ಶಿವಯೋಗ -2 : *ಶಿವಯೋಗದಲ್ಲಿ ಮಂತ್ರ*

ಶಿವಯೋಗ -2
ಶಿವಯೋಗದಲ್ಲಿ ಮಂತ್ರ
ಶಿವಯೋಗ - part 2
*ಶಿವಯೋಗದಲ್ಲಿ ಮಂತ್ರ* :
“ಮನನಾತ್ ತಯತೆ ಇತಿ ಮಂತ್ರ"
ಎಂದರೆ ಮನನ ಮಾಡುವುದರಿಂದ ಯಾವುದು ತಾರಕವಾಗುವದೋ ಅದುವೇ  ಮಂತ್ರವಾಗಿದೆ. ಎಲ್ಲ ಯೋಗಗಳಲ್ಲಿ ಮಂತ್ರಯೋಗವು ಅತ್ಯಂತ ಸುಲಭವಾಗಿರುವದು. ನಿರಂತರವಾದ ಮಂತ್ರಾನುಸಂಧಾನದ ಮುಖಾಂತರವಾಗಿ ಜೀವ ಪರಮಾತ್ಮರನ್ನು  ಒಂದುಗೂಡಿಸುವ ಸಾಧನೆಯೇ ಮಂತ್ರಯೋಗವಾಗಿ ಪರಿಣಮಿಸುವುದು.
ನಾಮ, ನಾದ, ಮಂತ್ರ :
 ಶರಣರು" ನಾದ ಬಿಂದು ಕಳೆ" ಯಿಂದ ವಿಶ್ವದ ಉದಯವಾದ ಬಗೆ ತಿಳಿಸಿದ್ದಾರೆ. 
ಶಿವಯೋಗದಲ್ಲಿ  ನಾಮ ವೆಂದರೆ "ಶಿವ ಶಿವ",
ನಾದವೆಂದರೆ ಪ್ರಣವ " ಓಂ" ,
ಮಂತ್ರವೆಂದರೆ "ಓಂ ನಮಃ ಶಿವಾಯ." 
ನಿರ್ದಿಷ್ಟ ಅಕ್ಷರಗಳನ್ನು ಜೋಡಿಸಿದಾಗ ಅದು ಸಾಧಕನ ಆಂತರಿಕ ಕೋಶಗಳನ್ನು ಉದ್ದೀಪನ ಮಾಡುತ್ತದೆ.  ಸಾಧಕ ಯೋಗ್ಯ ಗುರುವಿನೆಡೆಗೆ ಹೋದಾಗ, ಗುರು ಆ ಮಂತ್ರದ ಕೀಲಕವನ್ನು ತೆಗೆಯಲು ಉತ್ಕೀಲನ ವಿಧಾನ ಹೇಳಿಕೊಡುತ್ತಾನೆ. ಉತ್ಕೀಲನವಿಲ್ಲದೆ ಮಾಡುವ ಮಂತ್ರಜಪಗಳು ಫಲವನ್ನು ಕೊಡುವುದಿಲ್ಲ. 
*ನಾಮ*:
#ಶಿವಶಿವಾಯೆಂಬ ಮಂತ್ರವೆನಗೆ ಅಮೃತಾರೋಗಣೆಯೋ ಎನ್ನ ತಂದೆ.
ಹರ ಹರಾ ಎಂಬ ಮಂತ್ರವೆನಗೆ ಅಮೃತಾರೋಗಣೆಯೋ ಎನ್ನ ತಂದೆ.
ಶ್ರೀ ವಿಭೂತಿ ರುದ್ರಾಕ್ಷಿ ಭಕುತಿಯ ಮುಕುತಿಗೆ ಸಾಧನವೋ ಎನ್ನ ತಂದೆ,
ಎನಗಿದೆ ಗತಿಮತಿ ಚೈತನ್ಯ, ಕೂಡಲಸಂಗಮದೇವಯ್ಯಾ,
ನಿಮ್ಮ ನಾಮದ ರುಚಿ ತುಂಬಿತ್ತೊ ಎನ್ನ ತನುವ. / 1208
ಮಂತ್ರಯೋಗಕ್ಕೆ ನಾಮವೇ ಮುಖ್ಯವಾಗಿದೆ. ನಾಮಜಪ, ಅಜಪವಾಗಿ, ಮುಂದೆ ನಮ್ಮ ಮನಸ್ಸನ್ನು ಲಯಮಾಡಿಕೊಂಡು ನಾಮಸಾಧಕ,  ನಾಮ, ನಾಮಸಾಧನೆ ಮೂರನ್ನು ಒಂದು ಮಾಡುಬೇಕು. ತುಕಾರಾಂ, ಜ್ಞಾನದೇವ , ದಾಸರು ನಾಮಜಪದ ಮಹತ್ವ ತಿಳಿಸಿದ್ದಾರೆ." ನೀನ್ಯಾ ಕೊ ನಿನ ಹಂಗ್ಯಾಕೊ ನಿನ ನಾಮದ ಬಲ ಒಂದಿದ್ದರೆ ಸಾಕು " ಎಂದು ದಾಸರು ಪದ ರಚಿಸಿ ನಾಮದ ಮಹತ್ವ, ನಾಮದಲ್ಲಿ ಅಡಗಿದ ಅಸ್ತಿತ್ವ ತಿಳಿಸಿದ್ದಾರೆ.
*ನಾದ*:
ಓಂ ಎಂಬುದು ಒಂದು ಪವಿತ್ರ ಪ್ರಣವ ಬೀಜಾಕ್ಷರ ನಾದ. ಹಿಂದೂ, ಸಿಕ್, ಜೈನ ಮತ್ತು ಬೌದ್ಧ ಧರ್ಮಗಳಲ್ಲಿಯೂ ಓಂಕಾರವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. 
ಓಂ ಶಬ್ಧವು ಸರ್ವೋಚ್ಚ ಶಕ್ತಿಯ ನಿರ್ಗುಣ ರೂಪವನ್ನು ಪ್ರತಿನಿಧಿಸುತ್ತದೆ. ಓಂ ನಿಂದಲೇ ಸೃಷ್ಟಿರಚನೆ ಪ್ರಾರಂಭವಾಯಿತು.
ಉಸಿರಿನಿಂದ ದೇಹದಲ್ಲಿ ಚೈತನ್ಯ ಒಡಮೂಡಿ ಉಸಿರಿನ ಆಧಾರದಲ್ಲಿಯೇ ಜೀವನು ಬಾಳುವನು. ಉಸಿರಿನ ಏರಿಳಿತದಿಂದ ಒಂದು ಬಗೆಯ ಸಪ್ಪಳವಾಗುವದಿಲ್ಲವೆ? ಈ ಸಪ್ಪಳವೇ ಶಬ್ದ ಎಂದೆನ್ನಬಹುದು. ಆದರೆ ಎಲ್ಲ ಸಪ್ಪಳಗಳು ಶಬ್ದವಲ್ಲ, ನಾದವಲ್ಲ. ಆ ಸಪ್ಪಳವು ತಾಳ ಲಯ ಬದ್ಧವಾಗಿ ಅರ್ಥಗರ್ಭಿತವಾಗಿದ್ದರೆ ನಾದವೆನಿಸುವದು,  ನಾದದಲ್ಲಿಯೇ ಮಂತ್ರವಿದೆ.
ಏನೂ ಪ್ರಯತ್ನವಿಲ್ಲದೆ ಉಸಿರನ್ನು ಬಿಡುವುದು ತೆಗೆದುಕೊಳ್ಳುವುದು ನಡೆದಿರುವಾಗ 'ಸಂ, ಹಂ ' ಎಂಬ ನಾದ  ಹುಟ್ಟುತ್ತದೆ, ಸೊಂಯ್ ಸೊಂಯ್ ಎಂಬ ಧ್ವನಿಯುಂಟಾಗುತ್ತದೆ. ಇದರಲ್ಲಿ 'ಸೋಹಂ ಅಂದರೆ ಅದೇ (ಆ ಪರವಸ್ತು ಪರಬ್ರಹ್ಮ) ವೇ ನಾನು ' ಎಂಬುದು ತಾಳಬದ್ಧವಾದ ಶಬ್ದ. ಇದರಲ್ಲಿಯ ಹ ಮತ್ತು ಸ ಎಂಬೆರಡು ಅಕ್ಷರಗಳನ್ನು ಕಳೆದರೆ ಉಳಿಯುವದು "ಓಂ" ಇದುವೇ ನಾದ.. ಈ ಓಂಕಾರವೇ ಶಿವನ ಹೆಸರು.
ಓಂಕಾರ ಪಿಂಡ ದೃಷ್ಟಿಯಿಂದ ನೋಡಿದರೆ  ಪ್ರತ್ಯಗಾತ್ರ, ಬ್ರಹ್ಮಾಂಡದ ದೃಷ್ಟಿಯಿಂದ ನೋಡಿದರೆ  ಪರಮಾತ್ಮ.
 ಓಂ ಎನ್ನುವುದು ಸರ್ವೋತ್ತಮ ಪ್ರಜ್ಞೆ.
 AUM (ಓಂ) ಸಮಯದ, ಮನಸ್ಸಿನ ಎಲ್ಲ ಸ್ಥಿತಿ ಗಳನ್ನು ಪ್ರತಿನಿಧಿಸುತ್ತದೆ. ಓಂ (AUM) ನಲ್ಲಿ ಅಕಾರ ('A') ಮನಸ್ಸಿನ ಎಚ್ಚರ ಸ್ಥಿತಿಯನ್ನು ಸೂಚಿಸುತ್ತದೆ. ಉ ಕಾರ ('U')ಕನಸಿನ ಸ್ಥಿತಿಯನ್ನು ಮತ್ತು ' ಮ ಕಾರ (M')ಮನ ಸ್ಸಿನ ಆಳವಾದ ನಿದ್ರೆಯ ಸ್ಥಿತಿಯನ್ನು ಸೂಚಿಸುವುದು. ಓಂ.... ಅನ್ನುವಾಗ ಕೊನೆಯಲ್ಲಿ  ಉಚ್ಚರಿಸಲಾಗುವ ವಿರಾಮ "ತುರಿಯಾ ಅಥವಾ ಅನಂತ ಪ್ರಜ್ಞೆಯ ಸ್ಥಿತಿ" ಎಂದು ಸೂಚಿಸುವುದು.
*ಮಂತ್ರ*:
ಶರಣ ಆಯ್ದಕ್ಕಿ ಮಾರಯ್ಯನವರು "ಶಿವನೆ ಮಂತ್ರತಂತ್ರಯಂತ್ರೋಪಕರಣವಾಗಿ ಬಂದ ಲೋಕಹಿತಾರ್ಥ" ಎಂದಿದ್ದಾರೆ.
#ಶಿವನೆ ಶಿವಭಕ್ತನಾಗಿ ಬಂದ ಲೋಕಹಿತಾರ್ಥ.
ಶಿವನೆ ಶಿವರಹಸ್ಯವ ಬೋಧಿಸಲೆಂದು ಗುರುವಾಗಿ ಬಂದು,
ಲಿಂಗದ ಕಳೆಯನರುಹಿದ ಲೋಕಹಿತಾರ್ಥ.
ಶಿವನೆ ಚರವೇಷದಲ್ಲಿ ಬಂದು,
ಅಂಗ ಮೊದಲು, ಮನವೆ ಕಡೆಯಾದ ಪದಾರ್ಥ
ಶಿವನೆ ಮಂತ್ರತಂತ್ರಯಂತ್ರೋಪಕರಣವಾಗಿ ಬಂದ ಲೋಕಹಿತಾರ್ಥ.
ಇದರಂಗಸಂಗವ ಲಿಂಗಸಂಗಿಗಳು ಬಲ್ಲರು,
ಅನಂಗಸಂಗಿಗಳೆತ್ತ ಬಲ್ಲರಯ್ಯಾ,
ಅಮರೇಶ್ವರಲಿಂಗದನುವನರಿದ ಸಂಗನಬಸವಣ್ಣಾ?
ಹೀಗೆ ಶಿವಪೂಜೆ, ಶಿವಯೋಗದಲ್ಲಿ ಮಂತ್ರದ ಮಹತ್ವ ತಿಳಿಸಿದ್ದಾರೆ.

*ಪಂಚಾಕ್ಷರಿ ಮಂತ್ರ*:
ಪ್ರಪಂಚದ ವಿಶಾಲವಾಗಿ ಕಾಣುವುದಾದರೂ ಇದು ಪ್ರಥ್ವಿ, ಅಪ್ಪು, ಅಗ್ನಿ, ವಾಯು, ಆಕಾಶ  ಎಂಬ ಪಂಚಭೂತಗಳಿಂದ ಕೂಡಿದೆ. ಒಂದೊಂದು ಭೂತವನ್ನು ಒಂದೊಂದು ಹೆಸರಿನಿಂದ ಕರೆಯಬೇಕಲ್ಲವೆ? ಪೃಥಿಗೆ 'ನ' ಆಕಾರವೆಂದರೆ ಅದು ಯೋಗ ದೃಷ್ಟಿಯಿಂದ ' ನ ' ಆಕಾರವನ್ನು ತಾಳುವದು:  ಹೀಗೆಯೇ  ಅಪ್ಪುವಿಗೆ ' ಮ ', ಅಗ್ನಿ ' ಶಿ 'ಕಾರ, ವಾಯುವಿಗೆ ' ಮ ' ಕಾರ, ಆಕಾಶಕ್ಕೆ ' ಯ ' ಕಾರ ಎಂದು ಹೇಳಿದಾಗ ಇವು ಆಯಾ ಆಕಾರ ವನ್ನು ತಾಳುವವುವೆಂಬರ್ಥ. ಅದುವೆ ನಮಃ ಶಿವಾಯ ! ಭಕ್ತಿಯ ದೃಷ್ಟಿಯಿಂದ ಹೀಗೆ ಅದನ್ನು “ನಮಃ ಶಿವಾಯ ಅಂದರೆ ಶಿವನಿಗೆ ನಮಸ್ಕಾರ' ಎಂದು ಕರೆದರು.
" ನಮಮ ಶಿವಸ್ಯ ಸರ್ವಂ "ಇದು ನನ್ನದಲ್ಲ ಎಲ್ಲವೂ ಶಿವನದು, ಈ ದೃಷ್ಟಿಯಿಂದ ಹೇಳಿದುದು.  
ಪಂಚಾಕ್ಷರಿ ಮಂತ್ರವು ಶಿವಪೂಜೆಯ ಮಂತ್ರ.
#ನಮಃ ಶಿವಾಯ ನಮಃ ಶಿವಾಯ ನಮಃ ಶಿವಾಯ
ಶರಣೆಂದಿತ್ತು ಲಲಾಟಲಿಖಿತ,
ಬರೆದ ಬಳಿಕ ಪಲ್ಲಟವ ಮಾಡಬಾರದು.
ಎನ್ನ ಉರದ ಉಂಡಿಗೆ, ಶಿರದ ಅಕ್ಷರ
ಕೂಡಲಸಂಗಯ್ಯಾ ಶರಣೆಂದಿತ್ತು.
ಎನ್ನುತ್ತಾರೆ ಗುರು ಬಸವಣ್ಣನವರು.
*ಷಡಕ್ಷರಿ ಮಂತ್ರ*:  
ಓಂ...ನಮಃ ಶಿವಾಯ' ಎನ್ನುವುದರಿಂದ ಪಿಂಡ - ಬ್ರಹ್ಮಾಂಡಗಳಲ್ಲಿ, ಆತ್ಮ-ಪರಮಾತ್ಮನಲ್ಲಿ  ಅಥವಾ ಅಂಗ - ಲಿಂಗದಲ್ಲಿ ಸಮರಸ, ಐಕ್ಯ, ಸಾಮರಸ್ಯ ಸೂಚಿಸಲ್ಪಡುವದು. ಈ ಷಡಕ್ಷರ ಮಂತ್ರದಲ್ಲಿ ಪಿಂಡ ಬ್ರಹ್ಮಾಂಡ ಯೊರೈಕಂ, ಇದು ಆತ್ಮ ಪರಮತ್ಮರ ಸಾಮರಸ್ಯವಾಗಿದೆ.
ಷಡಕ್ಷರ ಮಂತ್ರವು ಶಿವಯೋಗದ ಮಂತ್ರ.
ಇಲ್ಲಿ ಪೂಜಾಸಾಮಗ್ರಿಗಳಿಲ್ಲ . ಅಷ್ಟವಿಧಾರ್ಚನೆ ಮತ್ತು ಷೋಡಷೋಪಚಾರಗಳಿಲ್ಲ. ಸದಾ ಏಕಗ್ರತೆಯಿಂದ ಮಾನಸಿಕವಾಗಿ ಮಂತ್ರ ಪಠನೆಯಿಂದ ಧ್ಯಾನದಲ್ಲಿ ಮುಳುಗಿ ದೈವ ದಾರಣೆಯಾಗಿ ಸಮಾದಿ ಸ್ಥಿತಿಯನ್ನು ತಲುಪಿ ಪಂಚಭೂತಗಳನ್ನು ಗೆದ್ದು ತಾನೆ ಈಶ್ವರನಾಗುವ ಮಂತ್ರ.
ಅಲ್ಲಮ ಪ್ರಭುಗಳು ತಿಳಿಸಿದ ಷಡಕ್ಷರ ಮಂತ್ರದ ಮಹಿಮೆ
#'ನ' ಎಂಬುದೆ ನಂದಿಯಾಗಿ, 'ಮ' ಎಂಬುದೆ ಮಹತ್ತಾಗಿ,
'ಶಿ' ಎನಬುದೆ ರುದ್ರನಾಗಿ, 'ವಾ' ಎಂಬುದೆ ಹಂಸೆಯಾಗಿ, 
'ಯ' ಎಂಬುದೆ ಅರಿವಾಗಿ, 'ಓಂ' ಕಾರವೆ ಗುರುವಾಗಿ,
ಸಂಬಂಧವೆ ಅಸಂಬಂಧವಾಗಿ, ಅಸಂಬಂಧವೆ ಸಂಬಂಧವಾಗಿ, 
ಎರಡೂ ಒಂದಾಗೆ ಗುಹೇಶ್ವರಲಿಂಗಸಂಬಂಧಿ !
ಅರ್ಥ:
ಪ್ರಣವಾಕ್ಷರಗಳು ಆರು; ಓಂ,ನ,ಮ,ಶಿ,ವಾ,ಯ. ಈ ಆರು ಪ್ರಣವಗಳ ಸುಸಂಬದ್ಧ ಸಮೂಹವೇ ಶಿವಷಡಕ್ಷರ ಮಹಾಮಂತ್ರ.
 ಪರಶಿವನಿಂದಲೇ ಈ ವಿಶ್ವ ಹೊರಹೊಮ್ಮಿದೆ ಹಾಗೂ ಪರಶಿವನಲ್ಲಿಯೇ ಬಾಳುತ್ತದೆ.
ಶರಣನು ಪರಶಿವನ ಮಂತ್ರ ಅನುಸಂಧಾನದ ಮೂಲಕ ಶಿವಾದ್ವೈತ ದೃಷ್ಟಿಯನ್ನು ಪಡೆದು  ಈ ವಿಶ್ವವನ್ನು ಪರಶಿವನ ಅಭಿವ್ಯಕ್ತರೂಪು ಎಂದೇ ಕಾಣುತ್ತಾನೆ
 ಪ್ರಭುದೇವರು ತಿಳಿಸಿರುವ ಮಾತುಗಳಲ್ಲಿ ಮಂತ್ರ ಮಹಿಮೆ ಸೂಚ್ಯವಾಗಿ ವ್ಯಕ್ತವಾಗುತ್ತದೆ. ದೀಕ್ಷೆ ಸಮಯದಲ್ಲಿ ಗುರು ಕೈಯಲ್ಲಿ ಲಿಂಗವ ಕೊಟ್ಟ ಕಿವಿಯಲ್ಲಿ ಮಂತ್ರವನ್ನು ಹೇಳಿ, ಮಂತ್ರ ವೇ ಲಿಂಗ, ಲಿಂಗ ವೇ ಮಂತ್ರ ಎಂದು ಅರುಹುವನು. ಲಿಂಗವೆಂದರೆ ಷಡಕ್ಷರಿ ಮಂತ್ರ.
ಓಂ ನಮಃ ಶಿವಾಯ , ನಮಃ ಶಿವಾಯ
 ನಿರ್ದಿಷ್ಟ ಅಕ್ಷರಗಳನ್ನು ಜೋಡಿಸಿದಾಗ ಅದು ಸಾಧಕನ ಆಂತರಿಕ ಕೋಶಗಳನ್ನು ಉದ್ದೀಪನ ಮಾಡುತ್ತದೆ. 
ಗುರು ಬಸವಣ್ಣನವರ ವಚನಗಳಲ್ಲಿ ಮಂತ್ರ :
#ಓಂ ನಮಃ ಶಿವಾಯ 
ಎಂಬ ಮಂತ್ರವ ಮೀರಲಮ್ಮದೆ ನಿಂದವು ವೇದ, 
ಓಂ ನಮಃ ಶಿವಾಯ 
ಎಂಬ ಮಂತ್ರವ ಮೀರಲಮ್ಮದೆ ನಿಂದವು ಶಾಸ್ತ್ರ, 
ಓಂ ನಮಃ ಶಿವಾಯ 
ಎಂಬ ಮಂತ್ರವ ಮೀರಲಮ್ಮದೆ ನಿಂದವು ತರ್ಕ, 
ಭಯಂಕರ ಭ್ರಮೆಗೊಂಡಿತ್ತು ಮಂತ್ರ-ತಂತ್ರ, 
ಶಿವನಂತುವನರಿಯದೆ ಚಿಂತಿಸುತ್ತಿದ್ದಿತ್ತು ಲೋಕ, 
ಕೂಡಲಸಂಗಮದೇವ ಶ್ವಪಚನ ಮೆರೆದಡೆ 
ಜಾತಿಭೇದವ ಮಾಡಲಮ್ಮವು.

#ಅಕಟಕಟಾ ಬೆಡಗು ಬಿನ್ನಾಣವೆಂಬುದೇನೊ !
ಓಂ ನಮಃ ಶಿವಾಯ ಎಂಬುದೇ ಮಂತ್ರ,
ಓಂ ನಮಃ ಶಿವಾಯ ಎಂಬುದೇ ತಂತ್ರ,
ನಮ್ಮ ಕೂಡಲಸಂಗಮದೇವರ ನೆನೆವುದೆ ಮಂತ್ರ.

#ಎನ್ನ ಮನದಲ್ಲಿ ಮತ್ತೊಂದನರಿಯೆನಯ್ಯಾ,
ಓಂ ನಮಃ ಶಿವಾಯ, ಓಂ ನಮಃ ಶಿವಾಯ
ಎನಗಿದೆ ಮಂತ್ರ, ಇದೇ ಜಪ.
ಕೂಡಲಸಂಗಮದೇವಾ ನೀನೆ ಬಲ್ಲೆ, ಎಲೆ ಲಿಂಗವೆ.

#ವಶ್ಯವ ಬಲ್ಲೆವೆಂದೆಂಬಿರಯ್ಯಾ,
ಬುದ್ಧಿಯನರಿಯದ ಮನುಜರು ಕೇಳಿರಯ್ಯಾ.
ವಶ್ಯವಾವುದೆಂದರಿಯದೆ ಮರುಳುಗೊಂಬಿರಿ,
ಎಲೆ ಗಾವಿಲ ಮನುಜರಿರಾ.
ಓಂ ನಮಃ ಶಿವಾಯ ಎಂಬ ಮಂತ್ರ ಸರ್ವಜನವಶ್ಯ
ಕೂಡಲಸಂಗಮದೇವಾ./78

ಚಿನ್ಮಯ ಜ್ಞಾನಿ ಚೆನ್ನಬಸವಣ್ಣ ನವರ ವಚನ ಗಳಲ್ಲಿ ಮಂತ್ರ :
#ನಮಃ ಶಿವಾಯ ಲಿಂಗವು, ಓಂ ನಮಃ ಶಿವಾಯ ಬಸವಣ್ಣನು.
ನೀನೆ ಎನ್ನ ಮನಸ್ಥಲದಲ್ಲಿ ನಿಂದು ಬೆಳಗಿ ತೋರಿದೆಯಾಗಿ
ಇದು ಕಾರಣ, ಕೂಡಲಚೆನ್ನಸಂಗಯ್ಯಾ
ಆದಿಯಾಧಾರವಿಲ್ಲದಂದು
`ಓಂ ನಮಃ ಶಿವಾಯ' ಎನುತಿರ್ದೆನು. / 880

ಷಣ್ಮುಖ ಶಿವಯೋಗಿಗಳ ವಚನದಲ್ಲಿ ಮಂತ್ರ:
#ಅರಿಯದೆ ಒಂದು ವೇಳೆ `ಓಂ ನಮಃಶಿವಾಯ' ಎಂದಡೆ
ಮರೆದು ಮಾಡಿದ ಹಿಂದೇಳುಜನ್ಮದ
ಕರ್ಮದಕಟ್ಟು ಹರಿದು ಹೋಯಿತ್ತು ನೋಡಾ !
ಅರಿದೊಂದು ವೇಳೆ `ಓಂ ನಮಃಶಿವಾಯ' ಎಂದಡೆ
ದುರಿತಸಂಕುಳವೆಲ್ಲ ದೂರಾಗಿಹವು ನೋಡಾ !
ಇದು ಕಾರಣ 
`ಓಂ ನಮಃಶಿವಾಯ, ಓಂ ನಮಃಶಿವಾಯ'
ಎಂಬ ಶಿವಮಂತ್ರವನು ಜಪಿಸಿ,
ನಾನಾ ಭವದ ಬಳ್ಳಿಯ ಬೇರ ಕಿತ್ತೊಗೆದೆನಯ್ಯ
ಅಖಂಡೇಶ್ವರಾ./47
 ಮಂತ್ರದ ಅರ್ಥ ತಿಳಿಯದಿದ್ದರೂ ಸಹಿತ  `ಓಂ ನಮಃ ಶಿವಾಯ' ಎಂದ ಜಪಿಸಿದರೆ,
ತಿಳಿಯದೇ ಮಾಡಿದ ಹಿಂದಿನ ಏಳು ಜನ್ಮದ
 ಕರ್ಮದಕಟ್ಟುಗಳು ಹರಿದು ಹೋಗುತ್ತವೆ. 
ಮಂತ್ರದ ಅರ್ಥ ತಿಳಿದಿಲ್ಲದಿದ್ದರೂ ನಮ್ಮ ನರಗಳಮೇಲೆ ಉಚ್ಛಾರದಿಂದ ಭಾಷೆಯ ಪರಿಣಾಮವು ಸಾಧ್ಯವಾಗುತ್ತದೆ. 
ಒಂದುವೇಳೆ ಮಂತ್ರದ ಅರ್ಥ ಅರಿತು "ಓಂ ನಮಃಶಿವಾಯ" ಎಂದು ಜಪಿಸಿದರೆ 
ಅಪರಾಧ, ದುಷ್ಕರ್ಮಗಳೆಲ್ಲ ದೂರ ಸರಿಯುವವು.  `ಓಂ ನಮಃಶಿವಾಯ, ಓಂ ನಮಃಶಿವಾಯ'ಎಂಬ ಶಿವಮಂತ್ರವನು ಜಪಿಸಿ, ನಾನು ನಾನಾ ಹುಟ್ಟು ಸಾವುವೆಂಬ ಭವದ ಬಳ್ಳಿಯ ಬೇರ ಸಮೇತ ಕಿತ್ತೊಗೆದೆನಯ್ಯ. ನಾನು ಭವಸಾಗರವನ್ನು ದಾಟಿದೆ ಅಖಂಡೇಶ್ವರಾ ಎಂದು ತಮ್ಮ ಇಷ್ಟದೇವರಾದ ಅಖಂಡೇಶ್ವರನನ್ನು ನೆನೆಯುತ್ತಾರೆ.

ಸರ್ಪಭೂಷಣ ಶಿವಯೋಗಿಗಳ ವಚನದಲ್ಲಿ ಮಂತ್ರ:
ಗುರುಬೋಧೆಯಿಂದತಿಶಯವಾದುದೊಂದುಂಟೆ?
ಪರತತ್ವವನು ಬೋಧಿಸುವುದಾಗಿ ||ಪಲ್ಲವಿl| .
ಮಂತ್ರಾದಿ ದೇವತೆಯಹ ಮೂರ್ತಿಯೊಳು ಬಾಹ್ಯ ಭಾಂತಿಯಳಿದು ಮನವರಗಿಸಿ | ಅಂತರಂಗದೊಳು ಭಜಿಸೆ ಮುಕ್ತಿಯಹುದೆಂದು ಮಂತಯೋಗವ ಸೂಚಿಸಿದ್ದರಿಂದ || 
ಎಂದು ಹೇಳುವರು. ಇದರಿಂದ `ಬಾಹ್ಯಮೂರ್ತಿಯೊಂದನ್ನು ಕುರಿತು ಭ್ರಾಂತಿಗೀಡಾಗಿ ಮಂತ್ರಜಾಪಿಯಾಗದೆ  ಅಂತರಂಗದಲ್ಲಿ ಗುರು ಭೋದಿಸಿದ ಮಂತ್ರವನ್ನು ಜಪಿಸಿ ಮುಕ್ತನಾಗಿರಬೇಕು.

 ಮಂತ್ರದ ಅರ್ಥವನ್ನು ಕುರಿತು ಮನನ ಮಾಡಬೇಕು.ಆಗ ಮಾತ್ರ ಅದು ಮಂತ್ರವೆನಿಸಲು ತಕ್ಕದಾಗುವದು.
ಮಂತ್ರದಲ್ಲಿರಿಸಿದ ವಿಶ್ವಾಸ, ನಿಷ್ಠೆ ಮತ್ತು ಚಿತ್ತದ ಏಕಾಗ್ರತೆ ಇವುಗಳ ಮೂಲಕ ಯೋಗಿಯು ಭೌತಿಕ ಬಂಧನಗಳಿಂದ ಮುಕ್ತನಾಗಿ ಆತ್ಮತತ್ವ ಸಾಕ್ಷಾತ್ಕಾರವನ್ನು ಮಾಡಿಕೊಳ್ಳುತ್ತಾನೆ. 
 ಮಂತ್ರ ಜಪದಿಂದ ಚಂಚಲ ಮನಸ್ಸಿನ ಹೊಯ್ದಾಟ ನಿವಾರಿಸಿ ದೃಢ ನಿರ್ಧಾರ ತೆಗೆದುಕೊಳ್ಳಬಹುದು. ಮಂತ್ರ ಜಪದಿಂದ ಮನವು ಸ್ಥಿರವಾಗಿ ಸ್ಥಿಮಿತಕ್ಕೆ ಬರುತ್ತದೆ. ಮಂತ್ರ ಒಂದು ಶಕ್ತಿಯಾಗಿದೆ, ಸರಿಯಾಗಿ ಉಪಯೋಗ ಮಾಡಿಕೊಳ್ಳುವುದರಿಂದ ಮಂತ್ರ, ಆಧ್ಯಾತ್ಮಿಕ ವಿಕಾಸದಲ್ಲಿಯೂ ಅತ್ಯಧಿಕವಾದ ಸಹಾಯವನ್ನು ಮಾಡುತ್ತದೆ.
ತೋಂಟದ ಸಿದ್ಧಲಿಂಗೇಶ್ವರ ಯತಿಗಳ ವಚನದಲ್ಲಿ ಶಿವಯೋಗದಲ್ಲಿ  ಮಂತ್ರದ ಮಹತ್ವ ಹೀಗೆ ತಿಳಿಸಿದ್ದಾರೆ.
#ಆಧಾರಚಕ್ರದಲ್ಲಿ ನಕಾರ ಸ್ವಾಯತ.
ಸ್ವಾಧಿಷ್ಠಾನಚಕ್ರದಲ್ಲಿ ಮಃಕಾರ ಸ್ವಾಯತ.
ಮಣಿಪೂರಕಚಕ್ರದಲ್ಲಿ ಶಿಕಾರ ಸ್ವಾಯತ.
ಅನಾಹತಚಕ್ರದಲ್ಲಿ ವಾಕಾರ ಸ್ವಾಯತ.
ವಿಶುದ್ಧಿಚಕ್ರದಲ್ಲಿ ಯಕಾರ ಸ್ವಾಯತ.
ಆಜ್ಞಾಚಕ್ರದಲ್ಲಿ ಓಂಕಾರ ಸ್ವಾಯತ.
ಇದು ಕಾರಣ, ಶರಣನ ಕಾಯವೇ ಷಡಕ್ಷರಮಂತ್ರಶರೀರವಾಗಿ,
ಸರ್ವಾಂಗವೆಲ್ಲವು ಜ್ಞಾನ ಕಾಯ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ/110

ಷಡಕ್ಷರ ಮಂತ್ರ,  ಕುಂಡಲಿನಿ (ಶಿವ-ಶಕ್ತಿಯ) ವ್ಯಕ್ತ ರೂಪವಾಗಿದೆ. ಆದ್ದರಿಂದ ಮೂಲಾಧಾರದಲ್ಲಿ ಸುಪ್ತವಾಗಿದ್ದ ಕುಂಡಲಿನಿಯನ್ನು ಎಬ್ಬಿಸಿ ಸಹಸ್ರಾರದವರೆಗೆ ಅದನ್ನೊಯ್ದು ಅಲ್ಲಿ ಶಿವನೊಡನೆ ಸಂಯೋಗಗೊಳಿಸಲು ಮಂತ್ರವನ್ನು ಪ್ರಯೋಗಿಸುತ್ತಾರೆ. 'ಪಂಚಾಕ್ಷರಿ ಮಂತ್ರ' ದಲ್ಲಿರುವ ಐದು ಅಕ್ಷರಗಳು ಐದು ಚಕ್ರಗಳಲ್ಲಿ ಸಂಬಂಧಿತವಾಗಿರುತ್ತದೆ. ಆಧಾರದಲ್ಲಿ 'ನ' ಕಾರವು, ಸ್ವಾಧಿಷ್ಠಾನಚಕ್ರದಲ್ಲಿ ಮಃಕಾರ ,
ಮಣಿಪೂರಕಚಕ್ರದಲ್ಲಿ ಶಿಕಾರ ,
ಅನಾಹತಚಕ್ರದಲ್ಲಿ ವಾಕಾರ,.
ವಿಶುದ್ಧಿಚಕ್ರದಲ್ಲಿ ಯಕಾರ ಹೀಗೆ ಕ್ರಮವಾಗಿ ಸಂಬಂಧಿಸಲ್ಪಡುತ್ತದೆ, ಆಜ್ಞಾ ಚಕ್ರದಲ್ಲಿ ಓಂಕಾರ ಸಿದ್ಧಿ ಯಾದಾಗ ಅನೇಕ ಸಿದ್ಧಿಗಳು ಲಭಿಸುವವದಾದರೂ, ಶಿವಯೋಗದಲ್ಲಿ ಈ ಉದ್ದೇಶವೇ ಮುಖ್ಯವಾದುದಲ್ಲ. ಲಿಂಗಾಂಗ ಸಮರಸವೇ ಶಿವಯೋಗಿಯ ಉದ್ದೇಶ ವಾಗಿರುವುದರಿಂದ ಇದನ್ನು ಈಡೇರಿಸಿಕೊಳ್ಳುವದಕ್ಕಾಗಿ ಅವರ ಲಕ್ಷವು ಕೇಂದ್ರೀಕೃತವಾಗಿರುತ್ತದೆ. ಶಿವಯೋಗದಲ್ಲಿ ಲಿಂಗದಲ್ಲಿ ಧ್ಯಾನವನ್ನಿರಿಸಿ ಗೌಪ್ಯವಾಗಿ ಮಂತ್ರೋಚ್ಚಾರಣೆ ನಡೆಯುತ್ತದೆ.

*ಜಪ ವಿಧಾನಗಳು* :
 ವಾಚಕ , ಉಪಾಂಶು , ಮಾನಸಿಕ ಎಂದು ಮೂರು ವಿಧವಾಗಿದೆ. 
ಎಲ್ಲರಿಗೂ ಕೇಳುವಂತೆ ಒದರಿ ಮಂತ್ರೋಚ್ಚಾರ ಮಾಡುವುದು - ವಾಚಕ. ಇದು ಕೀರ್ತನೆ ಅಥವಾ ಭಜನೆಯಾಗುವದು. 
ತುಟಿಯನ್ನು ಮಾತ್ರ ಅಲ್ಲಾಡಿಸಿ ಮಂತ್ರ ಪಠಣ ಮಾಡುವುದು ಉಪಾಂಶು; 
ಕೇವಲ ಮನಸ್ಸಿನಲ್ಲಿಯೇ ಜಪಿಸುವುದು ಮಾನಸಿಕ ಜಪ ಎನಿಸುವದು.
ಮಾನಸಿಕ ಜಪವೇ ನಿಜವಾದ ಜಪ. ಮಂತ್ರ ಜಪದಲ್ಲಿ ಮನಃಪೂರ್ವಕವಾಗಿ ಮನದಲ್ಲಿ ನೆನೆಯುವುದೇ ಶ್ರೇಷ್ಠವಾದ ಜಪವಾಗಿದೆ.
 *ಮಂತ್ರ ಜಪ ಸಾಧಕನ ಅರ್ಹತೆ* :
ದಯವಿರಬೇಕು ಸಕಲ ಪ್ರಾಣಿಗಳಲ್ಲಿ, ಭಯವಿರಬೇಕು ಗುರು-ಹಿರಿಯರಲ್ಲಿ ಸೈಯವಿರಬೇಕು ಸಕಲ ಗುಣಗಳಲ್ಲಿ ಸಂಯಮನ ಸತ್ಯವಿರಬೇಕು ನುಡಿಗಡಣದಲ್ಲಿ; ಅಂಥವರು ಮಂತ್ರಯೋಗವನಾಚರಿಸಲು ಅರ್ಹರು.
ಮಂತ್ರಯೋಗದಲ್ಲಿ ಸರಿಯಾದ ಉಚ್ಚಾರಣೆ, ಪ್ರಾಣಾಯಾಮ ಅಳವಡಿಸಿಕೊಂಡರೆ ದೈಹಿಕ ಮಾನಸಿಕ ಆರೋಗ್ಯ ಸುಧಾರಿಕೆಯೂ  ಸಾಧ್ಯ. ಮಂತ್ರಯೋಗದ ಅನುಸಂಧಾನದಿಂದ ಶಾಂತಿ ಆನಂದಗಳು ಲಭಿಸುವವು, ಸಾಮರಸ್ಯ ಒಡೆಮೂಡುವುದು.
-✍️ Dr Prema Pangi
#ಪ್ರೇಮಾ_ಪಾಂಗಿ,
#ಶಿವಯೋಗ part-2

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma