾಂತರದ ಅರಿವಾಯಿತು. ತನ್ನ ಪ್ರಾಣರಕ್ಷಣೆಗಾಗಿ ಅವನು ಕೈಯಲ್ಲಿ ಕರಾಳವಾದ ಪಿಸ್ತೂಲನ್ನು ಹಿಡಿದು ಕುದುರೆಯನ್ನೇರಿ ಕೋಟೆಯ ಬಾಗಿಲ ಕಡೆಗೆ ಧಾವಿಸತೊಡಗಿದನು. ಗಂಡುಡುಗೆಯನ್ನುಟ್ಟ ವೀರರಾಣಿ ಚೆನ್ನಮ್ಮ ಧಾವಿಸಿ ಬರುತ್ತಿರುವ ಥ್ಯಾಕರೆಯನ್ನು ನೋಡಿ ಹಲ್ಲುಕಡಿದಳು. ಅವಳು ಸುತ್ತಲೂ ನೋಡಿದಾಗ ಅಲ್ಲಿ ಸಂಗೊಳ್ಳಿ ರಾಯಣ್ಣ, ಅಂಗರಕ್ಷಕ ಆಮಟೂರ ಬಾಳಪ್ಪ ಕೋವಿಗಳನ್ನು ಹಿಡಿದು ನಿಂತಿದ್ದರು. “ಥ್ಯಾಕರೆಯನ್ನು ಸೆರೆ ಹಿಡಿಯಿರಿ. ಅವನನ್ನು ಕೊಲ್ಲಬೇಡಿರಿ” ಎಂಬ ರಾಣಿ ಆಜ್ಞೆಮಾಡಿದಳು. ಸಂಗೊಳ್ಳಿ ರಾಯಣ್ಣನು ಈ ಆಜ್ಞೆಯನ್ನು ಪಾಲಿಸಲು ಸನ್ನದ್ದನಾಗಿ ತನ್ನ ಕುರುಬ ಬಂಟರೊಡನೆ ಥ್ಯಾಕರೆಯನ್ನು ಸುತ್ತುವರಿಯಲು ಮುಂಬರಿಸಿದನು. ಅಷ್ಟರಲ್ಲಿ ಆಮಟೂರ ಬಾಳಪ್ಪನು ಥ್ಯಾಕರೆಯ ಕೈಯಲ್ಲಿದ್ದ ಕರಾಳ ಪಿಸ್ತೂಲನ್ನು ನೋಡಿದನು. ಅದರ ಗುರಿಗೆ ರಾಣಿ ಚೆನ್ನಮ್ಮನ ಬಲಿ ಎಂದು ಗೊತ್ತಾಗುತ್ತಿದ್ದಂತೆ, ಈ ಸ್ವಾಮಿನಿಷ್ಠ ಅಂಗರಕ್ಷಕನಾದ ಅಮಟೂರ ಬಾಳಪ್ಪನು ಗುರಿಹಿಡಿದು ಥ್ಯಾಕರೆಯ ಮೇಲೆ ಗುಂಡು ಹಾರಿಸಿದನು. ಹಾರಿಸಿದ ಗುಂಡು ಹುಸಿಹೋಗಲಿಲ್ಲ. ಥ್ಯಾಕರೆ ರಕ್ತದ ಮಡುವಿನಲ್ಲಿ ಉರುಳಿಬಿದ್ದನು. ಕುತಂತ್ರಿಯೂ ಕಾರಸ್ತಾನಿಯೂ ಆದ ಈ ಸಾಹೇಬನ ದೇಹವನ್ನು ರೊಚ್ಚಿಗೆದ್ದ ಜನ ಚೂರುಚೂರು ಮಾಡಿದರು (ಈ ನೀಚಪಾತ್ರನ ದೇಹವನ್ನು ಆಮೇಲೆ ಇಂಗ್ಲೀಷರು ಧಾರವಾಡದಲ್ಲಿ ಹೊಳಿ, ಸ್ಮಾರಕದ ಸ್ತಂಭವನ್ನು ನೆಟ್ಟರು. ಅದನ್ನು ಈಗಲೂ ನೋಡಬಹುದು).
ಕಿತ್ತೂರಿನ ರಾಣಿಗೆ ಇಂಗ್ಲೀಷ್ ಸೈನ್ಯ ಸೋತಿತು. ಥ್ಯಾಕರೆ ಸತ್ತ ಎಂಬ ಸುದ್ದಿ ಆಗ ದಕ್ಷಿಣ ಭಾರತದ ಕಮೀಷನರ್ ಆಗಿದ್ದ ಚಾಪ್ಲಿನ್ ಎಂಬಾತನಿಗೆ ತಿಳಿಯಿತು. ಅವನಿಗೆ ಸಿಡಿಲು ಬಡಿದಂತಾಯಿತು. ಇಂಗ್ಲೀಷರಿಗಾದ ಈ ಸೋಲು, ಅಪಮಾನಗಳ ಸೇಡು ತೀರಿಸಿಕೊಳ್ಳಲೇಬೇಕೆಂದು ಅವನು ನಿರ್ಧರಿಸಿದನು. ಈಗ ಕಿತ್ತೂರಿನ ಮೇಲೆ ಅವಸರ ಮಾಡಿ ಹೋಗುವಂತಿರಲಿಲ್ಲ. ಅದರ ಶಕ್ತಿಯ ಆಳಕ್ಕೆ ಅವನು ಬೆದರಿದನು. ಕಿತ್ತೂರಿನಲ್ಲಿರುವ ಸೈನ್ಯ ಸಾಮಗ್ರಿಗಳನ್ನು ತಿಳಿದ ಅವನು ಅದಕ್ಕೆ ತಕ್ಕ ಸಿದ್ಧತೆ ಮಾಡಿಕೊಂಡೇ ಕೊನೆಯ ಪೆಟ್ಟನ್ನು ಹಾಕಬೇಕೆಂದು ಸನ್ನದ್ದನಾಗತೊಡಗಿದನು. ಮೊದಲು, ಕಿತ್ತೂರಿನ ಸೈನ್ಯಕ್ಕೆ ಸೆರೆಸಿಕ್ಕ ತನ್ನ ಕಡೆಯವರನ್ನು ಬಿಡಿಸಿಕೊಳ್ಳಬೇಕು ಎಂದು ಚಾಪ್ಲಿನ್ ಯೋಚಿಸಿದ. “ಅವರನ್ನು ಬಿಡುಗಡೆ ಮಾಡಬೇಕು” ಎಂದು ಚೆನ್ನಮ್ಮನಿಗೆ ಹೇಳಿಕಳುಹಿಸಿದ.
“ಮತ್ತೆ ಇಂಗ್ಲೀಷರು ಕಿತ್ತೂರಿನ ಆಡಳಿತದಲ್ಲಿ ಕೈಹಾಕುವುದಿಲ್ಲ ಎಂದು ಮಾತುಕೊಡಲಿ, ಬಂದಿಗಳನ್ನು ಬಿಡುಗಡೆ ಮಾಡೋಣ. ಇಲ್ಲವಾದರೆ ಆ ಮಾತೇ ಇಲ್ಲ” ಎಂದಳು ರಾಣಿ. ಚಾಪ್ಲಿನನಿಗೆ ಕಷ್ಟವಾಯಿತು. ಕಿತ್ತೂರನ್ನು ಇಂಗ್ಲೀಷರ ಮುಷ್ಠಿಯಲ್ಲಿ ಹಿಡಿಯುವುದೇ ಅವನ ಉದ್ದೇಶವಾಗಿರುವಾಗ ಮಾತು ಕೊಡುವುದು ಹೇಗೆ?
ಇಂಗ್ಲೀಷರೂ ಕಿತ್ತೂರಿನವರೂ ಮತ್ತೆ ಯುದ್ಧಕ್ಕೆ ಸಿದ್ದರಾದರು. ಬೆಳಗಾವಿಯಲ್ಲಿದ್ದ ಇಂಗ್ಲೀಷರ ಸೈನ್ಯವು ಕಿತ್ತೂರ ಕೋಟೆಯನ್ನು ಭೇದಿಸುವಷ್ಟು ಬಲಶಾಲಿಯಾಗಿಲ್ಲ ಎಂಬುದನ್ನು ತಿಳಿದ ಚಾಪ್ಲಿನ್ ಬೇರೆ ಬೇರೆ ಭಾಗಗಳಿಂದ ಸೈನ್ಯವನ್ನು ಕರೆಸತೊಡಗಿದನು.
ಬೆಳಗಾವಿ ವಿಭಾಗದ ಸೈನ್ಯದ ಸೇನಾಪತಿಯಾದ ಕರ್ನಲ್ ಪಿಯರಸನ್ನನು ಮ್ಯಾಕ್ ಲೀಡನ ನಾಯಕತ್ವದಲ್ಲಿ ಭಾರೀ ಸೈನ್ಯ ಕಳಿಸಿದನು. ಪಿಯರಸನ್ನ ಆಜ್ಞೆಯಂತೆ ಬೆಳಗಾವಿ, ಸೊಲ್ಲಾಪುರಗಳಿಂದ ಕಂಪೆನಿ ಸೈನ್ಯ ಬಂದುದಲ್ಲದೆ, ಬಳ್ಳಾರಿ, ಬೆಂಗಳೂರಿನಿಂದಲೂ ಸೈನ್ಯ ಧಾವಿಸಿ ಬಂದಿತು. ಆರ್ಕಾಟಿನ ಅಶ್ವದಳವು ಹೊರಡಲು ಸಜ್ಜಾಗಿ ನಿಂತಿತು. ಹೀಗೆ ದಕ್ಷಿಣ ಭಾರತದ ಇಂಗ್ಲೀಷ್ ಸೈನ್ಯವೆಲ್ಲ ಕಿತ್ತೂರ ಮುತ್ತಿಗೆಗೆ ಸಿದ್ಧವಾಯಿತು. ಇಂಗ್ಲೀಷರು ಭಾರಿ ಯುದ್ಧಸಿದ್ಧತೆಯಲ್ಲಿ ತೊಡಗಿರುವರೆಂಬ ಸುದ್ದಿಯನ್ನು ಚೆನ್ನಮ್ಮ ತನ್ನ ಬೇಹುಗಾರರ ಮೂಲಕ ತಿಳಿದುಕೊಂಡಿದ್ದಳು. ಇದು ಕಿತ್ತೂರಿನ ಅಳಿವು ಉಳಿವುಗಳ ಪ್ರಶ್ನೆ ಎಂದು ಅವಳಿಗೆ ಸ್ಪಷ್ಟವಾಗಿತ್ತು. ಈ ವೀರ ಮಹಿಳೆ ರಕ್ಷಣೆಗಾಗಿ ಮಾಡಿಕೊಳ್ಳಬೇಕಾದ ಸಿದ್ಧತೆಯನ್ನು ಮಾಡಿಕೊಂಡಳು.
ಮದ್ದುಗುಂಡಿನ ಸಂಗ್ರಹ ತೃಪ್ತಿಕರವಾಗಿತ್ತು. ಸೈನ್ಯಕ್ಕೆ ಕೊಡುತ್ತಿರುವ ಯುದ್ಧ ತರಬೇತಿ ಅಪೂರ್ವವಾಗಿತ್ತು. ಬೇಕಾದಷ್ಟು ಜನಸಂಗ್ರಹವೂ ಆಗಿತ್ತು. ಧಾನ್ಯ ಸಂಗ್ರಹವೂ ಆಗಿತ್ತು.ಕಿತ್ತೂರಿನ ಜನರನ್ನೆಲ್ಲ ಕೋಟೆಯಲ್ಲಿ ಕರೆದು ಚೆನ್ನಮ್ಮ ಹೇಳಿದಳು: “ನನ್ನ ಪ್ರಿಯ ಬಂಧುಗಳೇ, ವೈರಿ ಬಲಾಢ್ಯನಾಗಿದ್ದಾನೆ. ನಮ್ಮವರೇ ನಮಗೆ ಉರುಲು ಆಗಿದ್ದಾರೆ. ಆದರೆ ಇದು ಕಿತ್ತೂರಿನ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ನಾವು ಹೇಡಿಗಳಾಗಿ ಶರಣಾಗತರಾಗಿ ಇಂಗ್ಲೀಷರ ಅಧೀನರಾಗಿ ಜೀವ ಕಳೆಯಬೇಕು. ಇಲ್ಲವೆ ಗಂಡುಗಲಿಗಳಾಗಿ ವೀರರಂತೆ ಹೋರಾಡಿ ವೀರಮರಣವನ್ನಾದರೂ ಒಪ್ಪಲು ಸಿದ್ಧವಿರಬೇಕು! ಏನೆನ್ನುತ್ತೀರಿ? ರಾಣಿಯ ಮಾತು ಮುಗಿಯುವ ಮುನ್ನವೇ ಸಹಸ್ರ ಸಹಸ್ರ ಕಂಠಗಳು, “ಮರಣಕ್ಕೆ ನಾವು ಅಂಜುವುದಿಲ್ಲ, ನಾವು ಎಂದಿಗೂ ಶರಣಾಗತರಾಗುವುದಿಲ್ಲ” ಎಂದು ಉಗ್ಗಡಿಸಿದವು.
ಕಿತ್ತೂರಿನಲ್ಲಿ ಯುದ್ಧದ ವಾತಾವರಣ ರಣರಣಿಸತೊಡಗಿತು. ಸುಮಾರು ಹದಿನಾರುಸಾವಿರ ಜನರು ಆಯುಧ ಧರಿಸಿ ಕಿತ್ತೂರಿನ ರಣಯಜ್ಞನದಲ್ಲಿ ಧುಮುಕಲು ಸಿದ್ಧರಾದರು. ಈಗ ಚೆನ್ನಮ್ಮಾಜಿ ನುರಿತ ಸೇನಾಪತಿಯಂತೆ ಕೆಲಸ ಮಾಡಬೇಕಾಯಿತು. ಹೊರಗಿನಿಂದ ಬರುವ ಇಂಗ್ಲೀಷ್ ಸೈನಿಕರನ್ನು ಅಲ್ಲಲ್ಲಿ ತಡೆಯುವಂತೆ ವ್ಯೂಹ ರಚಿಸಿದಳು. ಆಯಕಟ್ಟಿನ ಸ್ಥಳಗಳಲ್ಲಿ ಗಡಿ ರಕ್ಷಣಾಪಡೆಗಳನ್ನು ಹುರಿದುಂಬಿಸಿದಳು. ಸ್ವಾತಂತ್ರ ರಕ್ಷಣೆಗಾಗಿ ಕಿತ್ತೂರಿನ ಬಂಟರು ಮಲಪ್ರಭಾ ನದಿಯ ದೋಣಿಗಳನ್ನು ನಾಶಪಡಿಸಿದರು.
ಇಂಗ್ಲೀಷರು ಇದಕ್ಕೆ ಕಿತ್ತೂರಿನ ಬಹಿರಂಗ ಬಂಡಾಯವೆಂದು ಕರೆದು ಸುತ್ತುಮುತ್ತಲೂ ಅಪಪ್ರಚಾರ ಮಾಡತೊಡಗಿದರು. ಈಗ ಉಭಯ ಪಕ್ಷಗಳು ಕೊನೆಯ ನಿರ್ಣಾಯಕ ಹೋರಾಟಕ್ಕೆ ಸಿದ್ಧವಾದವು.
ಇಂಗ್ಲೀಷರು ಆಕ್ರಮಣಕಾರಿ ಯುದ್ಧವಾಗಿತ್ತು. ಕಿತ್ತೂರಿನ ಚೆನ್ನಮ್ಮನದು ಸ್ವಸಂರಕ್ಷಣೆಯ ಹೋರಾಟವಾಗಿತ್ತು. ಇಂತಹ ಅಗ್ನಿಪರೀಕ್ಷೆಯ ಕಾಲದಲ್ಲಿಯೂ ಕಿತ್ತೂರಿನಲ್ಲಿ ಕೆಲವರು ಸ್ವಾರ್ಥಿಗಳಿದ್ದರು. ಕೆಲ ರಹಸ್ಯಗಳನ್ನು ವೈರಿಗಳಿಗೆ ತಿಳಿಸತೊಡಗಿದರು. ಕಿತ್ತೂರಿನ ಮದ್ದಿನ ಮನೆಯನ್ನು ನಾಶಗೊಳಿಸಿದರು. ಇಂಥವರ ಪತ್ತೆ ಹಚ್ಚಿ ಕಿತ್ತೂರಿನವರು ಕನ್ನೂರ ವೀರಸಂಗಪ್ಪ ಮತ್ತು ಹುರಕಡ್ಲಿ ಮಲ್ಲಪ್ಪ ಮೊದಲಾದವರಿಗೆ ಮರಣದಂಡನೆ ವಿಧಿಸಿದರು. ಪರಿಸ್ಥಿತಿ ಅನಾಹುತದತ್ತ ಸಾಗತೊಡಗಿತು. ಈ ಗಂಭೀರ ಪ್ರಸಂಗದಲ್ಲಿ ಕೊನೆಯ ನಿರ್ಧಾರವನ್ನು ತೆಗೆದುಕೊಳ್ಳುವ ಹೊಣೆ ಚೆನ್ನಮ್ಮನ ಮೇಲೆ ಬಿದ್ದಿತು. ಕಿತ್ತೂರ ಗೌರವವು ಚೆನ್ನಮ್ಮನಿಗೆ ಪ್ರಾಣಕಿಂತಲೂ ಹೆಚ್ಚಿನದಾಗಿತ್ತು.
ಚೆನ್ನಮ್ಮರಾಣಿ ಯುದ್ಧಪ್ರಿಯಳಾಗಿರಲಿಲ್ಲ. ಎಂತಲೇ ಅವಳು ಇದನ್ನು ತಪ್ಪಿಸಲು ನಿಯೋಗಿಗಳ ಮೂಲಕ ಸಂಧಾನ ಪ್ರಯತ್ನ ನಡೆಸಿದಳು. ಆದರೆ ಇಂಗ್ಲೀಷರು ಈ ಸಂಧಾನ ಮಾರ್ಗದಲ್ಲಿ ಮುಳ್ಳುಗಳನ್ನು ಹರವಿದರು. ಅವರು ಮತ್ತೆ ಮತ್ತೆ ಕಪಟ ನಾಟಕ ಆಡಹತ್ತಿದರು. ಕಿತ್ತೂರನ್ನು ವಶಪಡಿಸಿಕೊಳ್ಳುವುದೇ ಅವರ ಪೂರ್ವ ಯೋಜನೆಯಾಗಿತ್ತು. ಚೆನ್ನಮ್ಮ ಬಹಳಷ್ಟು ತಾಳ್ಮೆಯನ್ನು ತೋರಿದಳು. ರಕ್ತಪಾತವನ್ನು ತಪ್ಪಿಸಲು ಶತಪ್ರಯತ್ನ ಮಾಡತೊಡಗಿದಳು. ಆದರೆ ಯಾವ ಪ್ರಯತ್ನೂ ಫಲಕಾರಿಯಾಗಲಿಲ್ಲ.
ಸೆರೆಮನೆಯಲ್ಲಿದ್ದ ಇಂಗ್ಲೀಷ್ ಕೈದಿಗಳನ್ನು ಬಿಡುಗಡೆ ಮಾಡಿ ಚೆನ್ನಮ್ಮ ಸದ್ಭಾವನೆ ತೋರಿದಳು. ಸಂಪೂರ್ಣ ಸಿದ್ಧತೆಯಾಗುವವರೆಗೆ ಪತ್ರವ್ಯವಹಾರದ ಆಟ ಹೂಡಿ ಚಾಪ್ಲಿನ್ನನು ಬೇಕೆಂದೇ ಕಿತ್ತೂರ ಮುತ್ತಿಗೆಯನ್ನು ವಿಳಂಬಮಾಡತೊಡಗಿದನು. ಸಿದ್ಧತೆ ಪೂರ್ಣವಾಗಿ ಡಿಸೆಂಬರ್ 3ನೇ ತಾರೀಕಿನಂದು ಸೈನ್ಯಾಧಿಕಾರಿಗೆ ಕೋಟೆಯ ಮೇಲೆ ದಾಳಿ ಮಾಡಲು ಆಜ್ಞಾಪಿಸಿದನು. ಮುಂದೆ 24 ತಾಸುಗಳಲ್ಲಿ ಫಿರಂಗಿಗಳನ್ನು ಹಚ್ಚಿ ಕೋಟೆಯ ಮೇಲೆ ಇಂಗ್ಲೀಷರು ಆಕ್ರಮಣ ಮಾಡಿದರು. ಗೋಡೆಗಳು ಬಿರುಕು ಬಿಟ್ಟವು. ಇದೇ ವೇಳೆಯಲ್ಲಿ ಇಂಗ್ಲೀಷರ ಹಸ್ತಕದಿಂದ ಮದ್ದಿನ ಉಗ್ರಾಣದಲ್ಲಿ ಭಾರಿ ಮೋಸವು ನಡೆದು ಹೋಯಿತು. ಆದರೂ ಎದೆಗುಂದದೆ ಕಿತ್ತೂರ ವೀರ ಸೈನಿಕರು ನಾಡಿಗಾಗಿ ಜೀವದ ಹಂಗುತೊರೆದು ಕಾದಿದರು. ಭಾರಿ ಸಾವು–ನೋವು ಎರಡೂ ಕಡೆಯಲ್ಲಿ ಉಂಟಾದವು.
ಚೆನ್ನಮ್ಮರಾಣಿ ಗುರುಸಿದ್ದಪ್ಪನೊಡನೆ ಸಮಾಲೋಚನೆ ಮಾಡಿದಳು. ಬಲಾಢ್ಯ ಇಂಗ್ಲೀಷರ ಸೈನ್ಯವನ್ನು ಮುಂದೆ ತಾವು ತಡೆಯುವುದು ಸಾಧ್ಯವಿಲ್ಲವೆಂದು ಗೊತ್ತಾಯಿತು. ಮುಂದೇನು? ಯದ್ಧವನ್ನು ಮುಂದುವರೆಸಬೇಕೆ? ಅಪಾರವಾದ ವ್ಯರ್ಥ ಪ್ರಾಣಹಾನಿಯಾಗುವುದು. ಅಲ್ಲದೆ ಇಂಗ್ಲೀಷರು ಚೆನ್ನಮ್ಮರಾಣಿಯ ಮೇಲೆ ಸೇಡು ತೀರಿಸಿಕೊಳ್ಳಲು ಅವಳನ್ನು ಅವಮಾನ ಮಾಡಲು ಹೊಂಚುಹಾಕುತ್ತಿರುವ ಸುದ್ದಿ ಬೇಹುಗಾರರಿಂದ ತಿಳಿಯಿತು. ಎಂತಹ ಪ್ರಸಂಗ ಬಂದರೂ ಚೆನ್ನಮ್ಮ ರಾಣಿ ಇಂಗ್ಲೀಷರ ಕೈಗೆ ಸಿಗಬಾರದೆಂದು ಅವಳ ಸನ್ಮಿತ್ರರು ಹೇಳತೊಡಗಿದರು. ಮೂರು ದಿನಗಳ ಕಾಲ ಎರಡು ಸೈನ್ಯಗಳ ನಡುವೆ ಘೋರವಾದ ಯುದ್ಧವಾಯಿತು. 1824ರ ಡಿಸಂಬರ್ ತಿಂಗಳಲ್ಲಿ ಕಿತ್ತೂರ ಕೋಟೆ ಶತ್ರುಗಳ ವಶವಾಯಿತು. ರಾಶಿ ರಾಶಿಯಾಗಿ ಬಿದ್ದ ಹೆಣಗಳನ್ನು ತುಳಿದುಕೊಂಡು, ತಳ್ಳಿಕೊಂಡು ಇಂಗ್ಲೀಷ್ ಸೈನಿಕರು ಕೋಟೆಯನ್ನು ಪ್ರವೇಶಿಸಲು ಪ್ರಾರಂಭಿಸಿದರು. ರಾಣಿ ಚೆನ್ನಮ್ಮಜೀ ಇದನ್ನು ಕಂಡಳು. ಮೊದಲು ಅವರ ಕೈಯಿಂದ ಪಾರಾಗಿ ಹೋಗಿ ಮುಂದಿನ ಹೋರಾಟದ ಯೋಜನೆಯನ್ನು ಮಾಡುವುದೇ ಸರಿ ಎಂದು ಅವಳಿಗೂ ಅವಳ ಸಲಹೆಗಾರರಿಗೂ ತೋರಿತು.
ರಾಣಿಯೂ ಗುರುಸಿದ್ದಪ್ಪ ಮೊದಲಾದ ಮುಖ್ಯರೂ ಕೋಟೆಯ ಕಿರಿಗಿಂಡಿಯಿಂದ ಹೊರಬಿದ್ದರು. ಸಂಗೋಳ್ಳಿಯ ಕಡೆಗೆ ಧಾವಿಸಿದರು. ಆದರೆ ಅವರು ಕೋಟೆಯಿಂದ ಗುಪ್ತವಾಗಿ ಹೋಗುವ ಪ್ರಯತ್ನದಲ್ಲಿರುವಾಗಲೆ ಚೆನ್ನಮ್ಮಳನ್ನು ಬಂಧಿಸಲಾಯಿತು. ಅವಳೊಡನೆ ಗುರುಸಿದ್ದಪ್ಪ, ಸಂಗೊಳ್ಳಿ ರಾಯಣ್ಣ ಮೊದಲಾದವರನ್ನು ಬಂಧಿಸಲಾಯಿತು. ಅವರಾದಿ ವೀರಪ್ಪನು ಮಾತ್ರ ಕೆಲವರೊಡನೆ ತಪ್ಪಿಸಿಕೊಂಡು ಕೋಟೆಯಿಂದ ಪಾರಾಗಿ ಹೋದನು. ಅತ್ಯಂತ ಧೈರ್ಯಶಾಲಿನಿ, ಮಹಾಮುತ್ಸದ್ದಿ, ಕನ್ನಡದ ಕೆಚ್ಚಿನ ರಾಣಿ ಈಗ ವೈರಿಗಳ ಸೆರೆಯಾಳಾಗುವ ದುರ್ಧರ ಪ್ರಸಂಗವನ್ನು ಎದುರಿಸಬೇಕಾಯಿತು. ಗುರುಸಿದ್ದಪ್ಪ ಕಿತ್ತೂರ ಯುದ್ಧದ ಮುಖ್ಯಕಾರ್ಯವಾಹಕನಾಗಿದ್ದನು. ಚೆನ್ನಮ್ಮನ ಅತ್ಯಂತ ನಂಬಿಕೆಯ ಮನುಷ್ಯನಾಗಿದ್ದನು. ಇವನನ್ನು ಬೆಳಗಾವಿಯ ಸೆರೆಮನೆಯಲ್ಲಿ ಇಡಲಾಯಿತು.
ಚೆನ್ನಮ್ಮರಾಣಿಯನ್ನು ಸುಮಾರು ಐದು ವರ್ಷಗಳ ಕಾಲ ಬೈಲಹೊಂಗಲದಲ್ಲಿ ಸೆರೆಮನೆಯಲ್ಲಿಡಲಾಯಿತು. ಈ ದಿನಗಳಲ್ಲಿ ಅವಳ ಒಲವು ಆಧ್ಯಾತ್ಮದ ಕಡೆಗೆ ಹರಿಯಿತು. ಶಿವಪೂಜೆ, ಪ್ರಾರ್ಥನೆಗಳಲ್ಲಿ ಅವಳು ತನ್ಮಯಳಾಗತೊಡಗಿದಳು. ಪುರಾಣ ಪ್ರವಚನ, ಪವಿತ್ರ ಗ್ರಂಥ, ಪಾರಾಯಣಗಳೇ ಅವಳ ಚಟುವಟಿಕೆಗಳಾದವು. ಕಿತ್ತೂರ ನೆನಪಾದೊಡನೆ ಅವಳ ಕಣ್ಣು ತುಂಬುತ್ತಿದ್ದವು. ಮತ್ತೆ ಮತ್ತೆ ಈ ಅಸಹಾಯಕ ಪರಿಸ್ಥಿತಿಯಲ್ಲಿಯೂ ಬಿಡುಗಡೆಗಾಗಿ ಮನಸ್ಸು ಹಾತೊರೆಯುತ್ತಿತ್ತು. ಆದರೆ ಇದು ಸಾಧ್ಯವಿಲ್ಲವೆಂದಾಗ ನಿಡಿದಾದ ನಿಟ್ಟುಸಿರು ಹೊರಸೂಸುತ್ತಿತ್ತು.
ಚೆನ್ನಮ್ಮಾಜಿ ಸೆರೆಯಲ್ಲಿದ್ದರೂ ಅವರ ವೀರಬಂಟರಲ್ಲಿ ಹಲವರು ಆಗಾಗ ವೇಷಮರೆಸಿ ಬಂದು ಅವಳನ್ನು ಕಾಣುತ್ತಿದ್ದರು. ಹೊರಗಿನ ಸುದ್ದಿಯನ್ನು ತಿಳಿಸುತ್ತಿದ್ದರು. ಇಂಗ್ಲೀಷರನ್ನು ಸೋಲಿಸಲು ತಾವು ಮಾಡುತ್ತಿದ್ದ ಪ್ರಯತ್ನಗಳನ್ನು ವಿವರಿಸುತ್ತಿದ್ದರು. ಅವರಿಗೆಲ್ಲ ಚೆನ್ನಮ್ಮಾಜಿ ಸ್ವಾತಂತ್ರದ ವೀರಶ್ರೀಯಾಗಿದ್ದಳು. ಸಂಗೊಳ್ಳಿ ರಾಯಣ್ಣನಂತಹ ದೇಶಭಕ್ತರು ಅವಳಿಂದ ಸ್ಫೂರ್ತಿ ಪಡೆದರು.ಅವಳ ಆಶೀರ್ವಾದವನ್ನು ಬಯಸಿದರು.
ದಿನಗಳು ಕಳೆದವು. ತಿಂಗಳುಗಳು ಸರಿದವು, ವರ್ಷಗಳು ಜಾರಿಹೋದವು. ಇಂಗ್ಲೀಷರ ಬಲ ಕುಂದುವ ಮತ್ತೆ ಕಿತ್ತೂರು ಸ್ವತಂತ್ರವಾಗುವ ಸೂಚನೆ ಕಾಣಲೇ ಇಲ್ಲ! ಈ ವ್ಯಸನವೇ ಅವಳನ್ನು ತಿನ್ನಹತ್ತಿತು. ಈ ದುಃಖದಲ್ಲಿ ಕೊರಗಿ ಚೆನ್ನಮ್ಮರಾಣಿ 1829 ನೇ ಫೆಬ್ರವರಿ 2 ರಂದು ತೀರಿಕೊಂಡಳು. ಆಗ ಆಕೆಗೆ 51 ವರ್ಷ. ಇಂಗ್ಲೀಷರ ಕುತಂತ್ರವು ಫಲಿಸಿತು.
ಕಾಳಗದಲ್ಲಿ ಸೆರೆ ಸಿಕ್ಕು ಆ ಮೇಲೆ ಬಿಡುಗಡೆಯಾದ ಸಂಗೊಳ್ಳಿ ರಾಯಣ್ಣ 1829 ರಲ್ಲಿ ಹೋರಾಟ ಮುಂದುವರೆಸುತ್ತಾನೆ. ಇವನ ಹೋರಾಟಕ್ಕೆ ನೆರವು ನೀಡುತ್ತಿರುವ ಸಂಶಯದ ಮೇಲೆ ವೀರಮ್ಮನನ್ನು ಬ್ರಿಟಿಷರು ಮೊದಲು ಕುಸುಗಲ್ಲಿಗೆ, ಆ ಬಳಿಕ ಬೇರೊಂದು ಸ್ಥಳಕ್ಕೆ ಒಯ್ಯುತ್ತಾರೆ. ಇತ್ತ ರಾಯಣ್ಣನ ಹೋರಾಟ ಮುಂದುವರೆದಿರುತ್ತದೆ. ವಿಶ್ವಾಸದ್ರೋಹಿಗಳು ಇವನ ಸಂಗಡಿಗರಂತೆ ನಟಿಸುತ್ತ 1830 ಫೆಬ್ರುವರಿಯಲ್ಲಿ ಇವನನ್ನು ಬ್ರಿಟಿಷರಿಗೆ ಹಿಡಿದುಕೊಡುತ್ತಾರೆ. ಕಂಪನಿ ಸರಕಾರ ಈ ಕಾರ್ಯಕ್ಕಾಗಿ ಲಿಂಗನಗೌಡ ಮತ್ತು ವೆಂಕನಗೌಡರಿಗೆ 300 ರೂಪಾಯಿ ಬಹುಮಾನ ಕೊಡುತ್ತದೆ. ಮೇ 1830 ರಲ್ಲಿ ದತ್ತುಪುತ್ರ ಶಿವಲಿಂಗಪ್ಪ ಹಾಗು ಇತರ 400 ಜನರು ಬ್ರಿಟಿಷರಿಗೆ ಸ್ವಯಂ ಸೆರೆಯಾಗುತ್ತಾರೆ. ಜುಲೈ 1830 ರಂದು ವೀರಮ್ಮ ಸೆರೆಮನೆಯಲ್ಲಿ ಮರಣಹೊಂದುತ್ತಾಳೆ. ವಿಷ ತೆಗೆದುಕೊಂಡು ಮರಣ ಹೊಂದಿದಳೆಂದೂ, ಇಂಗ್ಲಿಷರೆ ವಿಷ ಹಾಕಿ ಕೊಂದರೆಂದೂ ಪ್ರತೀತಿಯಿದೆ.
1831 ಜನೆವರಿ 26 ರಂದು ಸಂಗೊಳ್ಳಿ ರಾಯಣ್ಣನನ್ನು ನಂದಗಡದಲ್ಲಿ ಗಲ್ಲಿಗೇರಿಸಲಾಗುತ್ತದೆ.!!
1824ರಲ್ಲಿ ವೀರ ವನಿತೆ ಚೆನ್ನಮ್ಮ ನಡೆಸಿದ ಸಂಗ್ರಾಮವು 1857ರ ಸ್ವಾತಂತ್ರ ಸಂಗ್ರಾಮಕ್ಕೆ ಸ್ಪೂರ್ತಿದಾಯಕವಾಯಿತು. ರಾಣಿ ಚೆನ್ನಮ್ಮ ಸ್ವಾತಂತ್ರದ ಜ್ಯೋತಿಯನ್ನು ಉರಿಸಿದಳು. ತಾನೂ ಉರಿದು ಅಮರಳಾದಳು. ಭಾರತದ ವೀರಸಂತಾನರಲ್ಲಿ, ಅವರ ರಕ್ತದ ಕಣಕಣಗಳಲ್ಲಿ, ಧಮನಿ ಧಮನಿಗಳಲ್ಲಿ, ಸ್ವಾತಂತ್ರ ಮಂತ್ರದ, ವೀರವ್ರತದ ಕಾವನ್ನು ಹರಿಯಬಿಟ್ಟಳು.
ರಾಣಿ ಕಿತ್ತೂರು ಚೆನ್ನಮ್ಮ, ರಾಣಿ ಕೆಳದಿ ಚೆನ್ನಮ್ಮ, ರಾಣಿ ಅಬ್ಬಕ್ಕ, ರಾಣಿ ಬೆಳವಡಿ ಮಲ್ಲಮ್ಮ, ಓನಿಕೆ ಓಬವ್ವ ರಂಥ ವೀರ ವನಿತೆ ಯರನ್ನು ಹುಟ್ಟಿಸಿದ ಕನ್ನಡ ತಾಯಿ ಧನ್ಯ. ದೇಶದ ಮಟ್ಟಿನಲ್ಲಿ ಅವರನ್ನು ಪರಿಚಯಿಸದ ಕನ್ನಡಿಗರು ನಿಜವಾಗಿ ಅಭಿಮಾನ ಶೂನ್ಯರು. ಬ್ರಿಟಿಷರ ವಿರುದ್ಧ ಕತ್ತಿ ಝಳಪಿಸಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ರಾಣಿ ಚೆನ್ನಮ್ಮ ಅವರ ಹೆಸರು ಅಜರಾಮರವಾಗಿದೆ. ಅವರ ಶೌರ್ಯ, ಸಾಹಸದ ಕಿಚ್ಚು ಜಗದ ಎಲ್ಲ ಮಹಿಳೆಯರಿಗೂ ಸ್ಪೂರ್ತಿಯ ಸೆಲೆಯಾಗಿದೆ.
- ✍️ Dr Prema Pangi
ಮಾಹಿತಿ: ಕನ್ನಡ ಸಂಪದ, ಅಂತರ್ಜಾಲ
Comments
Post a Comment